ರಸ್ತೆ ವಿಚಾರ: ಇತ್ತಂಡದ ನಡುವೆ ಹೊಡೆದಾಟ
ಪುತ್ತೂರು, ಮೇ 12: ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ಪರಸ್ಪರ ಹೊಡೆದಾಟ ನಡೆದು ಒಂದೇ ಕುಟುಂಬದ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಆನಾಜೆ ಎಂಬಲ್ಲಿ ಬುಧವಾರ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಆನಾಜೆ ಇಸ್ಮಾಯೀಲ್ರ ಪುತ್ರರಾದ ಅಬ್ದುರ್ರಹ್ಮಾನ್ ಹಾಗೂ ಮುಹಮ್ಮದ್ ಶಾಫಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಾದರೆ ಇನ್ನೊಂದು ತಂಡದ ಕೊಡಿಪ್ಪಾಡಿ ಆನಾಜೆ ಇಸ್ಮಾಯೀಲ್ರ ಪುತ್ರ ಅಬ್ದುಲ್ ಕರೀಮ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವರ್ಗ ಜಾಗದ ಮೂಲಕ ಮನೆಗೆ ಹೋಗುವ ಖಾಸಗಿ ರಸ್ತೆಗೆ ತಿಂಗಳ ಹಿಂದೆಯಷ್ಟೇ ಕಾಂಕ್ರಿಟೀಕರಣ ಮಾಡಿದ್ದೇವೆ. ಆ ಬಳಿಕ ಸಣ್ಣ ವಾಹನಗಳನ್ನು ಮಾತ್ರವೇ ಆ ರಸ್ತೆಯ ಮೂಲಕ ಸಂಚರಿಸುತ್ತಿದ್ದವು. ಈ ಮಧ್ಯೆ ಅತ್ತೆಯ ಮನೆಗೆ ಟಿಪ್ಪರ್ ಲಾರಿಯಲ್ಲಿ ಹೊಗೆ ತಂದಿದ್ದಾರೆ. ಇದರಿಂದಾಗಿ ಇತ್ತೀಚೆಗೆ ಕಾಂಕ್ರಿಟೀಕರಣಗೊಂಡ ರಸ್ತೆಗೆ ಸಂಪೂರ್ಣ ಹಾನಿಯಾಗಿದೆ. ಇದನ್ನು ಪ್ರಶ್ನಿಸಿರುವುದಕ್ಕೆ ತನ್ನ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಸಹೋದರ ಮುಹಮ್ಮದ್ ಶಾಫಿ ತಡೆಯಲು ಬಂದಿದ್ದು ಅವರಿಗೂ ಹಲ್ಲೆ ನಡೆಸಿದ್ದಾರೆ ಎಂದು ಅಬ್ದುರ್ರಹ್ಮಾನ್ ಆರೋಪಿಸಿದ್ದಾರೆ.
ನಮ್ಮ ಮನೆಯ ಬಳಿಯಿಂದಾಗಿ ನೆರೆಮನೆಯ ಅಬ್ದುರ್ರಹ್ಮಾನ್ರ ಮನೆಗೆ ರಸ್ತೆ ಹಾದುಹೋಗುತ್ತಿದೆ. ಈ ರಸ್ತೆಗೆ ಕೆಲ ಸಮಯಗಳ ಹಿಂದೆ ಕಾಂಕ್ರಿಟೀಕರಣವಾಗಿತ್ತು. ಆ ಬಳಿಕ ಆ ರಸ್ತೆ ಮೂಲಕ ನಾವು ವಾಹನ ಸಂಚಾರ ಮಾಡಬಾರದು ಎಂದು ಆಕ್ಷೇಪ ಮಾಡುತ್ತಿದ್ದರು. ಈ ಮಧ್ಯೆ ನಾವು ಹೊಸ ಮನೆ ನಿರ್ಮಿಸುತ್ತಿದ್ದ ಕಾಮಗಾರಿಗೆ ಟಿಪ್ಪರ್ ಲಾರಿಯ ಚಾಲಕ ನಮಗೆ ತಿಳಿಸದೆ ಮರಳು ತಂದಿದ್ದಾರೆ. ಇದನ್ನು ಆಕ್ಷೇಪಿಸಿ ಅಬ್ದುರ್ರಹ್ಮಾನ್ ಹಾಗೂ ಆತನ ಸಹೋದರ ಮುಹಮ್ಮದ್ ಶಾಫಿ ನಮ್ಮ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ನನಗೆ ಹಲ್ಲೆ ನಡೆಸುತ್ತಿರುವುದನ್ನು ಕಂಡು ತಡೆಯಲು ಬಂದ ತಾಯಿ ಬೀಪಾತುಮ್ಮರವರಿಗೂ ಹಲ್ಲೆ ನಡೆಸಿರುವುದಾಗಿ ಅಬ್ದುಲ್ ಕರೀಮ್ ಆರೋಪಿಸಿದ್ದಾರೆ.
ಪುತ್ತೂರು ನಗರ ಪೊಲೀಸರು ಇತ್ತಂಡದ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





