ನೇತ್ರಾವತಿ ಸ್ನಾನಘಟ್ಟದಲ್ಲಿ ನೀರಿನ ಪ್ರಮಾಣ ಇಳಿಕೆ: ಗ್ರಾ.ಪಂ.ನಿಂದ ಪರಿಶೀಲನೆ

ಬೆಳ್ತಂಗಡಿ, ಮೇ 11: ನೇತ್ರಾವತಿ ನದಿಯಲ್ಲಿ ನೀರು ಕಡಿಮೆಯಾಗುತ್ತಾ ಬರುತ್ತಿದ್ದು ಯಾತ್ರಾರ್ಥಿಗಳಿಗೆ ತೀರ್ಥಸ್ನಾನಕ್ಕೆ ತೊಂದರೆಯಾಗುತ್ತಿರುವುದರೊಂದಿಗೆ ನದಿಯ ಮೀನುಗಳು ಹಾಗೂ ಜಲಚರಗಳಿಗೂ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಸ್ಥಳ ಗ್ರಾ.ಪಂ. ವತಿಯಿಂದ ನೇತ್ರಾವತಿ ನದಿ ವೀಕ್ಷಣೆ ಕಾರ್ಯಕ್ರಮ ಬುಧವಾರ ಕ್ಷೇತ್ರದ ನೇತ್ರಾವತಿ ಸ್ನಾನಘಟ್ಟದಲ್ಲಿ ನಡೆಯಿತು.
ಸ್ನಾನಘಟ್ಟಕ್ಕೆ ಪ್ರತಿದಿನ 10 ರಿಂದ 15 ಸಾವಿರ ಭಕ್ತರು ಸ್ನಾನ ಮಾಡಲು ಬರುತ್ತಾರೆ. ವಿಶೇಷ ದಿನಗಳಲ್ಲಿ ಇದು ತುಂಬಾ ಹೆಚ್ಚಾಗಿರುತ್ತದೆ. ಇಲ್ಲಿರುವ ವೆಂಟೆಡ್ ಡ್ಯಾಂನಿಂದಾಗಿ ಅಂತರ್ಜಲ ಹೆಚ್ಚಾಗಿದೆ. ಆದರೆ ಈಗಿನ ಸನ್ನಿವೇಶದಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ನೀರಿನ ಕೊರತೆ ಕಂಡು ಬರುತ್ತಿದೆ. ಆದರೂ ಕ್ಷೇತ್ರ ಮತ್ತು ಪಂಚಾಯತ್ ಆಡಳಿತ ಒಟ್ಟಾಗಿ ಭಕ್ತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತಿದೆ.
ನೀರಿನ ಮಿತಬಳಕೆಯ ಬಗ್ಗೆ ಜನರಿಗೆ ತಿಳುವಳಿಕೆ ನೀಡುತ್ತಿದೆ. ಎಸ್ಡಿಎಂ ಕಾಲೇಜಿನ ಎನ್ನೆಸ್ಸೆಸ್ ಹಾಗೂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಪ್ರತಿ ರವಿವಾರ ಮತ್ತು ಸೋಮವಾರ ಯಾತ್ರಿಕರಿಗೆ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ.
ಪಂಚಾಯತ್ ವ್ಯಾಪ್ತಿಯಲ್ಲಿ ಇನ್ನು ಹೊಸ ಮನೆ ಮಂಜೂರು ಮಾಡುವಾಗ ಕಡ್ಡಾಯವಾಗಿ ಇಂಗು ಗುಂಡಿ, ಮಳೆಕೊಯ್ಲು ಮಾಡಲು ಸೂಚಿಸಲಾಗುವುದು. ಕೊರತೆಯ ನಡುವೆಯೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ, ಇದೇ ಸ್ಥಿತಿ ಮುಂದುವರಿದರೆ ಕುಡಿಯುವ ನೀರಿಗೂ ತೊಂದರೆ ಎದುರಾಗಲಿದೆ ಮುಂದಿನ ದಿನಗಳಲ್ಲಿ ನದಿಯಲ್ಲಿನ ಕಿಂಡಿ ಅಣೆಕಟ್ಟಿನಲ್ಲಿ ಹೂಳು ತೆಗೆದು ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ಚಿಂತಿಸಲಾಗಿದೆ ಎಂದು ಗ್ರಾ.ಪಂ. ಆಡಳಿತ ವಿವರಿಸಿದೆ.
ಕ್ಷೇತ್ರಕ್ಕೆ ನೇತ್ರಾವತಿ ನದಿಯೇ ಜೀವಾಳ. ಅಲ್ಲದೆ ತಾಲೂಕಿನ ಲಕ್ಷಾಂತರ ಮಂದಿ ಇದನ್ನು ನಂಬಿ ಜೀವನ ಮಾಡುತ್ತಿದ್ದಾರೆ. ಹೀಗಾಗಿ ನೇತ್ರಾವತಿ ತಿರುವು ಯೋಜನೆಯನ್ನು ಪಂಚಾಯತ್ ಆಡಳಿತ ತೀವ್ರವಾಗಿ ವಿರೋಧಿಸಿದೆಯಲ್ಲದೆ ಈ ಬಗ್ಗೆ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಿದೆ. ಅಲ್ಲದೆ ಮೇ 19 ರಂದು ನಡೆಯುವ ತಾಲೂಕು ಬಂದ್ಗೆ ಸದಸ್ಯರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ ಎಂದು ಆಡಳಿತ ವಿವರಿಸಿದೆ.
ವೀಕ್ಷಣೆಯ ಸಂದರ್ಭ ಗ್ರಾಪಂ ಅಧ್ಯಕ್ಷ ಅಚ್ಯುತ ಪೂಜಾರಿ, ಜಿಪಂ ಸದಸ್ಯ ಕೊರಗಪ್ಪ ನಾಯ್ಕಾ, ತಾಪಂ ಸದಸ್ಯೆ ಧನಲಕ್ಷ್ಮೀ ಜನಾರ್ಧನ್, ದೇವಳ ವ್ಯವಸ್ಥಾಪಕ ಹರೀಶ್ ರಾವ್, ಪಿಡಿಒ ಉಮೇಶ್ ಕೆ., ಸದಸ್ಯರಾದ ಶ್ರೀನಿವಾಸ ರಾವ್, ಪ್ರಭಾಕರ ಪೂಜಾರಿ, ಸುಧಾಕರ ಗೌಡ, ಸಿದ್ಧಿಕ್, ದೇವಸ್ಯ ಟಿ.ವಿ., ಲಕ್ಷ್ಮೀ ಭಟ್, ರೀನಾ ಶಿಬಿ, ರವಿಜ ಎಸ್. ರಾವ್., ಹೊನ್ನಮ್ಮ, ಪ್ರೇಮಾ, ಸಿಬ್ಬಂದಿ ದೇವಿಪ್ರಸಾದ್ ಬೊಳ್ಮ ಮತ್ತು ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.







