ಚುಟುಕು ಸುದ್ದಿಗಳು
ವರದಕ್ಷಿಣೆ ಕಿರುಕುಳ: ಹಲ್ಲೆ
ಪುತ್ತೂರು, ಮೇ 13: ವರದಕ್ಷಿಣೆಗಾಗಿ ವ್ಯಕ್ತಿ ತನ್ನ ಪತ್ನಿಗೆ ಹಲ್ಲೆ ನಡೆಸಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಕಬಕ ನಿವಾಸಿ ಮಹ್ಮೂದ್ರ ಪುತ್ರಿಯನ್ನು ಬೆಳ್ತಂಗಡಿ ತಾಲೂಕಿನ ದೇರಳಕ್ಕಿ ನಿವಾಸಿ ಅಶ್ರಫ್ ಎಂಬಾತ 2015ರಲ್ಲಿ ವಿವಾಹವಾಗಿದ್ದ. ಈ ಸಂದರ್ಭ ಆತನ ಬೇಡಿಕೆಯಂತೆ 2.5 ಲಕ್ಷ ರೂ. ನಗದು ಹಾಗೂ 30 ಪವನ್ ಚಿನ್ನಾಭರಣ ನೀಡಲಾಗಿತ್ತು. ಬಳಿಕ ಇದೀಗ ಆತ ಹೆಚ್ಚುವರಿ ಹಣಕ್ಕಾಗಿ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಮಕ್ಕಳಾಗದ ಚಿಂತೆಯಲ್ಲಿ ಆತ್ಮಹತ್ಯೆ
ಕೋಟ, ಮೇ 13: ಮದುವೆಯಾಗಿ 28 ವರ್ಷಗಳಾದರೂ ಮಕ್ಕಳಾಗಲಿಲ್ಲವೆಂಬ ಚಿಂತೆಯಲ್ಲಿ ಮೇ 12ರಂದು ಸಂಜೆ ವೇಳೆ ಮಣೂರು ಗ್ರಾಮದ ಬಾಳೆಬೆಟ್ಟು ಎಂಬಲ್ಲಿರುವ ಗದ್ದೆಯಲ್ಲಿ ಕೀಟನಾಶಕವನ್ನು ಸೇವಿಸಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಜೀವ ಶೆಟ್ಟಿ(58) ಮೇ 13ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಕೋಟೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅಪಘಾತದ ಗಾಯಾಳು ಮೃತ್ಯು
ಕೋಟ, ಮೇ 13: ಗುಂಡ್ಮಿ ಬಳಿ 2012ರ ಅ.4ರಂದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಸಾಲಿಗ್ರಾಮ ಕಾರ್ಕಡ ನಿವಾಸಿ ಭಾಸ್ಕರ ಮರಕಾಲ ಎಂಬವರು ಮೇ12ರಂದು ಸಂಜೆ 4 ಗಂಟೆಗೆ ಮೃತಪಟ್ಟಿದ್ದಾರೆ.
ವೈದ್ಯರ ಸಲಹೆಯಂತೆ ಇವರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಯಲ್ಲೇ ಆತ್ಮಹತ್ಯೆ
ಕುಂದಾಪುರ, ಮೇ 13: ಕುರ್ಕುಂಜೆ ಗ್ರಾಮದ ನೇರಳಕಟ್ಟೆ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಬಳಿ ನಡೆಸುತ್ತಿದ್ದ ಅಡಿಕೆ ಅಂಗಡಿಯ ವ್ಯವಹಾರದಲ್ಲಿ ನಷ್ಟ ಉಂಟಾದ ಚಿಂತೆಯಲ್ಲಿ ಬೇಸತ್ತ ಕುಂದಾಪುರ ಜಿಎಸ್ಬಿ ಕಾಲೋನಿಯ ಶ್ರೀಪತಿ ಬಾಳಿಗಾ ಶುಕ್ರವಾರ ಮಧ್ಯಾಹ್ನ ಅಂಗಡಿಯೊಳಗಿನ ಮುಚ್ಚಿಗೆಯ ಅಡ್ಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಹನ ಢಿಕ್ಕಿ: ಸೈಕಲ್ ಸವಾರ ಮೃತ್ಯು
ಬ್ರಹ್ಮಾವರ, ಮೇ13: ಬಾರ್ಕೂರು ಬೈಲುಮನೆ ಎಂಬಲ್ಲಿ ಮೇ 13ರಂದು ಬೆಳಗ್ಗೆ ಮಹೀಂದ್ರ ಜೀತು ವಾಹನವೊಂದು ಸೈಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಬಾರಕೂರು ಬೈಲುಮನೆ ನಿವಾಸಿ ಸಂಜೀವ ಪೂಜಾರಿ (62) ಎಂದು ಗುರುತಿಸಲಾಗಿದೆ. ಇವರು ಮನೆಯಿಂದ ಎಂದಿನಂತೆ ಬೆಳಗ್ಗೆ 7ಗಂಟೆ ಸುಮಾರಿಗೆ ಸೈಕಲ್ನಲ್ಲಿ ಬಾರ್ಕೂರು ಹಾಲು ಡೈರಿಗೆ ಹಾಲನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಬ್ರಹ್ಮಾವರ ಕಡೆಯಿಂದ ಬಾರ್ಕೂರು ಕಡೆಗೆ ಬರುತ್ತಿದ್ದ ಮಹೀಂದ್ರ ಜೀತು ವಾಹನವು ಸೈಕಲ್ನ ಹಿಂಭಾಗಕ್ಕೆ ಢಿಕ್ಕಿ ಹೊಡೆಯಿತು.
