ಪಶ್ಚಿಮ ಕರಾವಳಿಯಲ್ಲಿ ರೈಲ್ವೆ ಮೂಲಭೂತ ಸೌಕರ್ಯಕ್ಕೆ ಒತ್ತು: ಸಚಿವ ಸುರೇಶ್
ಕೆಸಿಸಿಐ ಅಮೃತ ಮಹೋತ್ಸವ ಸಮಾರೋಪ

ಮಂಗಳೂರು, ಮೇ 16: ಮಂಗಳೂರನ್ನು ಒಳಗೊಂಡಂತೆ ದೇಶದ ಪಶ್ಚಿಮ ಕರಾವಳಿ ಪ್ರದೇಶದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಜಂಟಿ ಪಾಲುದಾರಿಕೆಯ ಯೋಜನೆಗಳನ್ನು ರೂಪಿಸಲಾಗುವುದು ಎಂದು ಕೇಂದ್ರದ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ಅವರು ಇಂದು ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಜರಗಿದ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಕೆಸಿಸಿಐ) ಅಮೃತ ಮಹೋತ್ಸವ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪಶ್ಚಿಮ ಕರಾವಳಿಯು ಸುಂದರವಾಗಿರುವುದು ಮಾತ್ರವಲ್ಲ, ಸಂಪರ್ಕ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾದಲ್ಲಿ, ಅಭಿವೃದ್ಧಿಗೆ ವಿಫುಲ ಅವಕಾಶಗಳು ದೊರೆಯಲಿದೆ. ಈ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರೈಲ್ವೆ ಇಲಾಖೆ ಸಿದ್ಧವಿದೆ ಎಂದು ಅವರು ಹೇಳಿದರು.
ಕೊಂಕಣ ರೈಲ್ವೆಯ ಹಳಿಯನ್ನು ದ್ವಿಪಥಗೊಳಿಸುವ ಕಾರ್ಯ ಆರಂಭಗೊಂಡಿದೆ. ಇಲೆಕ್ಟ್ರಿಫಿಕೇಶನ್ ಮೊದಲಾದ ಕಾರ್ಯಗಳು ನಡೆಯುತ್ತಿವೆ. ಕೊಂಕಣ ರೈಲ್ವೆಯಲ್ಲಿ ಸಾಂಪ್ರದಾಯಿಕ ಆಹಾರಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಉತ್ತೇಜನ ನೀಡುವ ಉದ್ದೇಶವೂ ಇದೆ. ರೈಲ್ವೇ ಸೇವೆಯು ಸಾಮಾಜಿಕ ಅಭಿವೃದ್ದಿ ಹಾಗೂ ಬದಲಾವಣೆಗೂ ಕಾರಣವಾಗಬೇಕು. ಈ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವರು ನುಡಿದರು. ರೈಲ್ವೆ ಇಲಾಖೆಯ ತೀರ್ಮಾನ ಕೇಂದ್ರೀಕೃತಗೊಳ್ಳಬಾರದು. ಸ್ಥಳೀಯ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಸಹಕಾರದ ಜತೆಗೆ ಆದ್ಯತೆಯ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ಉದ್ದೇಶದಿಂದ ಈಗಾಗಲೇ ರವಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಜೊತೆಗೂಡಿ ಜಂಟಿ ಪಾಲುದಾರಿಕೆ ಕಂಪೆನಿ ಸ್ಥಾಪಿಸುವ ನಿರ್ಧಾರ ಪ್ರಕಟಿಸಲಾಗಿದೆ. ಮೂರು ತಿಂಗಳೊಳಗೆ ಈ ಕಂಪೆನಿ ಕಾರ್ಯಾರಂಭ ಮಾಡಲಿದೆ. ಇದು ರೈಲ್ವೇ ಇಲಾಖೆಯ ಪ್ರಗತಿಯ ವೇಗವನ್ನು ದ್ವಿಗುಣಗೊಳಿಸಲಿದೆ ಎಂದು ಅವರು ಹೇಳಿದರು.
