ಸ್ವಸಹಾಯ ಗುಂಪುಗಳಿಗೆ ಶೇ.4ರ ಬಡ್ಡಿದರದಲ್ಲಿ ಸಾಲ: ಡಾ.ರಾಜೇಂದ್ರ ಕುಮಾರ್
ಕೊಕ್ಕರ್ಣೆ: ಎಸ್ಸಿಡಿಸಿಸಿಯ 101ನೆ ಶಾಖೆ ಉದ್ಘಾಟನೆ
ಕೊಕ್ಕರ್ಣೆ, ಮೇ 10: ಈಗಾಗಲೇ ಇರುವ ಹಾಗೂ ಇನ್ನು ಮುಂದೆ ಆರಂಭಗೊಳ್ಳುವ ಎಲ್ಲಾ ನವೋದಯ ಸ್ವಸಹಾಯ ಗುಂಪುಗಳಿಗೆ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲು ಬ್ಯಾಂಕ್ ಬದ್ಧವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದ್ದಾರೆ.
ಇಲ್ಲಿನ ಪೆಜಮಂಗೂರು ಗ್ರಾಮದಲ್ಲಿ ಮಂಗಳವಾರ ನಡೆದ ಬ್ಯಾಂಕ್ನ 101ನೆ ಕೊಕ್ಕರ್ಣೆ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 23 ವರ್ಷಗಳ ಹಿಂದೆ ತಾನು ಬ್ಯಾಂಕ್ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸಿದಾಗ ಬ್ಯಾಂಕಿನ ಠೇವಣಿ 62 ಕೋಟಿ ರೂ. ಹಾಗೂ ಸಾಲ 46 ಕೋಟಿ ರೂ.ಗಳಿದ್ದು, ಅದೀಗ ಕ್ರಮವಾಗಿ 3,100 ಕೋಟಿ ರೂ. ಹಾಗೂ 2,000 ಕೋಟಿ ರೂ.ಗಳಿಗೆ ಏರಿದೆ. ಬ್ಯಾಂಕ್ ಇಷ್ಟೊಂದು ಪ್ರಗತಿ ಸಾಧಿಸಲು ಸಿಬ್ಬಂದಿ ಸೇರಿದಂತೆ ಎಲ್ಲರ ಸಹಕಾರವೇ ಕಾರಣ ಎಂದವರು ನುಡಿದರು.
ಕೊಕ್ಕರ್ಣೆಯ ಶಾಖೆ ಆರಂಭಗೊಳ್ಳುವಾಗಲೇ 1,600 ಖಾತೆಗಳು ಹಾಗೂ 9 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಈ ಊರಿನ ಅಭಿವೃದ್ಧಿಗೆ, ಬೆಳವಣಿಗೆಗೆ ಸಂಸ್ಥೆ ಸದಾ ಸಿದ್ಧವಿದೆ. ಇಲ್ಲಿ ಉದ್ಯಮ ಆರಂಭಿಸಲು ನೆರವು ನೀಡುತ್ತೇವೆ ಎಂದ ರಾಜೇಂದ್ರ ಕುಮಾರ್, ಶೀಘ್ರದಲ್ಲೇ ನಾಲ್ಕೂರು ಗ್ರಾಮದ ಮುದ್ದೂರಿನಲ್ಲೂ ಒಂದು ಶಾಖೆ ಆರಂಭಿಸಲಾಗುವುದು ಎಂದರು.
ಶಾಖೆಯನ್ನು ಹಾಗೂ ಶಾಖೆಯ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಮಾತನಾಡಿ, ಇಂದು ಕುಟುಂಬವೊಂದು ಸ್ವಾವಲಂಬಿಯಾಗುವಲ್ಲಿ ಮಹಿಳೆಯ ಪ್ರಾಮಾಣಿಕತೆ, ಉಳಿತಾಯ ಮನೋಧರ್ಮ ಪ್ರಮುಖ ಕಾರಣವಾಗಿದೆ ಎಂದರು.
ಇದೇ ಸಂದರ್ಭದಲ್ಲಿ 18 ಹೊಸ ನವೋದಯ ಸಂಘಗಳನ್ನು ಉದ್ಘಾಟಿಸಲಾಯಿತು. ಅಲ್ಲದೇ ಪ್ರಥಮ ಉಳಿತಾಯ ಖಾತೆದಾರರಿಗೆ, ಸಂಚಯ ಖಾತೆದಾರರಿಗೆ ಪಾಸ್ ಪುಸ್ತಕಗಳನ್ನು, ಸಾಲಪತ್ರ ಲಾಕರ್ ಕೀಗಳನ್ನು ವಿತರಿಸಲಾಯಿತು. ನಿರಖು ಠೇವಣಿ ಹಾಗೂ ಸಂಚಯ ಖಾತೆದಾರರ ಲಕ್ಕಿ ಡ್ರಾ ಮೂಲಕ ಅದೃಷ್ಟಶಾಲಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಕಸ್ಮಿಕವಾಗಿ ಮೃತಪಟ್ಟ ನವೋದಯ ಸಂಘದ ವ್ಯಾಸರಾಯ ಆಚಾರ್ಯ ಹಾಗೂ ನಿತ್ಯಾನಂದ ನಾಯಕ್ರ ಕುಟುಂಬಕ್ಕೆ ಒಂದು ಲಕ್ಷ ರೂ.ನ ಚೆಕ್ಗಳನ್ನು ವಿತರಿಸಲಾಯಿತು. ಅಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾದ ಇಬ್ಬರಿಗೆ ತಲಾ 50,000 ರೂ.ಗಳ ಪರಿಹಾರ ಮೊತ್ತವನ್ನು ರಾಜೇಂದ್ರ ಕುಮಾರ್ ಘೋಷಿಸಿದರು.
ಶಾಖೆಯ ಗಣಕೀರಣವನ್ನು ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಅಶೋಕ ಕುಮಾರ್ ಶೆಟ್ಟಿ ಕರ್ಜೆ ಮೈರ್ಮಾಡಿ ಉದ್ಘಾಟಿಸಿದರು. ಸಮಾರಂಭದಲ್ಲಿ ಸೂರಾರು ಅರಮನೆಯ ಸಂತೋಷ್ ಕುಮಾರ್ ಸಿ., ಜಿಪಂ ಸದಸ್ಯ ಸುಧಾಕರ ಶೆಟ್ಟಿ ಮೈರ್ಮಾಡಿ, ತಾಪಂ ಸದಸ್ಯರಾದ ಡಾ.ಸುನೀತಾ ಡಿ.ಶೆಟ್ಟಿ, ಕೆ.ಭುಜಂಗ ಶೆಟ್ಟಿ, ಕಟ್ಟಡದ ಮಾಲಕರಾದ ಬಿ.ಕರುಣಾಕರ ಶೆಟ್ಟಿ ಬಿಲ್ಲಾಡಿ, ತಿಮ್ಮಪ್ಪ ಶೆಟ್ಟಿ, ಪ್ರದೀಪ್ ಬಲ್ಲಾಳ್, ಗಂಗಾಧರ ಶೆಟ್ಟಿ, ಮಲ್ಯಾಡಿ ಮೋಹನದಾಸ ಶೆಟ್ಟಿ, ಬ್ಯಾಂಕ್ ನಿರ್ದೇಶಕ ಎಸ್.ರಾಜು ಪೂಜಾರಿ ಉಪಸ್ಥಿತರಿದ್ದರು.
ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕ ಕಿಶನ್ ಹೆಗ್ಡೆ ಕೊಳ್ಕೆಬೈಲು ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್ ಎಂ. ವಂದಿಸಿದರು. ವಿಜಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.