ಬರದಿಂದ ದೇಶಕ್ಕೆ 6.50 ಲಕ್ಷ ಕೋಟಿ ರೂ. ನಷ್ಟ
* ಕರ್ನಾಟಕ ಸಹಿತ 10 ರಾಜ್ಯಗಳಲ್ಲಿ ಬರ ಪರಿಸ್ಥಿತಿ ಗಂಭೀರ * 256 ಜಿಲ್ಲೆಗಳ 33 ಕೋಟಿ ಜನರು ಬಾಧಿತ

ಹೊಸದಿಲ್ಲಿ,ಮೇ 11: ಬರಪರಿಸ್ಥಿತಿಯು ಹತ್ತು ರಾಜ್ಯಗಳಲ್ಲಿ ಅತ್ಯಂತ ಗಂಭೀರವಾಗಿದ್ದು, ದೇಶದ ಆರ್ಥಿಕತೆಗೆ ಕನಿಷ್ಠ 6.50 ಲಕ್ಷ ಕೋಟಿ ನಷ್ಟವಾಗಿದೆಯೆಂದು ಭಾರತದ ಉದ್ಯಮ ಒಕ್ಕೂಟಗಳ ಮಂಡಳಿ ಅಸೋಚೆಮ್ ತಿಳಿಸಿದೆ. ಬರದ ಬಾಧೆಯಿಂದಾಗಿ ಈ ರಾಜ್ಯಗಳ ಒಟ್ಟು 256 ಜಿಲ್ಲೆಗಳ 33 ಕೋಟಿ ಜನರು ಅತ್ಯಂತ ಗಂಭೀರವಾದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆಂದು ಅದು ಹೇಳಿದೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಸತತ ಎರಡು ವರ್ಷಗಳಿಂದ ಮುಂಗಾರು ಮಳೆಯ ದುರ್ಬಲವಾಗಿದ್ದರಿಂದ, ಜಲಾಶಯಗಳಲ್ಲಿ ನೀರಿನ ತೀವ್ರ ಕೊರತೆಯುಂಟಾಗಿದೆ. ಅಂತರ್ಜಲದ ಮಟ್ಟವೂ ಗಣನೀಯವಾಗಿ ಕುಸಿದಿರುವುದು ಗಂಭೀರವಾದ ಸವಾಲನ್ನು ಸೃಷ್ಟಿಸಿದೆಯೆಂದು ಅಸೊಚಾಮ್ನ ಅಧ್ಯಯನ ವರದಿ ತಿಳಿಸಿದೆ.ಬರದಿಂದಾಗಿ, ರಾಷ್ಟ್ರದ ಆರ್ಥಿಕತೆಗೆ 6.50 ಕೋಟಿ ವೆಚ್ಚ ತಗಲಿದೆ. ಒಂದು ವೇಳೆ ಈ ವರ್ಷ ಮುಂಗಾರು ಮಳೆ ಸಾಮಾನ್ಯವಾಗಿದ್ದರೂ, ಕೃಷಿ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಸಂಪನ್ಮೂಲ ಹಾಗೂ ಕಾಲಾವಕಾಶ ಬೇಕಾಗುವುದರಿಂದ ಬರದ ಪರಿಣಾಮವು ಮುಂದಿನ ಆರು ತಿಂಗಳುಗಳವರೆಗೂ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ.
‘‘ ಬರಪೀಡಿತ ಪ್ರದೇಶಗಳಲ್ಲಿ ಒಂದು ಅಥವಾ ಎರಡು ತಿಂಗಳುಗಳಿಗೆ ಪ್ರತಿಯೊಬ್ಬ ವ್ಯಕ್ತಿಗೂ ನೀರು, ಆಹಾರ, ಆರೋಗ್ಯವನ್ನು ಒದಗಿಸಲು ತಲಾ 3 ಸಾವಿರ ರೂ.ಗಳನ್ನು ಸರಕಾರವು ವೆಚ್ಚ ಮಾಡುವುದೆಂದೇ ಅಂದಾಜಿಸೋಣ. ಆಗ ಬರಪೀಡಿತ ಪ್ರದೇಶಗಳ 33 ಕೋಟಿ ಜನಸಂಖ್ಯೆಯು ಅಪಾಯಕ್ಕೆ ಸಿಲುಕಿರುವುದರಿಂದ, ಪ್ರತಿ ತಿಂಗಳು ದೇಶದ ಆರ್ಥಿಕತೆಗೆ ಅಂದಾಜು 1 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ’’ ಎಂದು ವರದಿ ಹೇಳಿದೆ. ಇದರ ಜೊತೆಗೆ ವಿದ್ಯುತ್, ರಸಗೊಬ್ಬರ ಇತ್ಯಾದಿಗಳಿಗಾಗಿ ನೀಡುವ ಸಬ್ಸಿಡಿಯಿಂದ, ಆರ್ಥಿಕತೆಯ ಮೇಲಿನ ನಷ್ಟವು ಇಮ್ಮಡಿಗೊಳ್ಳಲಿದೆ.
ಅಭಿವೃದ್ಧಿಗಾಗಿ ಮೀಸಲಿರಿಸಿದ್ದ ಆರ್ಥಿಕ ಸಂಪನ್ಮೂಲಗಳನ್ನು ಬರಪರಿಹಾರಕ್ಕಾಗಿ ಬಳಸಿಕೊಳ್ಳಲಾಗುವುದರಿಂದ ದೇಶದ ಅರ್ಥಿಕತೆಯು ಗಂಭೀರವಾದ ಪರಿಣಾಮವನ್ನು ಎದುರಿಸಲಿದೆ. ಬರಪೀಡಿತ ಇತರ ಸ್ಥಳಗಳಿಗೆ ಜನರ ವಲಸೆಹೋಗುವ ಸಂಭವವಿದ್ದು, ನಗರ ಮೂಲಸೌಕರ್ಯ ಹಾಗೂ ಪೂರೈಕೆ ವ್ಯವಸ್ಥೆಯ ಮೇಲೆ ಅಪಾರ ಒತ್ತಡವುಂಟಾಗಿದೆಯೆಂದು ವರದಿ ಹೇಳಿದೆ.
ಬರಪೀಡಿತ ಜಿಲ್ಲೆಗಳಲ್ಲಿ ಕೃಷಿಸಾಲದ ಹೆಚ್ಚಳದ ಜೊತೆಗೆ ಜಾನುವಾರು ಸಂಪತ್ತು ಹಾಗೂ ಕೃಷಿ ಆರ್ಥಿಕತೆಯ ನಷ್ಟವು ಮಹಿಳೆಯರು ಹಾಗೂ ಮಕ್ಕಳ ಮೇಲೂ ಪರಿಣಾಮ ಬೀರಲಿದೆಯೆಂದು ಅದು ತಿಳಿಸಿದೆ. ಬರಪರಿಸ್ಥಿತಿಯು ಹಣದುಬ್ಬರದ ಒತ್ತಡವನ್ನೂ ಸೃಷ್ಟಿಸಲಿದೆ ಮತ್ತು ಆಹಾರ ವಿತರಣೆಯ ನಿರ್ವಹಣೆಯು ಸರಕಾರಕ್ಕೆ ಅತಿ ದೊಡ್ಡ ಸವಾಲಾಗಲಿದೆಯೆಂದು ಅಸೋಚಾಮ್ ವರದಿ ಆತಂಕ ವ್ಯಕ್ತಪಡಿಸಿದೆತ.







