ಮಂಗಳೂರು : ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ನಿಂದ ಮನೆಮನೆಗೆ ಉಚಿತ ನೀರಿನ ಸೇವೆ
ಮಂಗಳೂರು, ಮೇ 16: ಕುಡಿಯುವ ನೀರಿನ ಹಾಹಾಕಾರದ ಕೂಗಿಗೊಂದು ಬ್ರೇಕ್ ಹಾಕುವ ಮಾನವೀಯ ಸ್ಪಂದನದ ಕೆಲಸ ನಗರದ ಕೆಲವೆಡೆಯಲ್ಲಿ ಕಾಣಿಸುತ್ತಿದೆ. ನೀರಿನ ಕೊರತೆ ಇರುವ ಪ್ರತೀ ಮನೆಗೂ ನೀರು ತಲಪಿಸುವ ಧ್ಯೇಯದ ಸಂಘಟನೆಯೊಂದರ ಸ್ವಯಂ ಸೇವಕರು ಎಂತಹ ಇಕ್ಕಟ್ಟಿನ ಒಳ ರಸ್ತೆಯೊಳಗೂ ಹೊಕ್ಕುತ್ತಾರೆ. ಅನಿವಾರ್ಯವಾದರೆ ಮಹಡಿ ಮನೆಗೂ ಏರುತ್ತಾರೆ. ಹಿರಿಯರು, ಅಸಕ್ತರನ್ನು ಅರಸಿ ನೀರಿನ ದಾಹ ನೀಗಿಸಿ ಅವರೆಲ್ಲರ ಸಮಧಾನದ ನಿಟ್ಟುಸಿರಲ್ಲಿ ನೆಮ್ಮದಿಯನ್ನು, ಸಂತಸವನ್ನೂ ಅನುಭವಿಸುತ್ತಿದ್ದಾರೆ!
ಹೀಗೆ 7 ದಿನಗಳಿಂದ ಸೇವೆಯಲ್ಲಿ ತೊಡಗಿಸಿಕೊಂಡು ನಿರಾಳತೆ, ಧನ್ಯತೆ ಅನುಭವಿಸಿ ಮಾದರಿಯಾಗುತ್ತಿರುವುದು ಮಂಗಳೂರಿನ ಹೈಲ್ಯಾಂಡ್ ಇಸ್ಲಾಮಿಕ್ ಫೋರಮ್ ಎಂಬ ಸಂಘಟನೆ!
ಮೂರು ವಾಹನ: ಅತ್ತಾವರ ಪರಿಸರದ ಮೂರು ಸಮೃದ್ಧ ಬಾವಿಯಿಂದ ತುಂಬಿಸಿ ತರುವ ಶುದ್ಧ ನೀರನ್ನು ಇವರು ಮನೆಮನೆಗೆ ಉಚಿತವಾಗಿ ವಿತರಿಸುತ್ತಿದ್ದಾರೆ. ನೀರು ವಿತರಣೆಗೆ ಮೂರು ವಾಹನಗಳಿವೆ. ಅದರಲ್ಲಿ ತಲಾ 2000 ಲೀ. ಸಾಮರ್ಥ್ಯದ ಮೂರು ಸಿಂಟೆಕ್ಸ್ ಮಾದರಿಯ ಟ್ಯಾಂಕ್ ಗಳಿವೆ. ಪ್ರತೀ ದಿನ 22-25 ಟ್ಯಾಂಕ್ ಗಳಲ್ಲಿ 150-180 ಮನೆಗಳಿಗೆ ನೀರು ತಲುಪುತ್ತಿದೆ.
ಹಲವರ ನೆರವು:
ಬಾವಿಯಿಂದ ನೀರೆತ್ತಿ ಟ್ಯಾಂಕ್ ಗಳಲ್ಲಿ ತುಂಬಿಸುವ ವ್ಯವಸ್ಥೆಯನ್ನು ಫಲ್ನೀರ್ ವಾರ್ಡ್ ಕಾರ್ಪೊರೇಟರ್ ಅಬ್ದುಲ್ ರವೂಫ್ ಮಾಡಿಕೊಟ್ಟಿದ್ದಾರೆ. ಮೂರು ವಾಹನಗಳನ್ನು ಉದ್ಯಮಿ ಎಸ್.ಎಮ್. ಫಾರೂಕ್ , ಎ.ಕೆ. ಗ್ರೂಪ್ ಮತ್ತು ಡೆಕ್ಕನ್ ಪ್ಲಾಸ್ಟಿಕ್ ಸಂಸ್ಥೆ ನೀಡಿದೆ. ಪ್ರತೀ ದಿನ ವಾಹನಗಳ ಡೀಸೆಲ್ ವೆಚ್ಚ ಹಾಗೂ 10 ಮಂದಿ ಸ್ವಯಂ ಸೇವಕರ ಊಟದ ಖರ್ಚು ಸೇರಿ ಸುಮಾರು 10 ಸಾವಿರ ರೂ. ಮೊತ್ತವನ್ನು ಎಚ್.ಐ.ಎಫ್. ಭರಿಸುತ್ತಿದೆ.
