ಮೇ 21ರಂದು ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ನ ನೂತನ ಕಟ್ಟಡ ಉದ್ಘಾಟನೆ
ಮೂಡುಬಿದಿರೆ, ಮೇ 14: ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಸುವರ್ಣ ಮಹೋತ್ಸವದ ನೆನಪಿಗಾಗಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ ಕಟ್ಟಡದ ಉದ್ಘಾಟನೆಯು ಮೇ 21ರಂದು ಅಪರಾಹ್ನ 3 ಗಂಟೆಗೆ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.
ಶುಕ್ರವಾರ ಬ್ಯಾಂಕಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 10 ಸಾವಿರ ಚದರ ಅಡಿಯ ಕಟ್ಟಡದ ತಳ ಅಂತಸ್ತಿನಲ್ಲಿ ರೈತರ ಕೃಷಿ ಉತ್ಪನ್ನ ದಾಸ್ತಾನು, ರಾಸಾಯನಿಕ ಗೊಬ್ಬರ ಹಾಗೂ ಪಡಿತರ ವಿತರಣೆಗೆ ಪ್ರತ್ಯೇಕ ಗೋದಾಮು ವ್ಯವಸ್ಥೆಯಿದೆ. ಮೊದಲ ಅಂತಸ್ತಿನಲ್ಲಿ ಆಧುನಿಕ ವ್ಯವಸ್ಥೆಯನ್ನೊಳಗೊಂಡ ಆಡಳಿತ ಕಛೇರಿ, ಕಂಪ್ಯೂಟರೀಕೃತ ಬ್ಯಾಂಕಿಂಗ್ ವ್ಯವಸ್ಥೆ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಪೈಪೋಟಿ ನೀಡುವಂತೆ ಉನ್ನತೀಕರಿಸಲಾಗಿದೆ. ಎರಡನೇ ಅಂತಸ್ತಿನಲ್ಲಿ ಬ್ಯಾಂಕಿನ ಹಾಗೂ ಸ್ವಸಹಾಯ ಸದಸ್ಯರಿಗೆ ಅನುಕೂಲವಾಗುವಂತೆ 300 ಆಸನ ವ್ಯವಸ್ಥೆಯ ಸಭಾಭವನವನ್ನು ನಿರ್ಮಿಸಲಾಗಿದೆ.
ಬ್ಯಾಂಕ್ ಪ್ರಸ್ತುತ 2,500 ಸದಸ್ಯರನ್ನು ಹೊಂದಿದ್ದು 15 ಕೋಟಿ ಠೇವಣಿ ಮತ್ತು 50 ಕೋಟಿ ವ್ಯವಹಾರವನ್ನು ಹೊಂದಿದೆ. ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡುತ್ತಿದ್ದು ಲೆಕ್ಕ ಪರಿಶೋಧನೆಯಲ್ಲಿ ಎ ಗ್ರೇಡ್ ಹೊಂದಿದೆ. ಶಿರ್ತಾಡಿಯಲ್ಲಿ ಶಾಖೆ ಹೊಂದಿದ್ದು ಮೂಡು, ಪಡುಕೊಣಾಜೆ ಹಾಗೂ ಶಿರ್ತಾಡಿಯಲ್ಲಿ ಪ್ರತ್ಯೇಕ ಪಡಿತರ ವ್ಯವಸ್ಥೆಯನ್ನು ಹೊಂದಿದೆ ಎಂದರು.
ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದು, ಸಚಿವ ಅಭಯಚಂದ್ರ ಜೈನ್ ಸಭಾಭವನವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಭದ್ರತಾ ಕೋಶವನ್ನು ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯರಾದ ಕ್ಯಾ ಗಣೇಶ್ ಕಾರ್ಣಿಕ್, ಕೋಟ ಶ್ರೀ ನಿವಾಸ ಪೂಜಾರಿ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಪುರಸಭಾಧ್ಯಕ್ಷೆ ರೂಪಾ ಸಂತೋಷ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಬ್ಯಾಂಕಿನ ಸದಸ್ಯರಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಗುವುದು. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಪುರುಷೋತ್ತಮ ಶೆಟ್ಟಿ, ಉಪಾಧ್ಯಕ್ಷ ಲಕ್ಷ್ಮೀಶ ಶೆಟ್ಟಿ, ನಿರ್ದೇಶಕರಾದ ಶ್ರೀಧರ ಕೆ, ಬಾಲಕೃಷ್ಣ ಸಾಲ್ಯಾನ್, ಕೂಕ್ರ ನಲಿಕೆ, ಶಶಿಧರ ಶೆಟ್ಟಿ, ತಾರನಾಥ ಶೆಟ್ಟಿ, ಶಶಿಧರ ಎಸ್, ನಳಿನ್ ಆರ್. ಹೆಗ್ಡೆ, ಪೂರ್ಣಿಮಾ ಶೆಟ್ಟಿ, ಸಿಪ್ರಿಯನ್ ಪಿಂಟೊ ಉಪಸ್ಥಿತರಿದ್ದರು.