ಇದರ ಪರಿಣಾಮ ಸಂಜೀವ ಪೂಜಾರಿ ರಸ್ತೆಗೆ ಬಿದ್ದು ತಲೆಗೆ ತೀವ್ರ ಗಾಯ ಗೊಂಡರು. ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಬೆಳಗ್ಗೆ 10:15ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮನಿಗೆ ಹಲ್ಲೆ: ಆರೋಪಿ ದರಿಗೆೆ ಶಿಕ್ಷೆ
ಉಡುಪಿ, ಮೇ 13: ತಮ್ಮನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಅಕ್ಕನಿಗೆ ಉಡುಪಿ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಉಡುಪಿ ಮೂಡನಿಡಂಬೂರು ಗ್ರಾಮದ ಬನ್ನಂಜೆ ಎಂಬಲ್ಲಿ 2012ರ ಜು.29ರಂದು ರಾತ್ರಿ 7:40ರ ಸುಮಾರಿಗೆ ಶಿರಿಬೀಡು ನಿವಾಸಿ ಆಶಾ ರಮೇಶ ಎಂಬವರು ತನ್ನ ತಮ್ಮ ಬನ್ನಂಜೆ ಪುರುಷೋತ್ತಮರಿಗೆ ಕೊಡೆಯಿಂದ ಹೊಡೆದು ಗಾಯವುಂಟು ಮಾಡಿದ್ದರು. ಈ ಬಗ್ಗೆ ಆಶಾ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ವಿ.ಎನ್.ಮಿಲನಾ ಆರೋಪಿ ವಿರುದ್ಧದ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟು ಆರೋಪಿಗೆ 5,000 ರೂ. ದಂಡ ವಿಧಿಸಿದ್ದಲ್ಲದೆ, ಆರೋಪಿಗೆ 63 ವರ್ಷವಾದದ್ದನ್ನು ಪರಿಗಣಿಸಿ ಅಪರಾಧಿ ಪರಿವೀಕ್ಷಣಾ ಕಾಯ್ದೆ ಕಲಂ 4ರಂತೆ ಒಂದು ವರ್ಷದ ಅವಧಿಯಲ್ಲಿ ಸನ್ನ ಡತೆಯಲ್ಲಿರುವಂತೆ ಆದೇಶಿಸಿ ಇಂದು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮಮ್ತಾಝ್ ವಾದ ಮಂಡಿಸಿದ್ದರು.
ಕಾಸರಗೋಡು: ನವವಿವಾಹಿತೆ ನಿಗೂಢ ಸಾವು: ಆರೋಪಿ ಪತಿಯ ಸೆರೆ
ಕಾಸರಗೋಡು, ಮೇ 13: ನವ ವಿವಾಹಿತೆಯ ನಿಗೂಢ ಸಾವಿಗೆ ಸಂಬಂಧಪಟ್ಟಂತೆ ಪತಿಯನ್ನು ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಂಬಲತ್ತರ ಪಾರ ಪಳ್ಳಿಯ ಜಶೀರ್ ಎಂದು ಗುರು ತಿಸಲಾಗಿದೆ.
