ನಾಗರಿಕ ಸೇವಾ ಕ್ಷೇತ್ರದಲ್ಲಿ ಯಾಕೆ ಇನ್ನೂ ಹೆಚ್ಚು ಮುಸ್ಲಿಮರು ಇರಬೇಕು?

ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ 2014ನೆ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ 1,236 ಯಶಸ್ವಿ ಅಭ್ಯರ್ಥಿಗಳಲ್ಲಿ ಐವರು ಮಹಿಳೆಯರೂ ಸೇರಿದಂತೆ 38 ಮುಸ್ಲಿಮರು ಇದ್ದಾರೆ ಎಂಬ ಸುದ್ದಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಳೆದ ಕೆಲವು ವರ್ಷಗಳಿಂದ ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮುಸ್ಲಿಮರ ಸಂಖ್ಯೆ ಶೇಕಡಾ ಮೂರರ ಆಸುಪಾಸಿನಲ್ಲೇ ಅಲೆದಾಡುತ್ತಿದೆ. 2013ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 1,122 ಮಂದಿಯ ಪೈಕಿ 34 ಅಂದರೆ 3.03 ಶೇಕಡಾ ಮುಸ್ಲಿಮರಾಗಿದ್ದರು. 2012ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಕೇವಲ 31 ಮಂದಿ ಮುಸ್ಲಿಮರು 998 ಜನರ ಕೊನೆಯ ಪಟ್ಟಿಯಲ್ಲಿ ಸ್ಥಾನಗಳಿಸುವಲ್ಲಿ ಸಫಲರಾಗಿದ್ದರು, ಅಂದರೆ ಶೇಕಡಾ 3.10. ದೃಢೀಕೃತ ಅಂಕಿಅಂಶಗಳ ಪ್ರಕಾರ ನಾಗರಿಕ ಸೇವಾ ಕ್ಷೇತ್ರಗಳ ಪೈಕಿ ಮುಸ್ಲಿಮರು ಐಎಎಸ್ನಲ್ಲಿ ಶೇಕಡಾ ಮೂರು, ಐಎಫ್ಎಸ್ನಲ್ಲಿ ಶೇಕಡಾ 1.8 ಮತ್ತು ಐಪಿಎಸ್ನಲ್ಲಿ ಶೇಕಡಾ ನಾಲ್ಕು ಇದ್ದಾರೆ.
ದೇಶದ ಜನಸಂಖ್ಯೆಯಲ್ಲಿ ಶೇಕಡಾ ಹದಿನಾಲ್ಕು ಮುಸ್ಲಿಮರಿದ್ದಾರೆ ಎಂಬ ವಾಸ್ತವದೊಂದಿಗೆ ಈ ಅಂಕಿಅಂಶವನ್ನು ತಾಳೆ ಹಾಕಿದಾಗ ಶೇಕಡಾ ಮೂರು ನಿಜವಾಗಿಯೂ ಬೇಸರ ಮೂಡಿಸುವ ಅಂಕೆ. ಜನಸಂಖ್ಯೆಯ ಪಾಲಿನ ಆಧಾರದ ಮೇಲೆ ಕನಿಷ್ಠವೆಂದರೂ 170-180 ಮುಸ್ಲಿಮ್ ಅಭ್ಯರ್ಥಿಗಳು ಇರಬೇಕು ಎಂದು ನಿರೀಕ್ಷಿಸಬಹುದು.
ಆದರೆ ಪರೀಕ್ಷೆಗೆ ಅರ್ಜಿ ಹಾಕಿದ 9.5 ಲಕ್ಷ ಅಭ್ಯರ್ಥಿಗಳ ಪೈಕಿ ಕೇವಲ ಎರಡು ಸಾವಿರ ಮಂದಿ ಅಂದರೆ 0.21 ಶೇಕಡಾ ಮುಸ್ಲಿಮರಾಗಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಂಡರೆ, ಶೇಕಡಾ ಮೂರು ಮುಸ್ಲಿಮರು ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದೆಂದರೆ ಅವರಲ್ಲಿ ಅಗಾಧವಾದ ಪ್ರತಿಭೆ ಇದೆ ಎಂಬುದನ್ನು ಸೂಚಿಸುತ್ತದೆ.
