ಮನಪಾ ಸದಸ್ಯೆ ಪ್ರತಿಭಾ ಕುಳಾಯಿಗೆ ಸಂಘಪರಿವಾರ ಕಾರ್ಯಕರ್ತರಿಂದ ಹಲ್ಲೆ : ಆರೋಪ
ಮಂಗಳೂರು, ಮೇ 10: ಕೋಡಿಕೆರೆ ಪ್ರದೇಶಕ್ಕೆ ಟ್ಯಾಂಕರ್ ನೀರು ಸರಬರಾಜಿಗೆ ಸಂಬಂಧಿಸಿದ ವಿಚಾರದಲ್ಲಿ ಸಂಘಪರಿವಾರದ ಕಾರ್ಯಕರ್ತರು ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಈ ಸಂದರ್ಭದಲ್ಲಿ ಅದೇ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮಹಿಳೆಯೊಬ್ಬರು ಪ್ರತಿಭಾ ಕುಳಾಯಿಯವರಿಗೆ ಹಲ್ಲೆ ನಡೆಸಿದ್ದಾರೆ.
ಇಂದು ಮುಂಜಾನೆ ಕುಳಾಯಿ ಪಂಪ್ಹೌಸ್ನಲ್ಲಿ ನೀರು ಸರಬರಾಜಿಗೆ ತೆರಳಲು ಸಿದ್ಧವಾಗಿದ್ದ ನೀರಿನ ಟ್ಯಾಂಕರನ್ನು ಸಂಘಪರಿವಾರದ ಕಾರ್ಯಕರ್ತರು ಅಡ್ಡಗಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ಸ್ಥಳಕ್ಕೆ ತೆರಳಿದಾಗ ಅಲ್ಲಿ ಟ್ಯಾಂಕರ್ ತಡೆದ ಸಂಘಪರಿವಾರದ ಕಾರ್ಯಕರ್ತರು ಕೋಡಿಕೆರೆ ಪ್ರದೇಶಕ್ಕೆ ನೀರು ಸರಬರಾಜು ಮಾಡದೆ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಎಲ್ಲ ಭಾಗಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವಂತೆ ಕೋಡಿಕೆರೆ ಪ್ರದೇಶಕ್ಕೂ ಮಾಡಲಾಗುತ್ತಿದೆ. ತಡೆದಿರುವ ನೀರಿನ ಟ್ಯಾಂಕರನ್ನು ಕೋಡಿಕೆರೆ ಪ್ರದೇಶಕ್ಕೆ ಕೊಂಡೊಯ್ಯುವಂತೆ ಪ್ರತಿಭಾ ಕುಳಾಯಿ ಸೂಚಿಸಿದರು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ಪ್ರತಿಭಾ ಕುಳಾಯಿ ಅವರ ಬಳಿ ಕುಟೀರ ಭಾಗ್ಯ ರದ್ದು ಮಾಡಿರುವ ಬಗ್ಗೆ ಪ್ರಸ್ತಾಪಿಸಿದರು. ಈ ವಿಚಾರದಲ್ಲಿ ಮಾತನಾಡಲು ಮನಪಾ ಕಚೇರಿಗೆ ಬರುವಂತೆ ಪ್ರತಿಭಾ ಕುಳಾಯಿ ಸೂಚಿಸಿದ್ದರು. ಇದೇ ಸಂದರ್ಭದಲ್ಲಿ ಹಿಂದಿನಿಂದ ಬಂದ ಮಹಿಳೆ ಸುನಂದಾಎಂಬವರು ತಮ್ಮ ಕೈಯಿಂದ ಪ್ರತಿಭಾ ಕುಳಾಯಿ ಅವರ ತಲೆಗೆ ಕೈಯಿಂದ ಹೊಡೆದು ದೈಹಿಕ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಕೆಲವರು ಹಲ್ಲೆ ನಡೆಸದಂತೆ ವಿನಂತಿಸಿದರೂ ಸಂಘಪರಿವಾರದ ಕಾರ್ಯಕರ್ತ ವಸಂತ ಸುರತ್ಕಲ್ ಎಂಬ ವ್ಯಕ್ತಿ ತನ್ನ ರಕ್ಷಣೆಗೆ ಬಂದವರಿಗೆ ಬೆದರಿಕೆಯೊಡ್ಡಿ ತನ್ನ ಮೇಲೆ ಹಲ್ಲೆ ನಡೆಸುವವರಿಗೆ ಪ್ರಚೋದನೆ ನೀಡಿದ್ದನು. ಮಾತ್ರವಲ್ಲದೆ ಇಡೀ ಘಟನೆಯನ್ನು ಚಿತ್ರೀಕರಣ ಮಾಡುತ್ತಿದ್ದ ಎಂದು ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರತಿಭಾ ಕುಳಾಯಿಯವರಿಗೆ ಸಂಘಪರಿವಾರದ ಕಾರ್ಯಕರ್ತರು ಕೋಡಿಕೆರೆ ಪ್ರದೇಶದಲ್ಲಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿತ್ತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸದಂತೆ ತಡೆಯೊಡ್ಡಿ ಹಲ್ಲೆಗೆ ಯತ್ನಿಸಿದ್ದರು. ಈ ನಡುವೆ ಸುನಂದಾ ಮನಪಾ ಸದಸ್ಯೆ ಪ್ರತಿಭಾ ಕುಳಾಯಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.
ಪ್ರತಿಭಾ ಕುಳಾಯಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಡಿಕೆರೆ ಪ್ರದೇಶಕ್ಕೆ ಯಾವುದೆ ತಾರತಮ್ಯವಿಲ್ಲದೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ಈ ಬಗ್ಗೆ ಕುಳಾಯಿ ಪಂಪ್ಹೌಸ್ನಲ್ಲಿರುವ ದಾಖಲೆಗಳನ್ನು ನೋಡಿದರೆ ತಿಳಿಯುತ್ತದೆ. ಆದರೆ ನೀರಿನ ವಿಚಾರವನ್ನು ಮುಂದಿಟ್ಟುಕೊಂಡು ಸಂಘಪರಿವಾರದ ಕಾರ್ಯಕರ್ತರು ವ್ಯವಸ್ಥಿತವಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೋಡಿಕೆರೆಯಲ್ಲಿ ಹಲ್ಲೆ ನಡೆಸಿದ ತಂಡವೇ ಈ ಬಾರಿ ಮತ್ತೆ ಹಲ್ಲೆ ನಡೆಸಿದೆ.
ಪ್ರತಿಭಾ ಕುಳಾಯಿ, ಮನಪಾ ಸದಸ್ಯೆ