ಉಳ್ಳಾಲ: ಯುವಕನಿಗೆ ಚೂರಿ ಇರಿತ

ಮಂಗಳೂರು, ಮೇ 13: ನಾಲ್ಕೈದು ಮಂದಿಯ ತಂಡವೊಂದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದ ಘಟನೆ ಇಂದು ಸಂಜೆ ಉಳ್ಳಾಲ ದರ್ಗಾ ಬಳಿ ನಡೆದಿದೆ.
ಚೂರಿ ಇರಿತಕ್ಕೊಳಗಾದ ಯುವಕನನ್ನು ಉಳ್ಳಾಲ ಸಮೀಪದ ಅಳೇಕಲದ ನಿವಾಸಿ ಶಂಶುದ್ದೀನ್ (27) ಎಂದು ಗುರುತಿಸಲಾಗಿದೆ. ಜಲ್ದಿ ಸಿದ್ದೀಕ್, ಖಬುರ್ ಆಸಿಫ್ ಸೇರಿ ಐದಾರು ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಕಾರ್ಯಕ್ರಮದ ನೋಟಿಸ್ ಹಂಚುವ ವಿಚಾರದಲ್ಲಿ ಮಧ್ಯಾಹ್ನ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು ಎಂದು ಹೇಳಲಾಗಿದ್ದು, ಇದೇ ವಿಚಾರದಲ್ಲಿ ಸಂಜೆ ಅಸರ್ ನಮಾಝಿನ ಬಳಿಕ ದರ್ಗಾದ ಹೊರಗೆ ಐದಾರು ಮಂದಿಯ ತಂಡ ಶಂಶುದ್ದೀನ್ರನ್ನು ತಡೆದು ಕೈ, ಕಾಲುಗಳಿಗೆ ಹೊಡೆದು ಹಲ್ಲೆ ನಡೆಸಿದ್ದು, ತೋಳಿನ ಭಾಗಕ್ಕೆ ಚೂರಿಯಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ.
ಗಾಯಾಳು ಶಂಶುದ್ದೀನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