ಶಿಕ್ಷಣ
ಮೇಲಿನ ವಿನ್ಯಾಸ ಏನನ್ನು ದೃಢಪಡಿಸುತ್ತದೆ ಎಂಬುದು ಬಹಳ ಸರಳ. ಈ ಪರೀಕ್ಷೆಗಳಿಗೆ ಹಾಜರಾಗುವ ಮುಸ್ಲಿಮರ ಸಂಖ್ಯೆಯನ್ನು ಈಗಿನ 0.21 ಶೇಕಡಾದಿಂದ ಹೆಚ್ಚು ಮಾಡಿದರೆ, ಆಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮುಸ್ಲಿಮರ ಸಂಖ್ಯೆಯೂ ಗಣನೀಯವಾಗಿ ಏರಿಕೆ ಕಾಣುತ್ತದೆ. ಆದರೆ ಇಲ್ಲಿ ಮೂಡುವ ಪ್ರಶ್ನೆಯೆಂದರೆ, ಮೊದಲನೆಯದಾಗಿ ಈ ಪರೀಕ್ಷೆಗಳಲ್ಲಿ ಭಾಗವಹಿಸುವಂತೆ ಮುಸ್ಲಿಮ್ ಯುವಕ ಮತ್ತು ಯುವತಿಯರ ಮನವೊಲಿಸುವುದಾದರೂ ಹೇಗೆ?.
ಈ ಬಗ್ಗೆ ಮೊದಲು ಬೆಳಕು ಚೆಲ್ಲಬೇಕಾದ ಅಂಶ ಮುಸ್ಲಿಮರಿಗೆ ಉನ್ನತ ಶಿಕ್ಷಣ. ಯುಪಿಎಸ್ಸಿ ಪರೀಕ್ಷೆಗೆ ಅರ್ಹರಾಗಬೇಕಾದರೆ ಇರುವ ಒಂದು ನಿಬಂಧನೆಯೆಂದರೆ ಅಭ್ಯರ್ಥಿ ಪದವೀಧರರಾಗಿರಬೇಕು. ಸಾಚಾರ್ ಸಮಿತಿ ವರದಿಯ ಪ್ರಕಾರ ಮುಸ್ಲಿಮರ ಪೈಕಿ 20ರ ಹರೆಯಕ್ಕಿಂತ ಮೇಲ್ಪಟ್ಟವರಲ್ಲಿ ಕೇವಲ ಶೇಕಡಾ ನಾಲ್ಕು ಪದವೀಧರರಾಗಿದ್ದಾರೆ, ಇದು ಸಾಮಾನ್ಯ ಜನಸಂಖ್ಯೆಯ ಅನುಪಾತಕ್ಕಿಂತ ಕಡಿಮೆ. ಮುಸ್ಲಿಮರ ಪೈಕಿ ಶಿಕ್ಷಣ ಮಟ್ಟವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಿದೆ ಮತ್ತು ಶಾಲೆ ಬಿಡುವ ಪ್ರಮಾಣ ಹೆಚ್ಚಿದೆ. ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವರದಿಯ ಪ್ರಕಾರ ಮುಸ್ಲಿಮ್ ವಿದ್ಯಾರ್ಥಿಗಳು ಶಾಲೆ ಬಿಡುವ ಪ್ರಮಾಣವು 8 ಮತ್ತು 9ನೆ ತರಗತಿಯಲ್ಲಿ ಶೇಕಡಾ ಐವತ್ತರಷ್ಟು ಹೆಚ್ಚಿದೆ. ಮುಸ್ಲಿಮರಲ್ಲಿ ಶಿಕ್ಷಣದ ಹಿಂದುಳಿಯುವಿಕೆ ಒಂದು ವಾಸ್ತವವಾಗಿದ್ದು ಗುಣಾತ್ಮಕ ಕ್ರಮಗಳು, ಶೈಕ್ಷಣಿಕ ವಿದ್ಯಾರ್ಥಿವೇತನ ಮತ್ತು ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ, ಜಾಮಿಯಾ ಮುಂತಾದ ಶೈಕ್ಷಣಿಕ ಸಂಸ್ಥೆಗಳನ್ನು ವಿಸ್ತರಿಸುವಂತಹ ಸೂಕ್ತ ಕ್ರಮಗಳನ್ನು ಸರಕಾರಗಳು ತೆಗೆದುಕೊಳ್ಳಬೇಕು. ಈ ರೀತಿ ಮಾಡಿದಾಗ ಮತ್ತು ಸಮುದಾಯದಿಂದ ಸೃಷ್ಟಿಯಾಗುವ ಪದವೀಧರರ ಸಂಖ್ಯೆ ರಾಷ್ಟ್ರೀಯ ಸರಾಸರಿ ಜೊತೆ ಸರಿದೂಗಿದಾಗ ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ಅರ್ಹರಾಗುವ ಮುಸ್ಲಿಮ್ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತದೆ. ಹೆಚ್ಚೆಚ್ಚು ವಿದ್ಯಾರ್ಥಿಗಳು ಹಾಜರಾದಾಗ ಉತ್ತೀರ್ಣರಾಗುವವರ ಸಂಖ್ಯೆಯೂ ಹೆಚ್ಚಾಗುತ್ತದೆ.
