ಕರಾವಳಿಗೆ ತಂಪೆರೆದ ಮಳೆ
ಮಂಗಳೂರು, ಮೇ 11: ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆಯ ಬಹು ತೇಕ ಕಡೆಗಳಲ್ಲಿ ಬುಧವಾರ ಸಂಜೆ ಸಾಧಾರಣ ಮಳೆಯಾಗಿದೆ.
ನಗರದ ಕಂಕನಾಡಿ ವ್ಯಾಪ್ತಿಯಲ್ಲಿ ಸಂಜೆ ಸುಮಾರು 6ರಿಂದ ಪ್ರಾರಂಭ ಗೊಂಡ ಮಳೆಯು ಸುಮಾರು 10 ನಿಮಿಷಗಳ ಕಾಲ ಸುರಿದಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆಯಲ್ಲಿ ಭಾರೀ ಗಾಳಿಮಳೆಗೆ 30ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರಾಶಾಯಿಯಾಗಿರು ವುದು ವರದಿಯಾಗಿದೆ.
ಉಳಿದಂತೆ ಬಂಟ್ವಾಳ ತಾಲೂಕಿನ ಕಲ್ಲಡ್ಕ, ವಿಟ್ಲ, ಸೂರಿಕುಮೇರು, ಮಾಣಿ, ಬುಡೋಳಿ ಹೆಚ್ಚಿನ ಕಡೆಗಳಲ್ಲಿ ಸಾಧಾರಣ ಮಳೆಯಾಗಿದೆ.
ಪುತ್ತೂರು ತಾಲೂಕಿನ ಬಹುತೇಕ ಕಡೆಗಳಲ್ಲಿ ಸಂಜೆಯ ವೇಳೆ ಮಳೆ ಸುರಿದಿದೆ. ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಪುತ್ತೂರು ಕೋರ್ಟ್ ಆವರಣದಲ್ಲಿ ಭಾರೀ ಮರವೊಂದು ಉರುಳಿಬಿದ್ದ ಪರಿಣಾಮ ಕಾರೊಂದಕ್ಕೆ ಹಾನಿಯಾಗಿದೆ. ಪುತ್ತೂರಿನಲ್ಲಿ ನಿನ್ನೆ ತಡರಾತ್ರಿಯೂ ಸಾಧಾರಣ ಮಳೆ ಯಾಗಿದೆ.
ಕಲ್ಲಾಜೆ: 30ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರಾಶಾಯಿ
ಕಡಬ, ಮೇ 11: ಭಾರೀ ಗಾಳಿಮಳೆಗೆ ಸುಮಾರು 30ಕ್ಕಿಂತಲೂ ಅಧಿಕ ವಿದ್ಯುತ್ ಕಂಬಗಳು ಹಾಗೂ 10ಕ್ಕೂ ಅಧಿಕ ಮರಗಳು ರಸ್ತೆಗೆ ಅಡ್ಡವಾಗಿ ಉರುಳಿಬಿದ್ದ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಬಹುತೇಕ ವಿದ್ಯುತ್ ಕಂಬಗಳು ಹಾಗೂ ಮರಗಳು ರಸ್ತೆಗೆ ಅಡ್ಡವಾಗಿ ಉರುಳಿಬಿದ್ದಿದ್ದರಿಂದ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಯಾಗಿತ್ತು. ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವುದರಿಂದ ಪರಿಸರದಲ್ಲಿ ವಿದ್ಯುತ್ ಕೈಕೊಟ್ಟಿದೆ.
