ಲೋಕಪಾಲ ನೇಮಕಕ್ಕೆ ವಿಳಂಬವೇಕೆ?
ಸರಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
ಹೊಸದಿಲ್ಲಿ, ಮೇ 10: ಎರಡು ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದ್ದರೂ, ಲೋಕಪಾಲ ಅಥವಾ ಭ್ರಷ್ಟಾಚಾರ ವಿರೋಧಿ ಒಂಬಡ್ಸ್ಮನ್ ನೇಮಕಕ್ಕೆ ವಿಳಂಬವೇಕೆಂದು ಸುಪ್ರೀಂಕೋರ್ಟ್ ಇಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.
ಲೋಕಪಾಲರನ್ನು ನೇಮಿಸಲು ಸರಕಾರಕ್ಕೇನಾದರೂ ಸಮಸ್ಯೆಯಿದೆಯೇ? ಎಂದು ಮುಖ್ಯ ನ್ಯಾಯಮೂರ್ತಿ ಟಿ.ಆರ್. ಠಾಕೂರ್ನೇತೃತ್ವದ ಪೀಠವೊಂದು ಸರಕಾರದ ಪರ ವಕೀಲರನ್ನು ಕೇಳಿತು. ವಕೀಲರು ಉತ್ತರಿಸಲು ಸಮಯಾವಕಾಶ ಯಾಚಿಸಿದರು.
‘‘ಇದುವರೆಗೆ ನೀವೇಕೇ ಯಾರನ್ನೂ ನೇಮಿಸಿಲ್ಲ? ಇಷ್ಟೊಂದು ವಿಳಂಬವೇಕೆ? ಕಾಯ್ದೆಗೆ ರಾಷ್ಟ್ರಪತಿಯ ಅನುಮೋದನೆ ದೊರೆತಿರುವಾಗ ನಿಮ್ಮನ್ನು ತಡೆಯುತ್ತಿರುವುದೇನು? ನೀವದರ ಮೇಲೆ ಕುಳಿತುಕೊಳ್ಳುವಂತಿಲ್ಲ’’ ಎಂದು ಪೀಠವು ಅಟಾರ್ನಿ ಜನರಲ್ ಮುಕುಲ್ ರೊಹಟ್ಗಿಯವರಿಗೆ ಹೇಳಿತು.
ನೇಮಕಾತಿಯ ಬಗ್ಗೆ ಸರಕಾರವು ತನ್ನ ಕಾಲನ್ನೆಳೆಯುತ್ತಿದೆಯೆಂದು ಆರೋಪಿಸಿ, ಕಾಮನ್ ಕಾಸ್ ಎಂಬ ಸರಕಾರೇತರ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದೂರಿನ ವಿಚಾರಣೆಯನ್ನು ಪೀಠ ನಡೆಸುತ್ತಿತ್ತು.
ಲೋಕಸಭೆಯ ವಿಪಕ್ಷ ನಾಯಕನಿಲ್ಲದೆ ಲೋಕಪಾಲರನ್ನು ನೇಮಿಸುವಂತ್ತಿಲ್ಲವೆಂದು ನಿಲುವನ್ನು ಸರಕಾರ ತಳೆದಿದೆ. ಸಂಸತ್ತಿನಲ್ಲಿ ವಿಪಕ್ಷ ನಾಯಕನಿಲ್ಲದಿರುವುದರಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿರ್ಣಾಯಕವಾಗಿರುವ ನೇಮಕಾತಿಯನ್ನು ತಡೆ ಹಿಡಿದಿದೆಯೆಂದು ದೂರುದಾರರ ಪರ ವಕೀಲ ಪ್ರಶಾಂತ ಭೂಷಣ್ ಪ್ರತಿಪಾದಿಸಿದರು.







