ಪ್ರಥಮ ಮಳೆಗೆ ಬಸ್-ಕಾರು ಢಿಕ್ಕಿ: ಐವರಿಗೆ ಗಾಯ
ಕಡಬ ಪರಿಸರದಲ್ಲಿ ಭಾರೀ ಗಾಳಿ, ಮಳೆ
ಕಡಬ, ಮೇ11. ಪರಿಸರದಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಸುಮಾರು 30ಕ್ಕಿಂತಲೂ ಅಧಿಕ ವಿದ್ಯುತ್ ಕಂಬಗಳು ಸೇರಿದಂತೆ 10ಕ್ಕಿಂತಲೂ ಅಧಿಕ ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ನಡೆದಿದೆ.
ರಸ್ತೆಗೆ ಅಡ್ಡವಾಗಿ ಮರಗಳು ಹಾಗೂ ಕಂಬಗಳು ಬಿದ್ದಿದ್ದರಿಂದ ರಸ್ತೆಯ ಇಕ್ಕೆಲಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪರಿಸರದ ಕೊಲ, ಆಲಂಕಾರು, ಕುಂತೂರು, ಕೋಡಿಂಬಾಳ, ಇಚಿಲಂಪಾಡಿ, ಬಿಳಿನೆಲೆ, ನೆಟ್ಟಣ, ಕೈಕಂಬ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಇಳೆಗೆ ಈ ಮಳೆಯು ತಂಪೆರೆಯಿತು. ಕಡಬದಲ್ಲಿ ಗುಡುಗು-ಮಿಂಚಿನ ಆರ್ಭಟದೊಂದಿಗೆ ಸಾಧಾರಾಣ ಮಳೆಯಾಗಿದೆ. ಆತೂರು ಸಮೀಪದ ಕುಂಡಾಜೆ ಎಂಬಲ್ಲಿ ಮೂರು ಮರಗಳು ಧರಾಶಾಹಿಯಾಗಿವೆ.
ಸಂಜೆ ಪ್ರಾರಂವಾದ ಮಳೆಯಲ್ಲಿ ಕೈಕಂಬ ಸಮೀಪ ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಢಿಕ್ಕಿ ಸಂಭವಿಸಿ ಐವರಿಗೆ ಗಾಯವಾದ ಘಟನೆಯೂ ನಡೆಯಿತು.
ಬೆಂಗಳೂರು ಮೂಲದ ಕುಟುಂಬವೊಂದು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನವನ್ನು ಮುಗಿಸಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಕೈಕಂಬ ಎಂಬಲ್ಲಿ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಬಸ್ನ ನಡುವೆ ತಿರುವಿನಲ್ಲಿ ಅಪಘಾತ ಸಂಭವಿಸಿತು. ಕಾರಿನಲ್ಲಿದ್ದ ಐವರಿಗೂ ಗಾಯಗಳಾಗಿದ್ದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಸಂದರ್ಭ ಕಡಬ ಆಸ್ಪತ್ರೆಯ ವೈದ್ಯಾಧಿಕಾರಿ ಸ್ಥಳದಲ್ಲಿ ಇಲ್ಲದಿದ್ದುದರಿಂದಾಗಿ ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಗೆ ವರ್ಗಾವಣೆಗೊಂಡಿರುವ ಡಾ. ತ್ರಿಮೂರ್ತಿ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡುವಲ್ಲಿ ಸಹಕರಿಸಿದರು.
ಮರಗಳು ಬಿದ್ದು ರಸ್ತೆ ತಡೆ ಉಂಟಾದುದರಿಂದ ಅಪಘಾತ ನಡೆದ ಸ್ಥಳದಿಂದ ಸುಮಾರು 10 ಕಿ.ಮೀ. ದೂರದಲ್ಲಿ ನಿಂತಿದ್ದ108 ಆಂಬ್ಯುಲೆನ್ಸ್ವರೆಗೆ ಕೆಲವು ಮರಗಳನ್ನು ಕಡಿದು ರಸ್ತೆ ತೆರವುಗೊಳಿಸಿ ಒಳದಾರಿಯ ಮೂಲಕ ತನ್ನ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ ಬಿಳಿನೆಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾದರು.