ಉಳ್ಳಾಲ: ಯುವಕನ ಕೊಲೆಯತ್ನ ಪ್ರಕರಣ; ಓರ್ವನ ಬಂಧನ
ಮಂಗಳೂರು, ಮೇ 12: ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಟಿ.ಸಿ.ರೋಡ್ ಸಮೀಪದ ನಿವಾಸಿ ಧನರಾಜ್ (25) ಎಂಬಾತನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಿಲ್ಲತ್ ನಗರ ನಿವಾಸಿ ಫೈಝಿ ಯಾನೆ ಮುಹಮ್ಮದ್ ಫಯಾಜ್ (20) ಎಂದು ಗುರುತಿಸಲಾಗಿದೆ. ಎ.29ರಂದು ಚಿಟ್ ಫಂಡ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಧನರಾಜ್ ಬೈಕಿನಲ್ಲಿ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದಾಗ ತೊಕ್ಕೊಟ್ಟು ಟಿ.ಸಿ.ರೋಡಿನಲ್ಲಿ ಮೂವರಿದ್ದ ಯುವಕರ ತಂಡ ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿತ್ತು. ಧನರಾಜ್ ಬ್ಯಾಗ್ ಹಾಕಿದ್ದ ಹಿನ್ನೆಲೆಯಲ್ಲಿ ತಲವಾರು ಏಟು ಬೆನ್ನಿಗೆ ತಗಲಿತ್ತು.
ಎ.25 ರಂದು ಉಳ್ಳಾಲ ಕೋಡಿಯಲ್ಲಿ ನಫ್ಸಾನ್ ಹಾಗೂ ಎ.29 ರಂದು ತೊಕ್ಕೊಟ್ಟು ಸಮೀಪ ಸಫ್ವಾನ್ ಕೊಲೆ ಹಾಗೂ ಆತನ ಇಬ್ಬರು ಸ್ನೇಹಿತರ ಕೊಲೆಗೆ ಯತ್ನಿಸಿದ ಪ್ರಕರಣದ ಪ್ರತೀಕಾರವಾಗಿ ಈ ದಾಳಿ ನಡೆದಿತ್ತು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳ ಶೋಧ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ.