ಕೇರಳ ಚುನಾವಣೆಯಲ್ಲಿ ಐಕ್ಯರಂಗವನ್ನು ಬೆಂಬಲಿಸಲು ಕೆ.ಎಸ್.ಮುಹಮ್ಮದ್ ಮಸೂದ್ ಮನವಿ
ಮಂಗಳೂರು, ಮೇ 14: ಕೇರಳ ರಾಜ್ಯದಲ್ಲಿ ಮೇ 16 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಐಕ್ಯರಂಗ (ಯುಡಿಎಫ್) ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸುವಂತೆ ಕರ್ನಾಟಕ ರಾಜ್ಯ ಸರಕಾರದ ಮಾಜಿ ಸಚೇತಕ, ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಕೇರಳ ರಾಜ್ಯ ಮತದಾರರಲ್ಲಿ ವಿನಂತಿಸಿದ್ದಾರೆ.
ಸಬ್ ಕ ಸಾಥ್ ಸಬ್ ಕಾ ವಿಕಾಸ್ ಎಂಬ ಧ್ಯೇಯದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇರಳ ರಾಜ್ಯ ಚುನಾವಣೆ ಪ್ರಚಾರದಲ್ಲಿ ಕೇರಳ ರಾಜ್ಯವನ್ನು ಸೋಮಾಲಿಯಕ್ಕೆ ಹೋಲಿಕೆ ಮಾಡಿರುವುದು ರಾಷ್ಟ್ರೀಯ ಅವಮಾನ ಎಂದರು. ಈ ಅವೈಜ್ಞಾನಿಕ ಹೇಳಿಕೆಯಿಂದ ಕೇರಳದಲ್ಲಿ ಬಿಜೆಪಿಗೆ ಖಾತೆ ತೆರೆಯಲು ಮತದಾರರು ಅವಕಾಶ ನೀಡಲಾರರು ಎಂಬ ಆಶಾವಾದ ವ್ಯಕ್ತಪಡಿಸಿದರು.
ಕೇರಳ ರಾಜ್ಯದಲ್ಲಿ ಈ ಮೊದಲು ಎಲ್ಡಿಎಫ್ ಆಡಳಿತದಿಂದ ಭ್ರಮನಿರಸಗೊಂಡಿರುವುದನ್ನು ಜ್ಞಾಪಿಸಿದರು. ಮುಖ್ಯಮಂತ್ರಿ ಉಮ್ಮನ್ಚಾಂಡಿಯವರ ಆಡಳಿತದಲ್ಲಿ ಪ್ರಗತಿ ಹೊಂದಿದ್ದು ಪ್ರಗತಿಯು ಮುಂದುವರೆಯಲು ಯುಡಿಎಫ್ ಗೆಲುವು ಅನಿವಾರ್ಯವಾಗಿದ್ದು ಮತದಾರರು ಐಕ್ಯರಂಗವನ್ನು ಗೆಲ್ಲಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.