ಮಹಾನಗರ ಪಾಲಿಕೆಯ ಟ್ಯಾಂಕರ್ ಮುಖ್ಯ ರಸ್ತೆಗಳಿಗೆ ಮಾತ್ರ ಹೋಗುತ್ತದೆ. ನಮ್ಮದು ಸಣ್ಣ ವಾಹನವಾದ ಕಾರಣ ಗಲ್ಲಿ ಗಲ್ಲಿಗೆ ಹೋಗುತ್ತಿದ್ದೇವೆ. ಹಿರಿಯರು, ಅಶಕ್ತರು ಇದ್ದರೆ ಮನೆಯ ಒಳಗೆ , ಫ್ಲಾಟ್ ಗಳ ಮಹಡಿಗೂ ಕೊಂಡು ಹೋಗಿ ಕೊಡುತ್ತೇವೆ. ಕುಡಿಯಲು, ಅಡುಗೆಗೆ ಬೇಕಾದಷ್ಟು ನೀರನ್ನು ಬಕೆಟ್ ಮತ್ತಿತರ ಪಾತ್ರೆಗಳಲ್ಲಿ ತುಂಬಿಸಿ ಕೊಡುತ್ತಿದ್ದೇವೆ ಎಂದು ನೀರು ತುಂಬಿಸಿಕೊಡುವ ಮೊಹಫೂಝ್ ಹೇಳುತ್ತಾರೆ.
ಪಾಂಡೇಶ್ವರ ಪರಿಸರದಲ್ಲಿ ಒಂದು ತಿಂಗಳಿನಿಂದ ನೀರಿಲ್ಲ. 15 ದಿನಗಳಿಂದ ಪರಿಸ್ಥಿತಿ ತೀರಾ ಬಿಗಡಾಯಿಸಿದ್ದು, ನಾವು ಊರು ಬಿಟ್ಟು ಹೋಗಿದ್ದೆವು. ಇದೀಗ ಯಾರೋ ನೀರು ತಂದು ಕೊಡುತ್ತಿದ್ದಾರೆ ಎಂದು ನೆರೆ ಮನೆಯವರು ಮಾಹಿತಿ ನೀಡಿದ್ದರಿಂದ ಮನೆಗೆ ಮರಳಿ ಬಂದಿದ್ದೇವೆ. ಕುಡಿಯಲು, ಅಡುಗೆಗೆ ಸೇರಿದಂತೆ ಅಗತ್ಯಕ್ಕೆ ಬೇಕಾದ ನೀರನ್ನು ಇವರು ಕೊಟ್ಟು ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ಶುಭಾಷ್ ನಗರ 1st main ನಿವಾಸಿ ನಸೀಮಾ ಹೇಳುತ್ತಾರೆ.
ಎಚ್.ಐ.ಎಫ್. ಅಧ್ಯಕ್ಷ ನಾಝೀಮ್, ಕಾರ್ಯದರ್ಶಿ ಔಸಾಫ್, ಸುಹೇಲ್ ಬೊಳಾರ್, ನಿಕಟಪೂರ್ವ ಅಧ್ಯಕ್ಷ ರಿಝ್ವಾನ್, ನಬೀಲ್, ದಾವೂದ್, ಔಸಾಫ್, ಸಲೀಂ ಮೆಕ್ಕ, ಆದಿಲ್ ಫರ್ವೇಝ್, ಮೆಹಫೂಝ್ ಮೊದಲಾದವರು ತಮ್ಮ ನಿತ್ಯದ ಕೆಲಸ ಬಿಟ್ಟು ಮನೆ ಮನೆಗೆ ನೀರು ತಲುಪಿಸುವ ಮಾನವೀಯ ಸೇವೆಯಲ್ಲಿ ನಿರತರಾಗಿದ್ದಾರೆ.
