ಸುಳ್ಯ ನಗರದಲ್ಲೇ ಇದೆ ಜೋಪಡಿಯ ಕುಟುಂಬ !
ನಿವೇಶನ ಇದ್ದರೂ ಮನೆ ನಿರ್ಮಾಣಕ್ಕೆ ಅನುದಾನ ಇಲ್ಲ
ಸಹಾಯಕ್ಕೆ ಬಂದ ಮುಗೇರ ಸಂಘಟನೆ
ಸುಳ್ಯ : ಸುಳ್ಯ ನಗರದಲ್ಲೇ ಇನ್ನೂ ಜೋಪಡಿಯಲ್ಲಿ ವಾಸಿಸುವ ಕುಟುಂಬವಿದ್ದು, ಸಂಘಟನೆಯೊಂದು ಇವರ ಮನೆ ನಿರ್ಮಾಣದ ಸಹಾಯಕ್ಕೆ ಬಂದಿದೆ.
ನಗರದ ಒಂದನೇ ವಾರ್ಡಿನ ದುಗ್ಗಲಡ್ಕದ ಬಾಬು ಮುಗೇರ ಎಂಬ ವೃದ್ದನ ಶೋಚನೀಯ ಸ್ಥಿತಿ ಇದು.. ಕಳೆದ 35 ವರ್ಷಗಳಿಂದ ಟರ್ಪಾಲ್ ಗುಡಿಸಲಿನಲ್ಲಿಯೇ ಇವರು ದಿನ ಕಳೆಯುತ್ತಿದ್ದಾರೆ. ಬಾಬು ಅವರು ಕೆಲಸ ಮಾಡುವ ಸ್ಥಿತಿಯಲ್ಲಿಲ್ಲ. ಮನೆ ಮಂದಿ ಒಂದಷ್ಟು ಸಂಪಾದನೆ ಮಾಡಿದರೂ ದಿನದ ಊಟದ ಖರ್ಚಿಗೂ ತತ್ವಾರ. ಕರಿಯ ಮುಗೇರ ಎಂಬವರ ಪುತ್ರ ಬಾಬು ಇವರು ತನ್ನು 68ನೇ ವರ್ಷದಲ್ಲಿ ಕೂಲಿ ನಾಲಿ ಮಾಡಿಕೊಂಡು 4 ಮಂದಿ ಸದಸ್ಯರೊಂದಿಗೆ ಈ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಒಂದು ಕಡೆ ಮುರಿದು ಬೀಳುವ ಸ್ಥಿತಿಯಲ್ಲಿದೆ. ಮತ್ತೊಂದೆಡೆ ಕುಟುಂಬದ ಭಾರ. ಬಾಬು ಮುಗೇರರಿಗೆ ಮೂರು ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳು ಬೇರೆ ಮನೆ ಮಾಡಿ ವಾಸಿಸುತ್ತಿದ್ದಾರೆ. ಬಾಬು ಮುಗೇರರ ಪುತ್ರಿ ಶೋಭಾ ಗಾಂಧಿನಗರ ಪ.ಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ಮನೆಯನ್ನು ನಿರ್ಮಿಸಲೂ ಆಗದೆ, ಪಿಯುಸಿ ಓದುತ್ತಿರುವ ಮಗಳನ್ನು ಕೂಲಿ ಮಾಡಿದ ಸಂಪಾದನೆಯಲ್ಲಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ.
ಪ್ರತಿ ವರ್ಷ ಸುಳ್ಯ ನಗರ ಪಂಚಾಯತ್ಗೆ ಮನೆ ಕಟ್ಟಲು ಅರ್ಜಿ ಸಲ್ಲಿಸಿದಾಗಲೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಮೌನವೇ ಉತ್ತರ. ಈ ಕುಟುಂಬಕ್ಕೆ ಸರಕಾರದಿಂದ ದೊರಕಿದ್ದು ಶೌಚಾಲಯ ಕಟ್ಟುವುದಕ್ಕಾಗಿ ಒಂದಷ್ಟು ಹಣ ಮತ್ತು ಪಡಿತರ ಚೀಟಿ ಮಾತ್ರ.
