ಮೇ 28,29ರಂದು ಪುತ್ತೂರಿನಲ್ಲಿ ಅಂತರ್ ಜಿಲ್ಲಾಮಟ್ಟದ ಮುಕ್ತ ಚೆಸ್ ಸ್ಪರ್ಧೆ
ಪುತ್ತೂರು, ಮೇ 10: ಪುತ್ತೂರು ಚೆಸ್ ಅಕಾಡೆಮಿ ವತಿಯಿಂದ 5ನೆ ಅಂತರ್ಜಿಲ್ಲಾ ಮಟ್ಟದ ಮುಕ್ತ ಚೆಸ್ ಸ್ಪರ್ಧೆ ಮೇ 28, 9ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಪುತ್ತೂರು ಚೆಸ್ ಅಕಾಡೆಮಿ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಆರಂಭವಾದ ಚೆಸ್ ಪಂದ್ಯಾಟ ಇಲ್ಲಿಯವರೆಗೆ ಒಟ್ಟು 4 ಟೂರ್ನ್ಮೆಂಟ್ ಆಯೋಜಿಸಿದೆ. ಇದೀಗ 5ನೆ ಟೂರ್ನಮೆಂಟ್ ಆಯೋಜಿಸಿದ್ದು, ಮಂಗಳೂರು, ಉಡುಪಿ, ಕೊಡಗು, ಕಾಸರಗೋಡು ಜಿಲ್ಲೆಯ ಸ್ಪರ್ಧಾಳುಗಳು ಬಾಗವಹಿಸಲಿದ್ದಾರೆ. ಜೀನಿಯಸ್ ಚೆಸ್ ಸ್ಕೂಲ್ನ ಸತ್ಯಪ್ರಸಾದ್ ಕೋಟೆ ಉದ್ಘಾಟಿಸಲಿದ್ದಾರೆ. ಮೇ 29ರಂದು ಸಂಜೆ ನಡೆಯುವ ಸಮಾರೋಪದಲ್ಲಿ ಬಹುಮಾನ ವಿತರಿಸಲಾಗುವುದು. ಸ್ವರ್ಣೋದ್ಯಮಿ ಕೃಷ್ಣ ನಾರಾಯಣ ಮುಳಿಯ ಅತಿಥಿಯಾಗಿರುವರು ಎಂದು ಹೇಳಿದರು.
7, 9, 11, 13, 15 ವರ್ಷಕ್ಕಿಂತ ಕೆಳಗಿನ ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ 5 ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ಮುಕ್ತ ವಿಭಾಗದಲ್ಲಿ 5 ಟ್ರೋಫಿ ಮತ್ತು ನಗದು ಬಹುಮಾನ ನೀಡಲಾಗುವುದು. ಸಮಗ್ರ ಪ್ರಶಸ್ತಿಯಾಗಿ ಪ್ರಥಮ 3 ಸಾವಿರ ರೂ., ದ್ವಿತೀಯ 2 ಸಾವಿರ ರೂ., ತೃತೀಯ 1 ಸಾವಿರ ರೂ. ಬಹುಮಾನ ನೀಡಲಾಗುವುದು. ಒಟ್ಟು 58 ಟ್ರೋಫಿ ಮತ್ತು 45 ಸಾವಿರ ರೂ. ನಗದು ಬಹುಮಾನ ವಿತರಣೆಯಾಗಲಿದೆ. ಸ್ಪರ್ಧೆಗೆ ಪ್ರವೇಶ ಶುಲ್ಕ 500 ರೂ. ಪಾವತಿಸಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ಚೆಸ್ ಅಕಾಡೆಮಿ ಕಾರ್ಯದರ್ಶಿ ಸತ್ಯನಾರಾಯಣ ಕೋಟೆ, ಉಪಾಧ್ಯಕ್ಷ ಜಯರಾಮ ಗೌಡ ಎಚ್, ಖಜಾಂಚಿ ಉಮಾ ಡಿ. ಪ್ರಸನ್ನ ಉಪಸ್ಥಿತರಿದ್ದರು.