ಸುಳ್ಯ: ಅರೆಭಾಷೆಯ ಕಥಾ ಸಂಕಲನ ‘ಜೋನಿ ಬೆಲ್ಲ’ ಬಿಡುಗಡೆ

ಸುಳ್ಯ, ಮೇ 10: ಕುಂಞೀಟಿ ಶಿವರಾಮ ಗೌಡರು ಬರೆದ ಅರೆಭಾಷಾ ಕಥಾ ಸಂಕಲನ ‘ಜೋನಿಬೆಲ್ಲ’ ಕೃತಿಯು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಅರೆಭಾಷೆ ಸಾಂಸ್ಕೃತಿಕ ಮತ್ತು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಎನ್.ಎಸ್.ದೇವಿಪ್ರಸಾದ್ ಸಂಪಾಜೆ ಕೃತಿಯನ್ನು ಬಿಡುಗಡೆಗೊಳಿಸಿದರು.
ಸಬಾಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಮಾತನಾಡಿ, ಅರೆಭಾಷೆಗೂ ಇತಿಹಾಸವಿದೆ. ಅದನ್ನು ಕೃತಿಗಳ ಮೂಲಕ ಹೊರ ತರುವ ಕೆಲಸವಾಗಬೇಕೆಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಚಾಲಕ ತಳೂರು ಚಂದ್ರಶೇಖರ ಮಾತನಾಡಿ, ಭಾಷೆ ಎಲ್ಲರನ್ನು ಒಂದುಗೂಡಿಸುತ್ತದೆ. ತಮಿಳುನಾಡಿನವರು ಹಿಂದಿ ಭಾಷೆಯನ್ನು ವಿರೋಧಿಸಿ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿಕೊಂಡರು. ಬಾಷೆ ಹೇಗೆ ಸಂವಹನ ನಡೆಸುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದರು.
ಸಾಹಿತಿಗಳಾದ ವಿದ್ವಾನ್ ಟಿ.ಜಿ.ಮುಡೂರು, ಬೈತಡ್ಕ ಜಾನಕಿ ಬೆಳ್ಯಪ್ಪ, ಯು.ಸುಬ್ರಾಯ ಗೌಡ, ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಬೋಧ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಅಧ್ಯಕ್ಷೆ ಡಾ. ವೀಣಾ ಎನ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೋನಿಬೆಲ್ಲ ಕೃತಿಕಾರ ಕುಂಞೀಟಿ ಶಿವರಾಮ ಗೌಡ ವಂದಿಸಿದರು. ವಿಫುಲ್ಚಂದ್ರ ಕಾರ್ಯಕ್ರಮ ನಿರೂಪಿಸಿದರು.