ಅದೂರು ಮುಗುಲಿಯ ಫಾತಿಮತ್ ಸಫೀದಾ (18) ನಿಗೂಢ ಸಾವ ನ್ನಪ್ಪಿದಾಕೆ. 2014ರ ಸೆಪ್ಟಂಬರ್ 3ರಂದು ಈ ಘಟನೆ ನಡೆದಿತ್ತು. ಸಫೀದಾಳ ಮೃತದೇಹ ನೆರೆಮನೆಯ ಬಾವಿಯಲ್ಲಿ ಪತ್ತೆಯಾಗಿತ್ತು. ನಿಗೂಢ ಸಾವಿನ ಬಗ್ಗೆ ಆರಂಭದಲ್ಲೇ ಸಂಶಯ ತಲೆದೋರಿತ್ತು. ಹೊಸದುರ್ಗ ಡಿವೈಎಸ್ಪಿ ನೇತೃತ್ವದ ಪೊಲೀಸ್ ತಂಡ ಆರಂಭದಲ್ಲಿ ತನಿಖೆ ನಡೆಸಿತ್ತು. ಸಫೀದಾಳನ್ನು ಕೊಲೆ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಸಮಗ್ರ ತನಿಖೆ ನಡೆಸುವಂತೆ ಆದೂರಿನಲ್ಲಿ ಕ್ರಿಯಾ ಸಮಿತಿ ರಚಿಸಿ ಕ್ರೈಂ ಬ್ರಾಂಚ್ಗೆ ತನಿಖೆ ಒಪ್ಪಿಸುವಂತೆ ಒತ್ತಾಯಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಕ್ರೈಂ ಬ್ರಾಂಚ್ಗೆ ತನಿಖೆ ಹಸ್ತಾಂತರಿಸಲಾ ಗಿತ್ತು. ಅಧಿಕ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದೇ ಆತ್ಮಹತ್ಯೆಗೆ ಕಾರಣ ಎಂದು ತನಿಖೆ ಯಿಂದ ತಿಳಿದು ಬಂದಿದ್ದು, ಅದರಂತೆ ಪತಿ ಜಶೀರ್ನನ್ನು ಕ್ರೈಂಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
ಫ್ಲಾಟ್ಗೆ ನೀರು ಪೂರೈಕೆಗೆ ಅಡ್ಡಿ: ಮೇಯರ್ಗೆ ದೂರು
ಮಂಗಳೂರು, ಮೇ 13: ಬೆಂದೂರ್ವೆಲ್ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ನೀರು ಶುದ್ಧೀಕರಣ ಘಟಕದಿಂದ ಟ್ಯಾಂಕರ್ನಲ್ಲಿ ಸಮೀಪದ ಫ್ಲಾಟೊಂದಕ್ಕೆ ನೀರು ಪೂರೈಕೆಯ ಸಂದರ್ಭ ಕೆಲವರು ಅಡ್ಡಿ ಪಡಿಸಿ ತಮ್ಮ ಪೈಪನ್ನು ಕಿತ್ತೊಯ್ದಿದ್ದಾರೆ ಎಂದು ಫ್ಲಾಟ್ನ ನಿವಾಸಿಗಳು ಮೇಯರ್ ಹರಿನಾಥ್ಗೆ ದೂರು ನೀಡಿದ್ದಾರೆ. ಅಪ್ಪರ್ ಬೆಂದೂರ್ವೆಲ್ನ ಫ್ಲಾಟ್ವೊಂದಕ್ಕೆ ಎರಡು ವಾರಗಳಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಹಾಗಾಗಿ ಸ್ಥಳೀಯ ಕಾರ್ಪೊರೇಟರ್ ಗಮನ ಸೆಳೆದ ಹಿನ್ನೆಲೆ ಯಲ್ಲಿ ಅವರು ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಮುಂದಾಗಿದ್ದರು. ಆದರೆ ಟ್ಯಾಂಕರ್ ಫ್ಲ್ಯಾಟ್ನ ಒಳ ಬರಲು ರಸ್ತೆ ಇಲ್ಲದಿರುವುದರಿಂದ ಬೆಂದೂರ್ವೆಲ್ನ ಶುದ್ಧೀಕರಣ ಘಟಕದ ಬಳಿಯಿಂದಲೇ ಟ್ಯಾಂಕರ್ಗೆ ಪೈಪ್ ಅಳವಡಿಸಿ ನೀರನ್ನು ಫ್ಲಾಟ್ನ ಟ್ಯಾಂಕ್ಗೆ ತುಂಬಿಸಲಾಗುತ್ತಿತ್ತು. ಆ ಸಂದರ್ಭ ಫ್ಲಾಟ್ನೊಳಗೆ ನುಗ್ಗಿದ ಕೆಲವರು ನೀರು ಪೂರೈಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ ಪೈಪನ್ನೇ ಕಿತ್ತೊಯ್ದಿದ್ದಾರೆ ಎಂದು ಫ್ಲಾಟ್ನ ನಿವಾಸಿಗಳು ಮೇಯರ್ಗೆ ದೂರು ನೀಡಿದರು. ಶುದ್ಧೀಕರಣ ಘಟಕದಿಂದ ಅಕ್ರಮವಾಗಿ ನೀರನ್ನು