ಪುತ್ತೂರು ನಗರಸಭೆಯ ಅಧ್ಯಕ್ಷೆ ‘ರಬ್ಬರ್’: ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಆರೋಪ
ಪುತ್ತೂರು, ಮೇ 10: ರಬ್ಬರ್ ಸ್ಟಾಂಪ್ ಅಲ್ಲ ಎನ್ನುವ ನಗರಸಭೆಯ ಅಧ್ಯಕ್ಷೆ ಯಾರೋ ಬರೆದು ಕೊಟ್ಟದ್ದನ್ನು ಪತ್ರಿಕೆಗಳಿಗೆ ನೀಡುತ್ತಾರೆ. ಅಧ್ಯಕ್ಷೆಯ ಪರವಾಗಿ ಯಾರ್ಯಾರೋ ಉತ್ತರ ಹೇಳುವ ಮಟ್ಟಕ್ಕೆ ಇಳಿದಿದ್ದಾರೆ. ಇದನ್ನೆಲ್ಲಾ ನೋಡುವಾಗ ಅಧ್ಯಕ್ಷೆ ರಬ್ಬರ್ ಸ್ಟಾಂಪ್ ಆಗಿರದೆ ಬರೇ ‘ರಬ್ಬರ್’ ಆಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಇಸಾಕ್ ಸಾಲ್ಮರ ಲೇವಡಿ ಮಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಾಹ್ನದ ಹೊತ್ತು ನಗರಸಭೆಯಲ್ಲಿ ಹೊರಗಿನ ವ್ಯಕ್ತಿಗಳು ಕಡತ ಪರಿಶೀಲನೆ ಮಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತೆಗೆ ಸೂಚನೆ ನೀಡಿದ್ದಾರೆ. ಆದರೆ ಕಡತಗಳನ್ನು ನೋಡಲು ಸಾರ್ವಜನಿಕರಿಗೆ ಅವಕಾಶವಿದೆ. ರಾಜಕೀಯ ಪಕ್ಷ ಅಥವಾ ಸಂಘಟನೆ ಕಾರ್ಯಕರ್ತರು ಕಚೇರಿಗೆ ಬರುವುದು ಸ್ವಾಭಾವಿಕ. ಆದರೆ ಕಚೇರಿ ಸಮಯ ಹೊರತು ಪಡಿಸಿ ಮೀಟಿಂಗ್ ನಡೆಸುವುದು ಯಾಕೆ? ಇದು ಸೀಕ್ರೆಟ್ ಅಜೆಂಡಾವಾ ಅಥವಾ ಡೀಲಿಂಗಾ? ಇದು ಯಾಕೆ ಸಿಸಿ ಕ್ಯಾಮರಾದಲ್ಲಿ ಕಾಣುತ್ತಿಲ್ಲ ಎಂದು ಪ್ರಶ್ನಿಸಿದರು.
ನಗರಸಭೆಯ ಅಧ್ಯಕ್ಷೆಗೆ ಬಾಡಿಗಾರ್ಡ್ ಆಗಿ ಮುಹಮ್ಮದ್ ಅಲಿ ಮತ್ತು ಶಕ್ತಿ ಸಿನ್ಹ ಅಕ್ಕಪಕ್ಕದಲ್ಲಿ ಇರುತ್ತಾರೆ. ಪ್ರತಿ ಬಾರಿ ಕಚೇರಿಗೆ ಹೋದರೂ ಅಕ್ಕ-ಪಕ್ಕದಲ್ಲಿ ಕುಳಿತಿರುತ್ತಾರೆ. ಹಿಂದಿನ ಆಡಳಿತದ ಸಂದಭರ್ ನಿರ್ಮಾಣಗೊಂಡ ಉಪ್ಪಿನಂಗಡಿ ಡ್ಯಾಮ್ ಕಾಮಗಾರಿ ಕಳಪೆ ಎಂದು ಆರೋಪಿಸಿದ್ದಾರೆ. ಸೂತ್ರಬೆಟ್ಟು ಜಗನ್ನಾಥ ರೈ ಅಧ್ಯಕ್ಷರಾಗಿದ್ದಾಗ ಕಾಮಗಾರಿ ಆರಂಗೊಂಡಿದ್ದು, ಸಾಲದ ಹೊರೆ ಎಂದು ಬೊಬ್ಬೆ ಹೊಡೆದಿದ್ದರು. ಆದರೆ ಇಂದು ಅದೇ ನೀರನ್ನು ಉಪಯೋಗಿಸುತ್ತಾರೆ. ಕಾಮಗಾರಿ ಪೂರ್ಣಗೊಂಡಿದ್ದರಿಂದ ನಗರಸಭೆಗೆ ಇಂದು ನೀರಿನ ಸಮಸ್ಯೆಯಾಗಿಲ್ಲ ಎಂದು ತಿಳಿಸಿದರು.
ಪೌರಾಯುಕ್ತೆ ವಿರುದ್ಧ ಜಿಲ್ಲಾಧಿಕಾರಿಗೆ 22 ದೂರು ನೀಡಲಾಗಿತ್ತು. ಆದರೆ ಜಯಂತಿ ಬಲ್ನಾಡ್ ಅಧ್ಯಕ್ಷರಾಗುತ್ತಿದ್ದಂತೆ ಸದಸ್ಯ ಮುಹಮ್ಮದ್ ಅಲಿ ರೇಖಾ ಜೆ. ಶೆಟ್ಟಿಯನ್ನು ಆಯುಕ್ತರೆಂದು ಕರೆಯುತ್ತಾರೆ. ಇಂತಹ ಬದಲಾವಣೆ ನಡೆಯುತ್ತದೆ ಎಂದರೆ ಜಿಲ್ಲಾಧಿಕಾರಿಗೆ ನೀಡಿದ 22 ದೂರುಗಳನ್ನು ಹಿಂಪಡೆಯಲಿ ಎಂದರು.
ನಗರಸಭೆಯಲ್ಲಿ ವಾಮಾಚಾರ ನಡೆಯುತ್ತಿದ್ದು, ಕಟ್ಟಡದ ಸುತ್ತ ಅಲ್ಲಲ್ಲಿ ಕುಂಕುಮ, ಲಿಂಬೆ, ತಗಡುಗಳು ಸಿಕ್ಕಿವೆ. ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಅಧ್ಯಕ್ಷರಾಗಿದ್ದಾಗ ಕಚೇರಿಯಲ್ಲೇ ತಗಡು ಸಿಕ್ಕಿತ್ತು. ಆದರೆ ಅದನ್ನು ಬಯಲು ಮಾಡಿಲ್ಲ. ಅದಾದ ಬಳಿಕ ಕಟ್ಟಡದ ಸುತ್ತಲು ಕುಂಕುಮ, ಲಿಂಬೆ, ತಗಡು ಸಿಕ್ಕಿವೆ. ಮುಹಮ್ಮದ್ ಅಲಿಯವರ ತಂಡದವರು ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಯೂಸುಫ್ ತಾರಿಗುಡ್ಡೆ, ನಗರಸಭೆ ಆಶ್ರಯ ಸಮಿತಿ ಸದಸ್ಯ ರಾಮಕೃಷ್ಣ ಕೇಪುಳು ಉಪಸ್ಥಿತರಿದ್ದರು.







