ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸಮನ್ಸ್
ದಿಲ್ಲಿ ಸರಕಾರದ ಜೊತೆ ಜಂಗಿ ಕುಸ್ತಿ
ಹೊಸದಿಲ್ಲಿ, ಮೇ 15: ಕೇಂದ್ರ ಹಾಗೂ ದಿಲ್ಲಿ ರಾಜ್ಯ ಸರಕಾರಗಳ ನಡುವಿನ ಅಧಿಕಾರ ವ್ಯಾಪ್ತಿ ಸಂಬಂಧದ ಜಂಗಿ ಕುಸ್ತಿ ಸಂಬಂಧ ದಿಲ್ಲಿ ಸರಕಾರ ಸಂವಿಧಾನದ 131ನೆ ವಿಧಿ ಅನ್ವಯ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಸುಪ್ರೀಂಕೋರ್ಟ್ ಈ ಸಂಬಂಧ ಕೇಂದ್ರ ಸರಕಾರಕ್ಕೆ ಸಮನ್ಸ್ ಜಾರಿಗೊಳಿಸಿದೆ.
ಕೇಂದ್ರ ಹಾಗೂ ಎಎಪಿ ಸರಕಾರ ನಡುವಿನ ಅಧಿಕಾರ ವ್ಯಾಪ್ತಿ ಕುರಿತ ವಿವಾದದಲ್ಲಿ ಮಧ್ಯಪ್ರವೇಶಿಸಬೇಕು. ಏಕೆಂದರೆ ಇದರಿಂದಾಗಿ ದೆಹಲಿ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ, ದೆಹಲಿ ಸರಕಾರ ಎಪ್ರಿಲ್ 27ರಂದು ಅರ್ಜಿ ಸಲ್ಲಿಸಿತ್ತು. ಈ ವಿವಾದವು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಮೂಲಸಂರಚನೆ ಮೇಲೆ ಪರಿಣಾಮ ಬೀರುವ ವಿಚಾರವಾಗಿರುವುದರಿಂದ ಇದನ್ನು ಇತ್ಯರ್ಥಪಡಿಸುವ ಅಧಿಕಾರ ವ್ಯಾಪ್ತಿ ಸುಪ್ರೀಂಕೋರ್ಟ್ಗೆ ಮಾತ್ರ ಇದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಈ ಸಂಬಂಧ ಸುಪ್ರೀಂಕೋರ್ಟ್ ಮೇ 11ರಂದು ಕೇಂದ್ರಕ್ಕೆ ಸಮನ್ಸ್ ಜಾರಿಗೊಳಿಸಿ, ದಿಲ್ಲಿ ಸರಕಾರದ ಹಕ್ಕು ಪ್ರತಿಪಾದನೆ ಬಗ್ಗೆ ಅಭಿಪ್ರಾಯ ಮಂಡಿಸುವಂತೆ ಸೂಚನೆ ನೀಡಿದೆ. ಬೇಸಿಗೆ ರಜೆ ಮುಗಿದ ಬಳಿಕ ಸಮನ್ಸ್ ಮರು ಜಾರಿಯಾಗಲಿದೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಾಗೂ ದಿಲ್ಲಿ ಸರಕಾರಗಳ ನಡುವೆ ವಿವಿಧ ಆಡಳಿತಾತ್ಮಕ ವಿಚಾರಗಳಲ್ಲಿ ವಿವಾದಗಳು ಉದ್ಭವಿಸಿವೆ. ಸರಕಾರಿ ಅಭಿಯೋಜಕರ ನೇಮಕದಿಂದ ಹಿಡಿದು, ಭ್ರಷ್ಟಾಚಾರದ ವಿರುದ್ಧ ವಿಚಾರಣಾ ಆಯೋಗ ನೇಮಿಸುವವರೆಗೆ ಕೇಂದ್ರ ಸರಕಾರ ಲೆಫ್ಟಿನೆಂಟ್ ಜನರಲ್ ಮೂಲಕ ಅಧಿಕಾರ ಚಲಾಯಿಸುತ್ತಿದ್ದು, ಇವೆಲ್ಲವೂ ದೆಹಲಿ ಸರಕಾರದ ನಿರ್ಧಾರಗಳಿಗೆ ವಿರುದ್ಧವಾಗಿವೆ ಎಂದು ದಿಲ್ಲಿ ಸರಕಾರ ಅರ್ಜಿಯಲ್ಲಿ ವಿವರಿಸಿದೆ.