ಫ್ಲಾಟ್ಗೆ ಪೂರೈಕೆ ಮಾಡಲಾಗುತ್ತಿದೆ ಎಂಬ ಅನುಮಾನದಲ್ಲಿ ಹೀಗೆ ಮಾಡಿದ್ದಾರೆ. ಆದರೆ ಫ್ಲಾಟ್ನಲ್ಲಿ ಇರುವವರೆಲ್ಲರೂ ಸುಶಿಕ್ಷಿತರಾಗಿದ್ದು, ಅಕ್ರಮವಾಗಿ ನೀರು ಪಡೆಯುವ ಅಗ ತ್ಯವಿಲ್ಲ. 15 ದಿನಗಳಿಂದ ಫ್ಲ್ಯಾಟ್ಗೆ ನೀರು ಬರುತ್ತಿಲ್ಲ. ಫ್ಲಾಟ್ನ 24 ಮನೆಗಳಲ್ಲಿ ಕೆಲವರು ಈಗಾಗಲೇ ನೀರಿನ ಸಮ ಸ್ಯೆಯಿಂದ ಮನೆಗೆ ಬಾಗಿಲು ಹಾಕಿ ಹೋಗಿದ್ದಾರೆ. ಉಳಿದ ಕೆಲವು ಮನೆಮಂದಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ 15 ದಿನಗಳಲ್ಲಿ ಎರಡು ಬಾರಿ ಮಾತ್ರ 12,000 ಲೀಟರ್ನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿದೆ. ಫ್ಲಾಟ್ನವರು ಮನುಷ್ಯರಲ್ಲವೇ? ಅವರಿಗೆ ನೀರು ಬೇಡವೇ? ನಾವು ಟ್ಯಾಂಕರ್ನಿಂದ ನೀರು ಪಡೆಯುವುದಕ್ಕಾಗಿ ಸುಮಾರು 17,000 ಖರ್ಚು ಮಾಡಿ ಖರೀದಿಸಿದ್ದ ಪೈಪನ್ನೂ ಕದ್ದೊಯ್ಯುವ ಮೂಲಕ ನಮಗೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಮೇಯರ್ರವರಲ್ಲಿ ಆಗ್ರಹಿಸಿದರು.
ಬಿ.ಇ. ಸರ್ಟಿಫಿಕೆಟ್ ನೀಡಲು ವಿಕಲಚೇತನ ವ್ಯಕ್ತಿ ಮನವಿ
ಮಂಗಳೂರು, ಮೇ 13: ಆರ್ಥಿಕ ಹಿನ್ನಡೆಯ ಹೊರತಾಗಿಯೂ ಕಷ್ಟಪಟ್ಟು ಉನ್ನತ ವಿದ್ಯಾಭ್ಯಾಸದೊಂದಿಗೆ 1996ರಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಪರೀಕ್ಷೆ ಬರೆದರೂ ಹಲವಾರು ಕಾರಣಗಳಿಂದ ಪೂರ್ಣಗೊಳಿಸಲಾಗಿಲ್ಲ. ಇದೀಗ ವಿಕಲಚೇತನನಾಗಿರುವ ತನಗೆ ಮಾನವೀಯ ನೆಲೆಯಲ್ಲಿ ಬಿಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಸರ್ಟಿಫಿಕೆಟ್ ನೀಡುವ ಮೂಲಕ ದೇಶ ಸೇವೆಗೆ ಅವಕಾಶ ಕಲ್ಪಿಸಬೇಕು ಎಂದು ನವ ಮಂಗಳೂರು ಉದ್ಯೋಗಿ ವೆಂಕಟಪತಿ ಕೆ.ಎಂ., ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ತನ್ನ ಸಮಸ್ಯೆಯನ್ನು ವಿವರಿಸಿದ ವೆಂಕಟಪತಿ, ಮನೆಯಲ್ಲಿ ಬಡತನ ಹಾಗೂ ತನ್ನ ಕುಟುಂಬ ವರ್ಗದವರ ಸಾವಿನಿಂದ ವಿಚಲಿತನಾಗಿದ್ದ ತಾನು ನಗರದ ಸೈಂಟ್ ಆಲೋಶಿಯಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿದೆ. ನಂತರ ಕರ್ನಾಟಕ ರೀಜಿನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಸೀಟ್ ದೊರಕಿದ್ದು, ಈ ಸಂದರ್ಭ ತಂದೆ ಮೃತರಾದರು. ನನ್ನ ಸಹಾಯಕ್ಕೆ ಯಾರೂ ಸಿಗದ ಕಾರಣ ಕಾಡಿಬೇಡಿ 1996ರಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿ ಹಲವು ಬಾರಿ ಪರೀಕ್ಷೆಗಳನ್ನು ಬರೆದರೂ ವಿಷಯಗಳು ಬಾಕಿ ಉಳಿದಿದ್ದವು ಎಂದರು.
