ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಉತ್ತಮ ಸೇವೆ ಮಾಡಬೇಕು: ಅಲಿಕುಟ್ಟಿ ಉಸ್ತಾದ್ ಕರೆ
ಉಳ್ಳಾಲ, ಮೇ 14: ಸಾಧನೆಗಳನ್ನು ಗುರುತಿಸಿಕೊಂಡು ಅಭಿನಂದನೆ, ಸನ್ಮಾನ ಸ್ವಾಗತಾರ್ಹ. ಅದರೆ ಪರಲೋಕ ರಕ್ಷಣೆಗಾಗಿ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಉತ್ತಮ ರೀತಿಯಲ್ಲಿ ಸೇವೆ ಮಾಡಬೇಕೆಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮದ ಪ್ರಧಾನ ಕಾರ್ಯದರ್ಶಿ ಶೈಖುನಾ ಶೈಖುಲ್ ಜಾಮಿಅ ಕೆ. ಆಲಿಕುಟ್ಟಿ ಉಸ್ತಾದ್ ಕರೆ ನೀಡಿದರು.
ಅವರು ದೇರಳಕಟ್ಟೆ ರೇಂಜ್ ಮದರಸ ಮೆನೇಜ್ಮೆಂಟ್ ಸಮಸ್ತ ಕೇರಳ ಜಂ-ಇಯ್ಯತುಲ್ ಮುಅಲ್ಲಿಮೀನ್ ಹಾಗೂ ಸಮಸ್ತದ ಎಲ್ಲಾ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ದೇರಳಕಟ್ಟೆ ಮಸೀದಿ ವಠಾರದಲ್ಲಿ ಶುಕ್ರವಾರ ನಡೆದ ಅಭಿನಂದನೆ ಮತ್ತು ಚೆರುಶ್ಯೇರಿ ಉಸ್ತಾದ್ರ ಅನುಸ್ಮರಣಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪ್ರವಾದಿಯವರು ಇಸ್ಲಾಂ ಧರ್ಮದ ಬೆಳವಣಿಗೆಗಾಗಿ ಬಹಳಷ್ಟು ಶ್ರಮಪಟ್ಟವರು. ಅವರು ಬೋಧಿಸಿದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಇಸ್ಲಾಂ ಅಭಿವೃದ್ಧಿಗಾಗಿ ಬಹಳಷ್ಟು ಪ್ರಯತ್ನ ಮಾಡಬೇಕಾಗಿದೆ. ಅದೇ ರೀತಿ ಅಭಿವೃದ್ಧಿ ಕೆಲಸ ಮಾಡುವವರಿಗೆ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ಮಾತನಾಡಿ, ಇಸ್ಲಾಂ ಧರ್ಮಕ್ಕಾಗಿ ಸೇವೆ ಮಾಡಿದವರನ್ನು ಗುರುತಿಸಿ ಅಭಿನಂದನೆ ಮಾಡುವುದು ನಮ್ಮ ಕರ್ತವ್ಯ. ಅದೇ ರೀತಿ ಧಾರ್ಮಿಕ ಶಿಕ್ಷಣವನ್ನು ಮನೆ ಮನೆ ತಲುಪಿಸುವಂತಹ ಕಾರ್ಯ ನಮ್ಮಿಂದಾಗಬೇಕು. ಧರ್ಮದ ಬೆಳೆವಣಿಗೆಗೆ ಸಾಧನೆಗಳ ಅಗತ್ಯತೆ ಬಹಳಷ್ಟಿದೆ ಎಂದರು.
ಈ ಸಂದರ್ಭದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ನ ನೂತನ ಪ್ರಧಾನ ಕಾರ್ಯದರ್ಶಿ ಶೈಖುನಾ ಶೈಖುಲ್ ಜಾಮಿಅ ಕೆ. ಆಲಿಕುಟ್ಟಿ ಉಸ್ತಾದ್ರನ್ನು ಸನ್ಮಾನಿಸಲಾಯಿತು.
ಸೈಯದ್ ಅಮೀರ್ ತಂಙಳ್ ದುಆ ನೆರವೇರಿಸಿದರು. ಕರ್ನಾಟಕ ರಾಜ್ಯ ಜಂಇಯತುಲ್ ಉಲಮಾ ಕಾರ್ಯದರ್ಶಿ ಬಿ.ಕೆ. ಅಬ್ದುಲ್ ಖದಿರ್ ಅಲ್ ಖಾಸಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖಾಸಿಂ ದಾರಿಮಿ ಕಿನ್ಯಾ ದಿಕ್ಸೂಚಿ ಭಾಷಣ ಮಾಡಿದರು.
ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಪ್ರಾಂಶುಪಾಲ ಅಡ್ವಕೇಟ್ ಹನೀಫ್ ಹುದವಿ ದೇಲಂಪಾಡಿ ಮುಖ್ಯ ಭಾಷಣ ಮಾಡಿದರು.
ಎಸ್ಕೆಎಸ್ಸೆಸ್ಸೆಫ್ ಕಿನ್ಯಾ ಶಾಖೆಯ ಅಧ್ಯಕ್ಷ ಅಸೈಯದ್ ಇಬ್ರಾಹೀಂ ಬಾತಿಷಾ ತಂಙಳ್, ಅಸೈಯದ್ ಕರಾವಳಿ ತಂಙಳ್, ಪಾತೂರು ಉಸ್ತಾದ್, ಕೇಂದ್ರ ಜುಮಾ ಮಸೀದಿ ಮಂಗಳೂರಿನ ಖತೀಬ್ ಸ್ವದಕತುಲ್ಲಾ ಫೈಝಿ, ಕಿನ್ಯಾ ಜುಮ ಮಸೀದಿ ಮುದರ್ರಿಸ್ ಅಬೂಬಕರ್ ಅಲ್ ಖಾಸಿಮಿ, ಅಬ್ದುಲ್ ಅಝೀಝ್ ಫೈಝಿ, ಕಿನ್ಯ ಮದ್ರಸದ ಸದ್ರ್ ಮುಅಲ್ಲಲಿಂ ಫಾರುಕ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.
ದೇರಳಕಟ್ಟೆ ರೇಂಜ್ ಮದ್ರಸ ಮೆನೇಜ್ಮೆಂಟ್ ಅಸೋಸಿಯೇಶನ್ನ ಅಧ್ಯಕ್ಷ ಮೊಯ್ದಿನ್ ಕುಂಞಿ ಮರಾಠಿಮೂಲೆ ಅತಿಥಿಗಳನ್ನು ಸ್ವಾಗತಿಸಿದರು.
ದೇರಳಕಟ್ಟೆ ಮದ್ರಸ ಮೆನೇಜ್ಮೆಂಟ್ ಅಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಧನ್ಯವಾದ ಸಮರ್ಪಿಸಿದರು. ಪಯ್ಯಕಿ ಅಕಾಡೆಮಿ ವಿದ್ಯಾರ್ಥಿ ಅದ್ನಾನ್ ಕಾರ್ಯಕ್ರಮ ನಿರೂಪಿಸಿದರು.