ಎಎಂಯುನ ನಸೀಮ್ ಝೈದಿ ಸದ್ಯ ಇರುವ ಅಂಕಿಅಂಶಗಳನ್ನು ಆಸಕ್ತಿದಾಯಕವಾಗಿ ವಿಶ್ಲೇಷಿಸಿದ್ದಾರೆ. ಎರಡು ಗುಂಪುಗಳನ್ನು ಮಾಡಲಾಯಿತು. ಮೊದಲನೆಯದು, ಅಲಿಗಡ್ ಮುಸ್ಲಿಂ ವಿಶ್ವವಿದ್ಯಾನಿಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಜಮ್ಮು ಮತ್ತು ಕಾಶ್ಮೀರ ವಿಶ್ವವಿದ್ಯಾನಿಲಯ ಮತ್ತು ಕ್ಯಾಲಿಕಟ್ ವಿಶ್ವವಿದ್ಯಾನಿಲಯ, ಈ ಗುಂಪಿಗೆ ಮುಸ್ಲಿಂ ವಿದ್ಯಾರ್ಥಿಗಳ ತಾಣ ಎಂದು ನಾಮಕರಣ ಮಾಡಲಾಯಿತು. ಎರಡನೆಯದು ಅಲಹಾಬಾದ್ ವಿಶ್ವವಿದ್ಯಾನಿಲಯ, ಲಕ್ನೊ ವಿಶ್ವವಿದ್ಯಾನಿಲಯ, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ ಮತ್ತು ರಾಜಸ್ಥಾನ್ ವಿಶ್ವವಿದ್ಯಾನಿಲಯಗಳನ್ನೊಳಗೊಂಡ ಗುಂಪು.
ಅರ್ಜಿದಾರರು
ಮುಸ್ಲಿಮ್ ವಿಶ್ವವಿದ್ಯಾನಿಲಯಗಳ ಗುಂಪಿನ ಅರ್ಜಿದಾರರ (ಶೇ.10.2) ಯಶಸ್ಸಿನ ದರ ಸಾಮಾನ್ಯ ಗುಂಪುಗಿಂತ (ಶೇ.4.3) ಹೆಚ್ಚಾಗಿದೆ ಎಂಬುದನ್ನು ನಸೀಮ್ ಕಂಡುಕೊಂಡಿದ್ದು ಮಾತ್ರವಲ್ಲದೆ, ಈ ನಾಲ್ಕು ಮುಸ್ಲಿಮರು ಹೆಚ್ಚಾಗಿರುವ ವಿಶ್ವವಿದ್ಯಾನಿಲಯಗಳಲ್ಲಿ ಸರಾಸರಿ ವಾರ್ಷಿಕ ಅರ್ಜಿ ಹಾಕುವವರ ಸಂಖ್ಯೆ 25ಕ್ಕಿಂತಲೂ ಕಡಿಮೆಯಿದ್ದರೆ ಇತರ ವಿಶ್ವವಿದ್ಯಾನಿಲಯಗಳಲ್ಲಿ ಈ ಸಂಖ್ಯೆ 444 ಇತ್ತು! ಇದರಿಂದ ಸ್ಪಷ್ಟವಾಗುವುದೇನೆಂದರೆ, ಅರ್ಹ ಮುಸ್ಲಿಮ್ ಅಭ್ಯರ್ಥಿಗಳ ಪೈಕಿ ಕೂಡಾ ಪರೀಕ್ಷೆಗೆ ಅರ್ಜಿ ಹಾಕುವವರ ಸಂಖ್ಯೆ ಬಹಳ ಕಡಿಮೆ. ಇಲ್ಲಿ, ವಜಾಹತ್ ಹಬೀಬುಲ್ಲಾ ಮತ್ತು ನಜೀಬ್ ಜಂಗ್ ಮತ್ತು ಅಗ್ರ ಶ್ರೇಯಾಂಕಿತರಾದ ಶಾಹ್ ಫೈಸಲ್ ಮತ್ತು ಡಾ. ಸೈಯದ್ ಸೆಹ್ರಿಶ್ ಅಸ್ಗರ್ ಮುಂತಾದವರನ್ನು ಆದರ್ಶಪ್ರಾಯರನ್ನಾಗಿಸಿ ಸಮುದಾಯದ ವಿದ್ಯಾರ್ಥಿಗಳನ್ನು ನಾಗರಿಕ ಸೇವಾ ಕ್ಷೇತ್ರವನ್ನು ಆಯ್ಕೆ ಮಾಡಲು ಗಂಭೀರವಾಗಿ ಯೋಚಿಸುವಂತೆ ಪ್ರೇರೇಪಿಸಬಹುದು.