ನಿರೀಕ್ಷಕರಿಗೆ ಹಲ್ಲೆ: ಕ್ರಮಕ್ಕೆ ಆಗ್ರಹ
ಬಂಟ್ವಾಳ, ಮೇ 13: ತಾಲೂಕು ಕಂದಾಯ ನಿರೀಕ್ಷಕ ಆಸಿಫ್ ಇಕ್ಬಾಲ್ರ ಕಚೇರಿಗೆ ಗುರುವಾರ ನುಗ್ಗಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ ಕೃತ್ಯವನ್ನು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆ ಖಂಡಿಸಿದೆ. ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶುಕ್ರವಾರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಸರಕಾರಿ ನೌಕರರು ಮುಕ್ತವಾಗಿ ಮತ್ತು ಸ್ವತಂತ್ರವಾಗಿ ತಮ್ಮ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸೂಕ್ತವಾದ ರಕ್ಷಣೆಯನ್ನು ಒದಗಿಸುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ. ನಿಯೋಗದಲ್ಲಿ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಕೆ. ರಮೇಶ್ ನಾಯಕ್ ಮೊದಲಾದವರಿದ್ದರು. ಮನವಿಯ ಪ್ರತಿಯನ್ನು ಗೃಹ ಸಚಿವರು, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಪೊಲೀಸ್ ವರಿಷ್ಠಾಧಿಕಾರಿಗೂ ರವಾನಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರಿಂದ ವಿಶೇಷ ಪೂಜೆ
ಪರ್ಕಳ, ಮೇ 13: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ ಕಾರಕ್ಕೆ ಇಂದು 3 ವರ್ಷ ತುಂಬಿದ ಪ್ರಯುಕ್ತ ಪರ್ಕಳ ಕಾಂಗ್ರೆಸ್ ಕಾರ್ಯ ಕರ್ತರು ಇಲ್ಲಿನ ಮಹಾ ಲಿಂಗೇಶ್ವರ ಮಹಾಗಣಪತಿ ದೇವ ಸ್ಥಾನದಲ್ಲಿ 105 ತೆಂಗಿನಕಾಯಿ ಒಡೆಯುವುದರ ಮೂಲಕ ಮುಂದಿನ 2 ವರ್ಷವೂ ಅವ ರಿಂದ ಒಳ್ಳೆಯ ಜನಪರ ಯೋಜನೆಗಳು ಕಾರ್ಯರೂಪಕ್ಕೆ ಬರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಗೋಪಾಲಕೃಷ್ಣ ಆಚಾರ್ಯ ಪರ್ಕಳ, ಜಯ ಶೆಟ್ಟಿ ಬನ್ನಂಜೆ, ಮೋಹನದಾಸ್ ನಾಯಕ್ ಪರ್ಕಳ, ಬಿಕೆ ರಾಜ್ ಕೆಮ್ಮಣ್ಣು, ಗಣೇಶ್ ರಾಜ್ ಸರಳೇ ಬೆಟ್ಟು, ಉಡುಪಿ ನಗರಸಭೆ ನಾಮನಿರ್ದೇಶನ ಸದಸ್ಯ ಸುಕೇಶ್ ಕುಂದರ್ ಹೆರ್ಗ ಮುಂತಾ ದವರು ಉಪಸ್ಥಿತರಿದ್ದರು.