ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಅರ್ಜಿ ಹಾಗೂ ನಾಮನಿರ್ದೇಶನ ಆಹ್ವಾನ
ಮಂಗಳೂರು, ಮೇ 10: ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪತ್ರಕರ್ತರನ್ನು 2014 ಹಾಗೂ 2015ನೆ ರ್ಷಗಳ ತಲಾ 50 ಸಾವಿರ ನಗದು ಒಳಗೊಂಡ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಹಾಗೂ ಪತ್ರಿಕಾ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳಿಂದ ನಾಮ ನಿರ್ದೇಶನಗಳನ್ನು ಆಹ್ವಾನಿಸಿದೆ.
ವಾರ್ತಾ ಇಲಾಖೆಯ ನಿರ್ದೇಶಕರ ಅಧ್ಯಕ್ಷತೆಯಲ್ಲಿನ ಪರಿಣಿತರನ್ನೊಳಗೊಂಡ ತ್ರಿ ಸದಸ್ಯ ಸಮಿತಿಯು ಈ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲಿದೆ. ಪ್ರಶಸ್ತಿಗೆ ನಾಮನಿರ್ದೇಶನ ಸಲ್ಲಿಸುವವರು ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರಬೇಕು. ಅಲ್ಲದೆ, ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮಕ್ಕೆ ವಿಶೇಷ ಕೊಡುಗೆ ನೀಡಿರಬೇಕು.
ಅಭಿವೃದ್ದಿ ಪ್ರಶಸ್ತಿ
ಅಭಿವೃದ್ದಿಗೆ ರಾಜ್ಯದಲ್ಲೆಡೆ ಉತ್ತಮ ವಾತಾವರಣ ಕಲ್ಪಿಸಲು ಅನುವಾಗುವಂತೆ ಅಭಿವೃದ್ಧಿಗೆ ಪೂರಕವಾದ ಲೇಖನಗಳನ್ನು ಬರೆದು ಅಭಿವೃದ್ಧಿ ಪ್ರಕ್ರಿಯೆಗೆ ಪುಷ್ಟಿ ನೀಡಿ ಸಮಾಜಕ್ಕೆ ಉಪಕರಿಸುವ ಪತ್ರಕರ್ತರಿಗೆ 50 ಸಾವಿರ ರೂ. ನಗದು ಒಳಗೊಂಡ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
ಪರಿಸರ ಪ್ರಶಸ್ತಿ
ಪರಿಸರ ಸಂರಕ್ಷಣೆ ಕುರಿತು ಪೂರಕ ಲೇಖನಗಳನ್ನು ಬರೆದು ರಾಜ್ಯದಲ್ಲಿನ ಪರಿಸರ ಪ್ರಕೃತಿ ಹಾಗೂ ನಿಸರ್ಗದ ಸಮತೋಲನ ಕಾಯ್ದುಕೊಳ್ಳಲು ನೆರವಾಗಿರುವ ಪತ್ರಕರ್ತರಿಗೆ 50 ಸಾವಿರ ನಗದು ಒಳಗೊಂಡ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
ಮೊಬೈಲ್ ಸಂಖ್ಯೆ ಒಳಗೊಂಡಂತೆ ಸಂಪರ್ಕ ವಿಳಾಸದೊಂದಿಗೆ ಸ್ವವಿವರಗಳು ಹಾಗೂ ಮಾಡಿರುವ ಸಾಧನೆಗಳ ವಿವರಣಗಳನ್ನು ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ಸಂಖ್ಯೆ 17, ಭಗವಾನ್ ಮಹಾವೀರ ರಸ್ತೆ ಬೆಂಗಳೂರು-560001 ಇಲ್ಲಿಗೆ ಮೇ 25ರೊಳಗಾಗಿ ಸಲ್ಲಿಸಬಹುದು.
ಅರ್ಜಿಯೊಂದಿಗೆ ತಮ್ಮ ವಿಶೇಷ ಸಾಧನೆಯನ್ನು ಸಮರ್ಥಿಸಲು ತಮ್ಮ ಪ್ರಕಟಿತ ವಿಶೇಷ ಲೇಖನಗಳು, ಲೇಖನ ಮಾಲೆಗಳ ಪತ್ರಿಕಾ ತುಣುಕುಗಳು ಅಥವಾ ಪ್ರಕಟಿತ ಪುಸ್ತಕಗಳ ಪ್ರತಿಗಳು ಈಗಾಗಲೇ ಪಡೆದಿರುವ ಗೌರವಗಳ ದಾಖಲೆಗಳನ್ನು ಸಲ್ಲಿಸಬೇಕು ಎಂದು ಪ್ರಕಟನೆ ತಿಳಿಸಿದೆ.