ಜಾಗೃತಿ
ಮುಸ್ಲಿಮರ ಬಹುದೊಡ್ಡ ಸಂಖ್ಯೆ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿ ಜೀವಿಸುತ್ತಿದೆ. ಸುಶಿಕ್ಷಿತ ಮುಸ್ಲಿಮರು ತಮ್ಮ ಕುಟುಂಬದ ಬಡತನವನ್ನು ಎದುರಿಸಬೇಕಾಗಿರುವ ಕಾರಣ ತಮ್ಮ ಸಮಯ, ಹಣ ಮತ್ತು ಸಂಪನ್ಮೂಲಗಳನ್ನು ಯುಪಿಎಸ್ಸಿ ಪರೀಕ್ಷೆಗೆ ಸಜ್ಜಾಗಲು ಪ್ರತಿದಿನ ಅಗತ್ಯವಿರುವ ಸಂಪೂರ್ಣ ಹನ್ನೆರಡು ಗಂಟೆಗಳ ಸಮಯವನ್ನು ಮೀಸಲಿಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಏನು ಮಾಡಬೇಕೆಂದರೆ, ಸರಕಾರ ಮತ್ತು ವಕ್ಫ್ ಆಸ್ತಿಯಿಂದ ಉತ್ತಮ ಆದಾಯಗಳಿಸುವ ವಕ್ಫ್ ಮಂಡಳಿ ಸೇರಿದಂತೆ ಖಾಸಗಿ ಮುಸ್ಲಿಮ್ ಸಂಸ್ಥೆಗಳು ನಾಗರಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಅಗತ್ಯವಿರುವ ಶಿಕ್ಷಣಕ್ಕೆ ಬಂಡವಾಳವನ್ನು ಪೂರೈಸಬೇಕು ಮತ್ತು ಹೀಗೆ ಮಾಡುವ ಮೂಲಕ ಅವರು ನಾಗರಿಕ ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು, ವೃತ್ತಿಪರ ಯುಪಿಎಸ್ಸಿ ತರಬೇತಿ ಕೇಂದ್ರಗಳ ಜಾಲವನ್ನು ಮತ್ತು ಅಧ್ಯಯನಗಳನ್ನು ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಕಡೆ ವಿಸ್ತರಿಸಬೇಕು. ಹಿಂದುಳಿದ ವರ್ಗ ಮತ್ತು ಎಸ್ಸಿ/ಎಸ್ಟಿ ಪಂಗಡಗಳಿಗೆ ಮಾಡಿದಂತೆ ಯುಪಿಎಸ್ಸಿ ಪರೀಕ್ಷೆ ಬರೆಯಲು ಇರುವ ಗರಿಷ್ಠ ವಯಸ್ಸು ಮತ್ತು ಪ್ರಯತ್ನಗಳ ಸಂಖ್ಯೆಯನ್ನು ಮುಸ್ಲಿಮರಿಗೂ ಸಡಿಲಗೊಳಿಸಬೇಕು. ಸ್ವಾತಂತ್ರ್ಯದ ನಂತರ ಮುಸ್ಲಿಮರು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ರಾಜಕೀಯ ಅಧಿಕಾರವನ್ನು ಪಡೆಯುವಲ್ಲಿ ಶೇಕಡಾ 50ಕ್ಕಿಂತಲೂ ಹೆಚ್ಚು ವಂಚಿತರಾಗಿದ್ದಾರೆ. ಮುಸ್ಲಿಮರನ್ನು ಮುಖ್ಯವಾಹಿನಿಗೆ ಕರೆತರಲು ಮತ್ತು ದೇಶದ ರಾಜಕೀಯ ಮತ್ತು ಆಡಳಿತಾತ್ಮಕ ರಚನೆಯೊಂದಿಗೆ ಸೇರಿಸಲು ಇರುವ ಒಂದೇ ದಾರಿಯೆಂದರೆ ನಾಗರಿಕ ಸೇವೆಗಳು. ಇದನ್ನು ನಿರ್ಲಕ್ಷಿಸಿದರೆ ತಮಗೇ ಅಪಾಯ ತಂದೊಡ್ಡಿ ಮುಸ್ಲಿಮರನ್ನು ಈ ದೇಶದ ಹೊಸ ದಲಿತರನ್ನಾಗಿಸಿ ಮತ್ತಷ್ಟು ಹಿಂದುಳಿಕೆ ಮತ್ತು ಅಸಮಾನತೆಯತ್ತ ದೂಡಿದಂತಾಗುತ್ತದೆ.