ಪಾಂಡೇಶ್ವರದ ಸುಭಾಷ್ ನಗರದ ಮೂರು ಮೈಲ್, ಅತ್ತಾವರದ ಜೈನ್ ಕಾಂಪೌಂಡ್, ಬೋಳಾರ ಜುಮಾ ಮಸೀದಿ ರಸ್ತೆ, ಪಾಂಡೇಶ್ವರ ಧೂಮಪ್ಪ ಕಾಂಪೌಂಡು, ಅಮೃತನಗರ, ರೊಝಾರಿಯೋ ಚರ್ಚ್ ರಸ್ತೆ, ಫಲ್ನೀರ್ ಮತ್ತಿತರೆಡೆ ನೀರು ಸರಬರಾಜು ಮಾಡುತ್ತಿದ್ದು, ಇದೀಗ ಅಗ್ನೇಸ್ ಪ್ರದೇಶದಿಂದ ಬೇಡಿಕೆ ಬಂದಿದೆ. ಮಳೆ ಬರುವ ತನಕ ಈ ಸೇವೆ ಮುಂದುವರಿಯಲಿದೆ ಎನ್ನುತ್ತಾರೆ ಎಚ್.ಐ.ಎಫ್. ನಿಕಟ ಪೂರ್ವ ಅಧ್ಯಕ್ಷ ಮುಹಮ್ಮದ್ ರಿಝ್ವಾನ್
ಅತ್ತಾವರದಲ್ಲಿ 18 ಅಡಿ ಶುದ್ಧ ನೀರಿನ ಬಾವಿಯೊಂದಿದ್ದು, ಅದರಿಂದ ಫಲ್ನೀರ್ ವಾರ್ಡ್ ನ ಕಾರ್ಪೊರೇಟರ್ ಅಬ್ದುಲ್ ರವೂಫ್ ಪಂಪ್ ಅಳವಡಿಸಿ ಟ್ಯಾಂಕ್ ಗಳಲ್ಲಿ ನೀರು ತುಂಬಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ. ನಾವು 3 ಪಿಕಪ್ ವಾಹನಗಳಲ್ಲಿ ಪ್ರತಿ ದಿನ ತಲಾ 2 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕ್ ಗಳಲ್ಲಿ ಮನೆ ಮನೆಗೆ ನೀರು ತಲುಪಿಸುತ್ತಿದ್ದೇವೆ. ಯಾವ ವಾರ್ಡ್ ನಿಂದ ಬೇಡಿಕೆ ಬಂದರೂ ನೀರು ಕೊಡಲು ಸಿದ್ಧರಿದ್ದೇವೆ ಎಂದು ಎಚ್.ಐ.ಎಫ್. ಮಂಗಳೂರು ಇದರ ಅಧ್ಯಕ್ಷ ನಾಝಿಮ್ ಎಂ.ಎಸ್. ಹೇಳುತ್ತಾರೆ.
ನಾನು ಈ ಪ್ರದೇಶದಲ್ಲಿ 28 ವರ್ಷಗಳಿಂದ ವಾಸಿಸುತ್ತಿದ್ದೇನೆ ಹಿಂದೆ ನೀರಿನ ಬವಣೆ ಬಂದಿದ್ದರೂ ಇಂತಹ ತತ್ವಾರ ಬಂದಿರಲಿಲ್ಲ. ನಮ್ಮಲ್ಲಿ ಬಾವಿ ಇದ್ದರೂ ಒಳ ಚರಂಡಿ ನೀರು ಸೇರುವುದರಿಂದ ಕೊಳಕು ನೀರು ಕುಡಿಯಲು ಯೋಗ್ಯವಾಗಿಲ್ಲ. ಪಾಲಿಕೆ ಟ್ಯಾಂಕರ್ ನಮ್ಮಂಥ ಒಳ ರಸ್ತೆಗೆ ಬರುವುದಿಲ್ಲ. ಮೂರು ಸಾವಿರ ಲೀ. ಗೆ 1500 ರೂ. ಕೊಟ್ಟು ಖಾಸಗಿ ಟ್ಯಾಂಕರ್ ನೀರು ಖರೀದಿಯೂ ಕಷ್ಟ. ಅದರ ಶುದ್ಧತೆ ಬಗ್ಗೆಯೂ ಸಂಶಯವಿದೆ. ಈ ಸಂದರ್ಭದಲ್ಲಿ ಎಚ್.ಐ.ಎಫ್. ನವರು ಶುದ್ಧ ನೀರನ್ನು ಮನೆ ಮನೆಗೆ ತಲುಪಿಸುತ್ತಾ ಆಪತ್ಬಾಂಧವರಾಗಿದ್ದಾರೆ ಎಂದು ಸುಭಾಷ್ ನಗರದ ಚಂದ್ರಕಾಂತ್ ನಾಯಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.