ಸಂಘಟನೆ ನೆರವು:
ಇದೀಗ ಸುಳ್ಯ ಮುಗೇರ ಸಂಘಟನೆಯ ಮುಖಂಡರು ಬಾಬು ಅವರ ಶೋಚನೀಯ ಸ್ಥಿತಿ ಕಂಡು ನೆರವಿಗೆ ಬಂದಿದ್ದಾರೆ. ಹಣ ಸಂಗ್ರಹಿಸಿ ಮನೆ ಕಟ್ಟಿಕೊಡಲು ಮುಂದಾಗಿದ್ದಾರೆ. ಸುಳ್ಯ ತಾಲೂಕು ಮುಗೇರರ ಸಂಘದ ಅಧ್ಯಕ್ಷ ಶಂಕರ್ ಪೆರಾಜೆ, ಗೌರವ ಸಲಹೆಗಾರ ನಂದರಾಜ್ ಸಂಕೇಶ, ಕಾರ್ಯದರ್ಶಿ ಪ್ರಕಾಶ್ ಬಂಗ್ಲೆಗುಡ್ಡೆ, ನ್ಯಾಯವಾದಿ ಜಗದೀಶ್ ಇವರ ನೇತೃತ್ವದಲ್ಲಿ ಸುಳ್ಯ ತಾಲೂಕನ್ನು ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡುವ ಉದ್ದೇಶದಿಂದ ಪ್ರತಿ ಗ್ರಾಮಗಳಿಂದ ಮಾಹಿತಿ ಸಂಗ್ರಹಿಸಿ ಅಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಅದರ ಜತೆಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಯ ಭವಿಷ್ಯ ದೃಷ್ಟಿಯಿಂದ ಮುಗೇರರ ಸಂಘದ ಪದಾಧಿಕಾರಿಗಳಾದ ಮೇಲಿನ ಸ ಚಿಂತಿಸಿ ಮುಗೇರ ಸಮಾಜದಿಂದ ಮತ್ತು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಬಾಬು ಮುಗೇರರಿಗೆ ಮನೆ ನಿರ್ಮಿಸಲು ಮುಂದಾಗಿದ್ದಾರೆ.
ಇತ್ತೀಚೆಗೆ ನಮಗೆ ಈ ಮನೆಯ ಪರಿಸ್ಥಿತಿ ತಿಳಿಯಿತು. ನಮ್ಮ ಸಂಘಟನೆ ನಮ್ಮಿಂದಾಗುವ ಎಲ್ಲ ನೆರವೂ ನೀಡಲು ಬದ್ದರಾಗಿದ್ದೇವೆ. ನಗರ ಪಂಚಾಯತ್ ಅಧ್ಯಕ್ಷರಿಗೆ ಮತ್ತು ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಸ್ಪಂದನೆ ಸಿಕ್ಕಿದೆ. - ನಂದರಾಜ್ ಸಂಕೇಶ, ದಲಿತ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ
ಮುಗೇರ ಸಂಘಟನೆಯವರು ಸೇರಿ ನಮ್ಮಿಂದಾಗುವ ಸಹಾಯ ಮಾಡಲು ಸಿದ್ದರಾಗಿದ್ದೇವೆ. ಇದಕ್ಕೆ ನಗರ ಪಂಚಾಯತ್ ಕೂಡ ಸಹಕಾರ ನೀಡಬೇಕು.
- ಶಂಕರ್ ಪೆರಾಜೆ, ತಾಲೂಕು ಮುಗೇರ ಸಂಘದ ಅಧ್ಯಕ್ಷ
ನಾವು ಬಡವರು ಎಂದು ಸರಕಾರದಲ್ಲಿ ಸೌಲಭ್ಯಗಳನ್ನು ಕೇಳುತ್ತಿದ್ದೇವೆ. ಕಳೆದ 35 ವರ್ಷಗಳಿಂದ ಬಂದು ವಾಸ ಮಾಡಿಕೊಂಡಿದ್ದೇನೆ. ನನಗೆ ದುಡಿಯಲು ಆಗುತ್ತಿಲ್ಲ. ಇದಕ್ಕೆ ತಾಲೂಕಿನ ಮುಗೇರ ಸಂಘಟನೆಗಳು ನಮ್ಮ ಸಹಾಯಕ್ಕೆ ಬಂದಿದ್ದಾರೆ. ಅವರಿಗೆ ಚಿರಋಣಿ.
- ಮನೆಯ ಮುಖಂಡ ಬಾಬು ಮುಗೇರ