ವೃದ್ಧಾಶ್ರಮದಲ್ಲಿ ಬದುಕುತ್ತಿರುವ ಗಾಂಧೀಜಿಯ ಮೊಮ್ಮಗ
ಸಹಾಯ ಹಸ್ತ ಚಾಚಿದ ಕೇಜ್ರಿವಾಲ್ ಸರಕಾರ
ಹೊಸದಿಲ್ಲಿ, ಮೇ 15: ಇಲ್ಲಿನ ಬಾದರ್ಪುರ ಪ್ರದೇಶದಲ್ಲಿ ಮಹಾತ್ಮ ಗಾಂಧೀಜಿಯವರ ಮೊಮ್ಮಗ ಹಾಗೂ ಅವರ ಪತ್ನಿ ಅನಾಥಾಶ್ರಮದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂಬ ಸುದ್ದಿ ಸ್ಫೋಟ ರಾಜಧಾನಿಯಲ್ಲಿ ಸಂಚಲನ ಮೂಡಿಸಿದೆ.
ದ ಹಿಂದೂ ಪತ್ರಿಕೆಯಲ್ಲಿ ಈ ಕುರಿತ ವರದಿ ಪ್ರಕಟವಾದ ತಕ್ಷಣ ದೆಹಲಿ ರಾಜ್ಯ ಸರ್ಕಾರ, ಗಾಂಧಿ ಮೊಮ್ಮಗ ಕನುಭಾಯ್ ರಾಮದಾಸ್ ಗಾಂಧಿ ಕುಟುಂಬದ ನೆರವಿಗೆ ಧಾವಿಸಿದ್ದಾರೆ.
ದೆಹಲಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಖಾತೆ ಸಚಿವ ಸಂದೀಪ್ ಕುಮಾರ್ ಅವರು 87 ವರ್ಷದ ಗಾಂಧಿ ಹಾಗೂ ಅವರ ಪತ್ನಿ ಡಾ.ಶಿವಲಕ್ಷ್ಮಿ ಗಾಂಧಿ (85) ಅವರನ್ನು ಗುರು ವಿಶ್ರಾಮ ವೃದ್ಧ ಆಶ್ರಮದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಕನುಭಾಯ್ ಅವರ ಭೇಟಿ ಹೃದಯ ಸ್ಪರ್ಶಿಯಾಗಿತ್ತು ಎಂದು ಸಚಿವರು ವಿವರಿಸಿದ್ದಾರೆ. ಈ ದಂಪತಿಗೆ ಯಾವುದೇ ಬಗೆಯ ನೆರವು ನೀಡಲು ದೆಹಲಿ ಸರ್ಕಾರ ಸಿದ್ಧ ಎಂದು ಅವರಿಗೆ ಸಚಿವರು ಭರವಸೆ ನೀಡಿದ್ದಾರೆ.
ಸಚಿವರು ಸುಮಾರು 15 ನಿಮಿಷ ಕಾಲ ದಂಪತಿ ಜತೆ ಚರ್ಚೆ ನಡೆಸಿದರು ಎಂದು ವೃದ್ಧಾಶ್ರಮದ ಸಂಸ್ಥಾಪಕ ಡಾ.ಜಿ.ಪಿ.ಭಗತ್ ವಿವರಿಸಿದರು.
"ಕನೂಭಾಯ್ ನಿರ್ದಿಷ್ಟವಾಗಿ ಯಾವ ನೆರವೂ ಯಾಚಿಸಿಲ್ಲ. ಸಚಿವರ ದೂರವಾಣಿ ಸಂಖ್ಯೆಯನ್ನು ಪಡೆದು, ಯಾವುದೇ ನೆರವು ಬೇಕಾದಲ್ಲಿ ಕೇಳುವುದಾಗಿ ಹೇಳಿದರು. ಆದರೆ ವೃದ್ಧಾಶ್ರಮಕ್ಕೆ ಪದೇ ಪದೇ ಭೇಟಿ ನೀಡುವಂತೆ ಮನವಿ ಮಾಡಿದರು. ಜನರನ್ನು ಭೇಟಿಯಾಗುದನ್ನು ಅವರು ಇಷ್ಟಪಡುತ್ತಾರೆ" ಎಂದು ಭಗತ್ ಹೇಳಿದರು.
ಕನೂಭಾಯ್ ಅವರ ಅಳಿಯ ತುಷಾರ್ಗಾಂಧಿ, ದ ಹಿಂದೂ ವರದಿಗೆ ಪ್ರತಿಕ್ರಿಯಿಸುವ ಟ್ವೀಟ್ ಮಾಡಿ, ಮಾವ ಹಾಗೂ ಕುಟುಂಬಕ್ಕೆ ಸಾಬರಮತಿ ಆಶ್ರಮ ಹಾಗೂ ಗುಜರಾತ್ ವಿದ್ಯಾಪೀಠದಲ್ಲಿ ಕಾಯಂ ಉಚಿತ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.