ಕೊಯ್ಲ, ರಾಮಕುಂಜ, ಹಳೆನೇರಿಂಕಿ, ಆಲಂಕಾರು, ಪೆರಾಬೆ, ಬಿಳಿನೆಲೆ, ಕೈಕಂಬ, ಮರ್ದಾಳ, ಕಡಬ, ಚಾರ್ವಾಕ, ಕುಂತೂರು, ಕೋಡಿಂಬಾಳ, ಇಚಿಲಂಪಾಡಿ, ಬಿಳಿನೆಲೆ, ನೆಟ್ಟಣ, ಕೈಕಂಬ, ಸುಂಕದಕಟ್ಟೆ ಸೇರಿದಂತೆ ಮೊದಲಾದೆಡೆ ಸುಮಾರು 2 ಗಂಟೆಗಳ ಕಾಲ ಗುಡುಗು ಸಹಿತ ಗಾಳಿಮಳೆ ಸುರಿದಿದೆ. ಕೊಯ್ಲ ಗ್ರಾಮದ ಸಬಳೂರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ 10ಕ್ಕೂ ಹೆಚ್ಚು ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ಆಲಂಕಾರಿನ ಕಜೆ ಸದಾನಂದ ಎಂಬವರ ದನದ ಹಟ್ಟಿಯ ಛಾವಣಿ ಕುಸಿದಿದ್ದು, ಅಪಾರ ನಷ್ಟವಾಗಿದೆ. ಕೊಯ್ಲ, ಆಲಂಕಾರು, ಕುಂತೂರು, ಕೋಡಿಂಬಾಳ, ಇಚಿಲಂಪಾಡಿ, ಬಿಳಿನೆಲೆ, ನೆಟ್ಟಣ, ಕೈಕಂಬ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಕಡಬದಲ್ಲಿ ಗುಡುಗು-ಮಿಂಚಿನ ಆರ್ಭಟದೊಂದಿಗೆ ಸಾಧಾರಣ ಮಳೆಯಾಗಿದೆ. ಆತೂರು ಸಮೀಪದ ಕುಂಡಾಜೆಯಲ್ಲಿ ಮೂರು ಮರಗಳು ಧರಾಶಾಯಿಯಾಗಿವೆ. ಕಡಬ ಪೇಟೆ ಸೇರಿದಂತೆ ಬಹುತೇಕ ಕಡೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಮಳೆ ನೀರು ಹರಿದು ಸಂಚಾರಕ್ಕೆ ತೊಡಕುಂಟಾಗಿತ್ತು. ಹಲ ವೆಡೆ ಅಡಿಕೆ ಗಿಡಗಳು ಮುರಿದುಬಿದ್ದಿವೆೆ. ವಿದ್ಯುತ್, ದೂರವಾಣಿ, ಅಂತರ್ಜಾಲ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ.
ಉಡುಪಿ ಜಿಲ್ಲೆಗೆ ಪ್ರಥಮ ಮಳೆಯ ಸಿಂಚನ
ಉಡುಪಿ, ಮೇ 11: ಬಿರುಬಿಸಿಲಿನಿಂದ ಕಾದು ಬಸವಳಿದ ಜಿಲ್ಲೆಗೆ ಇಂದು ಪ್ರಥಮ ಮಳೆಯ ಸಿಂಚನವಾಗಿದೆ. ಆದರೆ ಹೆಚ್ಚಿನ ಕಡೆ ಮಳೆ ಶಾಸ್ತ್ರಕ್ಕೆಂಬಂತೆ ಬರಬರ ಸುರಿದು ಬಂದಷ್ಟೇ ವೇಗದಲ್ಲಿ ಕಣ್ಮರೆಯಾಗಿದ್ದರಿಂದ ಜನರು ನಿರಾಶೆಗೊಂಡರು.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದ ಆಸುಪಾಸಿನಲ್ಲಿ ಜೋರಾಗಿಯೇ ಮಳೆ ಸುರಿದ ಬಗ್ಗೆ ವರದಿಯಾಗಿವೆ. ಕಾರ್ಕಳ, ಕುಂದಾಪುರ ತಾಲೂಕುಗಳ ತಪ್ಪಲು ಪ್ರದೇಶಗಳಲ್ಲಿ ಅರ್ಧಗಂಟೆಗೂ ಅಧಿಕ ಸಮಯ ಗುಡುಗು ಸಹಿತ ಮಳೆ ಸುರಿದಿದ್ದು, ಜನತೆಗೆ ತಂಪಿನ ಸಿಂಚನವಾಗಿದೆ. ಆದರೆ ಎಲ್ಲಿಂದಲೂ ಯಾವುದೇ ರೀತಿಯ ಹಾನಿಯಾದ ಬಗ್ಗೆ ವರದಿಗಳು ಬಂದಿಲ್ಲ.ಕರಾವಳಿ ಜಿಲ್ಲೆಗಳಲ್ಲಿ ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ ಸಾಮಾನ್ಯವಾಗಿ ಸುರಿಯಬೇಕಿದ್ದ ಮುಂಗಾರು ಪೂರ್ವ ಮಳೆ ಈ ಬಾರಿ ಇದೇ ಪ್ರಥಮವಾಗಿ ಸುರಿದಿದೆ.