ನಸೀರ್ಅಹ್ಮದ್ ಮಧ್ಯಪ್ರವೇಶ; ಉಪವಾಸ ಸತ್ಯಾಗ್ರಹ ಅಂತ್ಯ
ಅಮಾನತ್ಬ್ಯಾಂಕ್ ಅವ್ಯವಹಾರ ಪ್ರಕರಣ
ಬೆಂಗಳೂರು, ಮೇ 9: ಅಮಾನತ್ಬ್ಯಾಂಕ್ನಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ.ಅವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ಶರೀಫ್ ನೇತೃತ್ವದಲ್ಲಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯಗೊಂಡಿದೆ.
ಸೋಮವಾರ ಅಮಾನತ್ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ನಸೀರ್ಅಹ್ಮದ್ ಹಾಗೂ ನಾಲ್ವರು ನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಜಾಫರ್ಶರೀಫ್ ಸೇರಿದಂತೆ ಇನ್ನಿತರ ಮುಖಂಡರೊಂದಿಗೆ ಚರ್ಚೆ ನಡೆಸಿ ಅವರ ಮನ ವೊಲಿಸುವಲ್ಲಿ ಯಶಸ್ವಿಯಾದರು.
ಅಮಾನತ್ಬ್ಯಾಂಕ್ನ್ನು ಪುನರ್ ಆರಂಭ ಗೊಳಿಸಬೇಕು ಹಾಗೂ ಸಾಲ ಪಡೆದು ವಂಚನೆ ಮಾಡಿರುವವರಿಂದ ಬಾಕಿ ವಸೂಲು ಮಾಡಬೇಕೆಂಬುದು ನಮ್ಮ ಉದ್ದೇಶವು ಆಗಿದೆ. ನಮ್ಮ ಕೆಲಸಕ್ಕೆ ನಿಮ್ಮ ಸಹಕಾರವು ಇರಲಿ ಎಂದು ಪ್ರತಿಭಟನಾ ನಿರತರಿಗೆ ನಸೀರ್ಅಹ್ಮದ್ ಮನವಿ ಮಾಡಿದರು.
ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಒಪ್ಪಿಸುವ ಅಧಿಕಾರ ಸರಕಾರ ಹಾಗೂ ನ್ಯಾಯಾಲಯಕ್ಕೆ ಇದೆ. ಸಿಬಿಐ ತನಿಖೆಗೆ ನಾವೇನು ವಿರೋಧ ವ್ಯಕ್ತಪಡಿಸುತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಉಪವಾಸವನ್ನು ಹಿಂಪಡೆಯಿರಿ ಎಂದು ಎಂದು ಅವರು ಹೇಳಿದರು.
ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಸ್ಲಿಮ್ ಮುತ್ತಹಿದ ಮಹಝ್ನ ಸಂಚಾಲಕ ಮಸೂದ್ ಅಬ್ದುಲ್ಖಾದರ್, ನಸೀರ್ಅಹ್ಮದ್ ನೀಡಿರುವ ಭರವಸೆಯಿಂದಾಗಿ ತಾತ್ಕಾಲಿಕವಾಗಿ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದರು.
ನ್ಯಾಯಾಲಯಕ್ಕೆ ರಜೆ ಇರುವುದರಿಂದ ಇನ್ನೆರಡು ವಾರಗಳ ಕಾಲ ನಾವು ಸುಮ್ಮನಿರುತ್ತೇವೆ. ನ್ಯಾಯಾಲಯದ ಕಾರ್ಯಕಲಾಪಗಳು ಆರಂಭಗೊಂಡ ನಂತರ ಏನು ಬೆಳವಣಿಗೆಗಳು ನಡೆಯುತ್ತವೆ ಎಂಬುದನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಸಿಬಿಐ ತನಿಖೆಯ ಬೇಡಿಕೆಯಿಂದ ನಾವು ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯಲ್ಲ. ಒಂದು ವೇಳೆ ಬ್ಯಾಂಕ್ ಆಡಳಿತ ಮಂಡಳಿ ತನ್ನ ಭರವಸೆಯನ್ನು ಈಡೇರಿಸದಿದ್ದರೆ ಸಾರ್ವಜನಿಕರ ಸಹಕಾರದೊಂದಿಗೆ ಒಂದು ಬೃಹತ್ ಚಳವಳಿಯನ್ನು ರೂಪಿಸಲಾಗುವುದು ಎಂದು ಮಸೂದ್ ಅಬ್ದುಲ್ಖಾದರ್ ತಿಳಿಸಿದರು.
ಈ ಸಂದರ್ಭದಲ್ಲಿ ಟಿಪ್ಪುಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಷಿ, ಮುಸ್ಲಿಮ್ ಮುತ್ತಹಿದ ಮಹಝ್ನ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಇಕ್ಬಾಲ್, ಮುಖಂಡರಾದ ಅಮೀರ್ಜಾನ್, ಮುಹಮ್ಮದ್ ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು.
ಠೇವಣಿದಾರರು ಹಣಪಡೆಯಲು ನಿರ್ಬಂಧ ಹೇರಿರುವ ಆರ್ಬಿಐ ಧೋರಣೆಯನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ಠೇವಣಿದಾರರು ಈ ಸಂಬಂಧ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆ. ಅಮಾನತ್ ಬ್ಯಾಂಕ್ನ್ನು ಕೆನರಾ ಬ್ಯಾಂಕ್ ಜೊತೆ ವಿಲೀನಗೊಳಿಸದಂತೆ ಕೋರಿ ಜಾಫರ್ಶರೀಫ್ ಕೂಡ ಒಂದು ಪ್ರಕರಣ ದಾಖಲಿಸಿದ್ದಾರೆ.
ಇದರಿಂದಾಗಿ, ಅಮಾನತ್ಬ್ಯಾಂಕ್ ಆಡಳಿತ ಮಂಡಳಿ ಏನು ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿದೆ. ತಾವು ದಾಖಲಿಸಿರುವ ಪ್ರಕರಣವನ್ನು ಜಾಫರ್ಶರೀಫ್ ಹಿಂಪಡೆದರೆ ನಾವು ಆರ್ಬಿಐ ಜೊತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರವನ್ನು ಹುಡುಕಿಕೊಳ್ಳಬಹುದು.
- ನಸೀರ್ಅಹ್ಮದ್, ಅಧ್ಯಕ್ಷ, ಅಮಾನತ್ಬ್ಯಾಂಕ್ ಆಡಳಿತ ಮಂಡಳಿ







