ಎಂಆರ್ಪಿಎಲ್ ವಿಸ್ತರಣೆಗಾಗಿ ಭೂ ಸ್ವಾಧೀನ ಪ್ರಸ್ತಾಪ: ಸ್ಥಳೀಯರಿಂದ ವಿರೋಧ
ಕೃಷಿ ಭೂಮಿ ಸಂರಕ್ಷಣಾ ಸಮಿತಿಯಿಂದ ಅಭಿಪ್ರಾಯ ಸಂಗ್ರಹ ವರದಿ
ಮಂಗಳೂರು, ಮೆ.14: ಎಂಆರ್ಪಿಎಲ್ನ ವಿಸ್ತರಣಾ ಯೋಜನೆಗಾಗಿ ಉದ್ದೇಶಿತ ಭೂ ಸ್ವಾಧೀನತೆಯ ಪ್ರಸ್ತಾಪವನ್ನು ಶೇ. 85ರಷ್ಟು ಸ್ಥಳೀಯರು ವಿರೋಧಿಸಿದ್ದಾರೆ. ಸಂಬಂಧಿಸಿದ ಗ್ರಾಮ ಪಂಚಾಯತ್ಗಳಲ್ಲಿ ನಡೆದ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಗಳಲ್ಲಿ ಈ ಪ್ರಸ್ತಾಪವನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ ಆದರೂ ಎಂಆರ್ಪಿಎಲ್ನ ಆಡಳಿತ ನಿರ್ದೇಶಕರು ಭೂಸ್ವಾಧೀನ ಪ್ರಕ್ರಿಯೆಗೆ ‘ಗ್ರಾಮಸ್ಥರ ಒಪ್ಪಿಗೆ ಪಡೆಯಲಾಗಿದೆ’ ಎನ್ನುವ ಪ್ರಕಟಣೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವುದನ್ನು ಕೃಷಿ ಭೂಮಿ ಸಂರಕ್ಷಣಾ ಸಮಿತಿ ವಿರೋಧಿಸಿದೆ.
ಕಂಪೆನಿಯು ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಜನರನ್ನು ಮತ್ತು ಸರಕಾರವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಮಧುಕರ ಅಮೀನ್ ಸುದ್ದಿಗೋಷ್ಠಿಯಲ್ಲಿಂದು ಆರೋಪಿಸಿದ್ದಾರೆ.
ಎಂಆರ್ಪಿಎಲ್ ಕಂಪೆನಿ ಎಸ್ಇಝೆಡ್ ಭೂಸ್ವಾಧೀನ ಪ್ರಕ್ರಿಯೆ ಸಂದರ್ಭದಲ್ಲಿ ಮಾಡಿದಂತೆ ಸರಕಾರಕ್ಕೆ ಸ್ಥಳೀಯ ಜನರ ಅಭಿಪ್ರಾಯವನ್ನು ಸರಿಯಾಗಿ ತಿಳಿಸದೆ, ಜನರನ್ನು ಕತ್ತಲಲ್ಲಿಟ್ಟು ಭೂಸ್ವಾಧೀನ ಮಾಡಲಾಗಿದೆ. ಈ ಬಾರಿಯೂ ಅದೇ ರೀತಿ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಭೂಮಿ ಬಿಟ್ಟು ಕೊಡಲು ಗ್ರಾಮಸ್ಥರ ಮೇಲೆ ಒತ್ತಡ ಹೇರಲಾಗುತ್ತಿದೆ. ಕೆಐಎಡಿಬಿ ಭೂಸ್ವಾಧೀನ ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಶಾಮೀಲಾಗಿದ್ದಾರೆ.
2013ರ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯ ಪ್ರಕಾರ ಭೂಸ್ವಾಧೀನ ಅಧಿಸೂಚನೆ ಹೊರಡಿಸುವ ಮೊದಲು ಸಾಮಾಜಿಕ ಪರಿಣಾಮಗಳ ಅಧ್ಯಯನ, ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಬೇಕಾಗಿದೆ. ಈಗಾಗಲೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ ಎಂಆರ್ಪಿಎಲ್ ವಿಸ್ತರಣಾ ಯೋಜನೆಯನ್ನು ಹಮ್ಮಿಕೊಳ್ಳಬಹುದಾಗಿದೆ. ಈ ಹಿಂದೆ ಎಂಆರ್ಪಿಎಲ್ಗಾಗಿ ರೈತರಿಂದ ಪಡೆದ ಭೂಮಿಯನ್ನು ಹಲವು ಕಂಪೆನಿಗಳಿಗೆ ಮಾರಾಟ ಮಾಡಲಾಗಿದೆ.ಜಿಲ್ಲೆಯಲ್ಲಿ ಈಗ ಇರುವ ಧಾರಣಾ ಸಾಮರ್ಥ್ಯದ ಪ್ರಕಾರ ಇನ್ನೂ ಇಲ್ಲಿ ಯಾವುದೇ ಹೊಸ ಕೈಗಾರಿಕೆಗಳನ್ನು ಮಾಡಲು ಸಾಧ್ಯವಿಲ್ಲ ಎನ್ನುವ ವರದಿ ಇದ್ದರೂ ಎಂಆರ್ಪಿಎಲ್ನ ವಿಸ್ತರಣೆಗಾಗಿ ಕೃಷಿಕರ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಡುತ್ತಿರುವುದು ಜನ ವಿರೋಧಿಯಾದ ಕ್ರಮವಾಗಿದೆ.
ಪೆರ್ಮುದೆ ಮತ್ತು ಕುತ್ತೆತ್ತೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಯಲ್ಲಿ ಮಾರ್ಚ್ 9ರಂದು ಹಾಗೂ ಮೇ 5ರಂದು ಭೂ ಸ್ವಾಧೀನವನ್ನು ಕೈ ಬಿಡಬೇಕು ಎಂದು ನಿರ್ಣಯವನ್ನು ಕೈಗೊಳ್ಳಲಾಗಿದೆ. ಸ್ಥಳೀಯ ಜನರು ಭೂ ಸ್ವಾಧೀನತೆಯನ್ನು ವಿರೋಧಿಸಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ನೀಡಿದ್ದಾರೆ. ಈ ಅಭಿಪ್ರಾಯವನ್ನು ಸಂಗ್ರಹಿಸಿ ಸರಕಾರಕ್ಕೆ ಎಲ್ಲಾ ಅಧಿಕಾರಿಗಳಿಗೆ, ಸಚಿವರಿಗೆ ಸಲ್ಲಿಸಲಾಗಿದೆ ಎಂದು ಮಧುಕರ ಅಮೀನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿ ಲಾರನ್ಸ್ ಡಿಕುನ್ಹಾ, ಉಪಾಧ್ಯಕ್ಷರುಗಳಾದ ವಿಲಿಯಂ ಡಿಸೋಜ, ಹೇಮಲತಾ ಎಸ್. ಭಟ್ ಮೊದಲಾದವರು ಉಪಸ್ಥಿತರಿದ್ದರು.