ಕಂದಾಯ ಇಲಾಖೆ ಒತ್ತಡದ ಕೆಲಸ: ಶಿವಪ್ರಸಾದ್
ಗ್ರಾಮ ಲೆಕ್ಕಾಧಿಕಾರಿಗಳ ಜಿಲ್ಲಾ ಸಮ್ಮೇಳನ

ಕಾರವಾರ, ಮೇ 10: ಎಲ್ಲ ಇಲಾಖೆಗೆ ಮಾತೃ ಇಲಾಖೆ ಎನಿಸಿರುವ ಕಂದಾಯ ಇಲಾಖೆಯ ನೌಕರರಾಗಿರುವ ಗ್ರಾಮ ಲೆಕ್ಕಾಧಿಕಾರಿಗಳು ಹೆಚ್ಚಿನ ಒತ್ತಡಗಳ ನಡುವೆ ಕೆಲಸ ನಿರ್ವಹಿಸಬೇಕಾದ ಸ್ಥಿತಿಯಿದೆ. ಸರಕಾರ ಜಾರಿಗೊಳಿಸುವ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಈ ನೌಕರರ ಪಾತ್ರ ಬಹುಮುಖ್ಯವಾದುದು ಎಂದು ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ವಿ. ಎಲ್. ಶಿವಪ್ರಸಾದ್ ಹೇಳಿದ್ದಾರೆ.
ಗರದ ಕನ್ನಡ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಹಮ್ಮಿಕೊಂಡಿದ್ದ ಗ್ರಾಮ ಲೆಕ್ಕಾಧಿಕಾರಿಗಳ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಲಾಖೆಯ ಕಾರ್ಯದೊತ್ತಡದ ಜೊತೆಗೆ ಬರ ನಿರ್ವಹಣೆ ಹಾಗೂ ಒ.ಟಿ.ಸಿ. ಗಣತಿಯ ಕಾರ್ಯಗಳಿಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಸಿಕೊಳ್ಳ ಲಾಗುತ್ತಿದೆ. ಇದರಿಂದ ನೌಕರರು ಹೆಚ್ಚಿನ ಒತ್ತಡದಿಂದ ಬಳಲುವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಸಂಘದ ಗೌರವಾಧ್ಯಕ್ಷ ಬಿ. ಪಿ. ಜಗನ್ನಾಥ ಮಾತನಾಡಿ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತಿದೆ. ಗ್ರಾಮಲೆಕ್ಕಾಧಿಕಾರಿಗಳಿಗೆ ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸಧೃಡ ಸಂಘಟನೆ ಆವಶ್ಯಕವಾಗಿರುವುದರಿಂದ ಸಂಘವನ್ನು ಹುಟ್ಟುಹಾಕಲಾಗಿದ್ದು ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಿಕೊಳ್ಳುವ ಅಗತ್ಯವಿದೆ ಎಂದರು. ಪ್ರಧಾನ ಕಾರ್ಯದರ್ಶಿ ವೈ.ಎಂ.ಜಗದೀಶ ಮಾತನಾಡಿ, ಕೆಲ ದಿನಗಳ ಹಿಂದಷ್ಟೆ ಪಿ.ಡಿ.ಒ.ಗಳನ್ನು ಕಂದಾಯ ಇಲಾಖೆಗೆ ನೇಮಕಗೊಳಿಸುವ ಕುರಿತು ಸರಕಾರ ಸುತ್ತೋಲೆ ಹೊರಡಿಸಿದಾಗ ಒಂದಾಗಿ ಹೋರಾಡಿದ ಇಲಾಖೆಯ ನೌಕರರ ಒಗ್ಗಟ್ಟಿನಿಂದ ಸುತ್ತೋಲೆ ವಾಪಸ್ ಪಡೆಯಲಾಗಿದೆ. ಇಂತಹ ಒಗ್ಗಟ್ಟು ನೌಕರರಿಗೆ ಸಮಸ್ಯೆ ಎದುರಾದಾಗಲೂ ಪ್ರದರ್ಶಿಸಬೇಕೆಂದರು.
ಗ್ರಾಮಲೆಕ್ಕಾಧಿಕಾರಿಗಳನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿರುವ ಧೋರಣೆ ಬಿಡಬೇಕೆಂದು ತಾಲೂಕು ಅಧ್ಯಕ್ಷ ಪಿ. ಡಿ. ಬಡಿಗೇರ ಸರಕಾರವನ್ನು ಒತ್ತಾಯಿಸಿದರು. ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಪರಸಪ್ಪ ಕೆ.ನಾಯಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಧರ ನಾಯ್ಕ ಸ್ವಾಗತಿಸಿದರು. ಟಿ.ಎಸ್. ಗಾಣಿಗೇರ ನಿರೂಪಿಸಿದರು. ಕರೀಷ್ಮಾ ಪ್ರಾರ್ಥಿಸಿದರು. ವೇದಿಕೆಯಲ್ಲಿ ಕಂದಾಯ ಇಲಾಖೆ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಸೋಮಶೇಖರ್, ಶಿವಮೊಗ್ಗ ಜಿಲ್ಲಾ ಘಟಕದ ಸುರೇಶ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಪದಾಧಿಕಾರಿಗಳ ನೇಮಕ: ಗ್ರಾಮ ಲೆಕ್ಕಾಧಿಕಾರಿಗಳ ಜಿಲ್ಲಾ ಸಮ್ಮೇಳನದಲ್ಲಿ ಉತ್ತರಕನ್ನಡ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು. ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಕುಮಟಾದ ಟಿ.ಎಸ್.ಗಾಣಿಗೇರ, ಪ್ರಧಾನ ಕಾರ್ಯದರ್ಶಿಯಾಗಿ ಕಾರವಾರದ ಶ್ರೀಧರ ನಾಯ್ಕ, ಉಪಾಧ್ಯಕ್ಷರಾಗಿ ಯಲ್ಲಾಪುರದ ಎಂ.ವಿ. ಜಾಡರ್, ಸಂಘಟನಾ ಕಾರ್ಯದರ್ಶಿಯಾಗಿ ಅಂಕೋಲಾದ ಶೈಲೇಶ ನಾಯ್ಕ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಕಾರವಾರದ ಸ್ಮಿತಾ ಪೋಕಳೆ, ಸಹ ಕಾರ್ಯದರ್ಶಿಯಾಗಿ ಹೊನ್ನಾವರದ ಎನ್. ಆರ್. ಭಟ್, ಖಜಾಂಚಿಯಾಗಿ ಅಂಕೋಲಾದ ಮೌಲ್ವಿ, ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿಯಾಗಿ ಶಿರಸಿಯ ಆರ್.ಎಂ. ನಾಯ್ಕರನ್ನು ನೇಮಕಗೊಳಿಸಿರುವುದಾಗಿ ರಾಜ್ಯ ಸಂಘದ ಗೌರವಾಧ್ಯಕ್ಷರು ಅಧೀಕೃತವಾಗಿ ಘೋಷಿಸಿದರು. ಅಲ್ಲದೆ ಕಾರವಾರ ಮತ್ತು ಅಂಕೋಲಾ ತಾಲೂಕು ಘಟಕಗಳಿಗೂ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ನೇಮಕ ಮಾಡಲಾಯಿತು.







