ಉ.ಪ್ರ.-ಬಿಹಾರ ರೈಲಿನಲ್ಲಿ ಪೊಲೀಸ್ ಜವಾನನ ಹತ್ಯೆ
ಹೊಸದಿಲ್ಲಿ, ಮೇ 14: ಕಳೆದ ರಾತ್ರಿ ವಾರಣಾಸಿ ಹಾಗೂ ಬಕ್ಸಾರ್ಗಳ ನಡುವೆ ಚಲಿಸುತ್ತಿದ್ದ ಪ್ಯಾಸೆಂಜರ್ ರೈಲೊಂದರಲ್ಲಿ ಸರಕಾರಿ ರೈಲ್ವೆ ಪೊಲೀಸ್ ಜವಾನನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಹಂತಕರು ಇನ್ನೊಬ್ಬನನ್ನು ಗಾಯಗೊಳಿಸಿದ್ದಾರೆ. ದುಷ್ಕರ್ಮಿಗಳು ರೈಲ್ವೆ ಪೊಲೀಸರ ಐಎನ್ಎಸ್ಎಎಸ್ ರೈಫಲ್ಗಳನ್ನು ಅಪಹರಿಸಿದ್ದಾರೆ.
ನಿನ್ನೆ ರಾತ್ರಿ 11 ಗಂಟೆಯ ವೇಳೆ ನಾಲ್ವರು ದಾಳಿಕೋರರು ಇಬ್ಬರು ಭದ್ರತಾ ಜವಾನರ ಮೇಲೆ ಗುಂಡು ಹಾರಿಸಿದರು. ಉತ್ತರಪ್ರದೇಶದ ನರಹಿ ಗ್ರಾಮದ ನಿವಾಸಿ ಅಭಿಷೇಕ್ ಸಿಂಗ್ ಎಂಬ ಜಿಆರ್ಪಿ ಜವಾನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಸಹೋದ್ಯೋಗಿ ನಂದಲಾಲ್ ಯಾದವ್ ಎಂಬಾತ ತೀವ್ರವಾಗಿ ಗಾಯಗೊಂಡನೆಂದು ರೈಲ್ವೆ ಎಸ್ಪಿ ಜಿತೇಂದ್ರ ಮಿಶ್ರಾ ಇಂದು ತಿಳಿಸಿದ್ದಾರೆ.
ಗಾಯಾಳು ಜವಾನ ಬಕ್ಸಾರ್ನ ಜೆಆರ್ಪಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದನು. ಆದರೆ ಜವಾನರಿಂದ 2 ಐಎನ್ಎಸ್ಎಎಸ್ ರೈಫಲ್ಗಳನ್ನು ಕಸಿದುಕೊಂಡ ದುಷ್ಕರ್ಮಿಗಳು ಬಕ್ಸಾರ್ ತಲುಪುವ ಮೊದಲೇ ರೈಲಿನಿಂದಿಳಿದು ಪರಾರಿಯಾದರು. ಗಾಯಾಳು ಜವಾನನಿಗೆ ಬಕ್ಸಾರ್ನಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ, ವಾರಣಾಸಿಗೆ ಕೊಂಡೊಯ್ಯಲಾಗಿದೆಯೆಂದು ಮಿಶ್ರಾ ವಿವರಿಸಿದ್ದಾರೆ.
ಇದೇ ವೇಳೆ, ಇಬ್ಬರು ಕಾನ್ಸ್ಟೇಬಲ್ಗಳನ್ನು ಎಸ್ಕಾರ್ಟ್ಕರ್ತವ್ಯಕ್ಕೆ ನಿಯೋ ಜಿಸಲಾಗಿತ್ತು. ರೈಲು ಚೌಸಾ ನಿಲ್ದಾಣದಿಂದ ಬಕ್ಸಾರ್ಗೆ ಹೊರಟೊಡನೆಯೇ ಈ ಘಟನೆ ನಡೆದಿದೆ. ದಾಳಿಕೋರರು ಮದ್ದುಗುಂಡುಗಳನ್ನು ಲೂಟಿ ಮಾಡಿದ್ದು, ರೈಲು ನಿಧಾನಗೊಂಡೊಡನೆಯೇ ಹೊರಗೆ ಹಾರಿ ಪರಾರಿಯಾದರೆಂದು ಮುಗಲ್ ಸರಾಯಿ ಜಿಆರ್ಪಿ ತ್ರಿಪುರಾರಿ ಪಾಂಡೆ ತಿಳಿಸಿದ್ದಾರೆ.