ರಾಷ್ಟ್ರದ ಬೆಳವಣಿಗೆಯಲ್ಲಿ ಸರಕಾರದ ಜತೆಗೆ ಸಂಘ ಸಂಸ್ಥೆಗಳು, ಕೈಗಾರಿಕೆಗಳ ಪಾತ್ರವೂ ಮಹತ್ತರವಾದುದು. ಹಿಂದೆ ಖಾಸಗಿ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಲಾಗಿಲ್ಲ. ಪ್ರಸಕ್ತ ಸರಕಾರ ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಭಾರತ ಭಾರತವು ಇದೀಗ ಅತೀ ಹೆಚ್ಚು ಪ್ರಮಾಣದ ವಿದೇಶಿ ನೇರ ಹೂಡಿಕೆ ಆಕರ್ಷಿಸುತ್ತಿರುವ ರಾಷ್ಟ್ರವಾಗಿದೆ. ಮುಂದಿನ ಏಳು ವರ್ಷಗಳಲ್ಲಿ ಸಂಪತ್ತು ದ್ವಿಗುಣಗೊಳ್ಳಲಿದೆ. ಈ ನಿಟ್ಟಿನಲ್ಲಿ ಉದ್ದಿಮೆಗಳಿಗೆ ಹೆಚ್ಚಿನ ಒತ್ತು ನೀಡುವುದು ಅತೀ ಅಗತ್ಯ ಎಂದರು.
ಪ್ರತ್ಯೇಕ ರೈಲ್ವೇ ವಿಭಾಗಕ್ಕೆ ಲೋಬೊ ಮನವಿ
ಮೈಸೂರು, ಪಾಲ್ಘಾಟ್ ಹಾಗೂ ಕೊಂಕಣ ರೈಲ್ವೇಯಿಂದಾಗಿ ತ್ರಿಶಂಕು ಸ್ಥಿತಿಯಲ್ಲಿರುವ ಮಂಗಳೂರಿನಲ್ಲಿ ಪ್ರತ್ಯೇಕ ರೈಲ್ವೆ ವಿಭಾಗವನ್ನು ತೆರೆಯಬೇಕು. ಬೆಂಗಳೂರು-ಮಂಗಳೂರು ನಡುವಿನ ರೈಲು ಪ್ರಯಾಣದ ಅವಧಿಯನ್ನು ಆರು ಗಂಟೆಗಳಿಗೆ ತಗ್ಗಿಸಬೇಕು. ಇದಕ್ಕಾಗಿ ಎರಡೂ ನಗರಗಳ ನಡುವೆ ವೇಗದ ರೈಲನ್ನು ಓಡಿಸಬೇಕು. ಮಂಗಳೂರು ಕೇಂದ್ರ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ರೈಲ್ವೇ ನಿಲ್ದಾಣವನ್ನಾಗಿಸಲು ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಸಚಿವರಿಗೆ ಶಾಸಕ ಜೆ.ಆರ್. ಲೋಬೊ ಮನವಿ ಮಾಡಿದರು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಸಂಸದ ನಳಿನ್ ಕುಮಾರ್ ಮಾತನಾಡಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಕೆಸಿಸಿಐನ 75 ವರ್ಷಗಳ ಸಾಧನೆಯನ್ನು ಶ್ಲಾಘಿಸಿದರು.
ಈ ಸಂದರ್ಭ ಕೆಸಿಸಿಐ ಬೆಳೆದು ಬಂದ 75 ವರ್ಷಗಳ ಹಾದಿಯ ಸ್ಮರಣ ಸಂಚಿಕೆಯನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಬಿಡುಗಡೆಗೊಳಿಸಿದರು.
ಕೆಸಿಸಿಐ ಅಧ್ಯಕ್ಷ ಮಾರೂರು ರಾಮಮೋಹನ ಪೈ, ಕಾರ್ಯದರ್ಶಿ ವತಿಕಾ ಪೈ, ಉಪಾಧ್ಯಕ್ಷ ಜೀವನ್ ಸಲ್ಡಾನಾ, ಮಾಜಿ ಅಧ್ಯಕ್ಷರಾದ ಜಾನ್ ಪ್ರಸಾದ್ ಮಿನೇಜಸ್, ಮುಹಮ್ಮದ್ ಅಮೀನ್ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಶ್ರೀನಿವಾಸ್ ಎಸ್. ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.
ಜಾರ್ಜ್ ಫೆರ್ನಾಂಡಿಸ್ ಹೆಸರಿನಲ್ಲಿ ಸುರಂಗ ಮಾರ್ಗ; ರಾಮಕೃಷ್ಣ ಹೆಗಡೆ ಹೆಸರಿನಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ
ರೈಲ್ವೆ ಇಲಾಖೆಯಲ್ಲಿ ಸುಧಾರಣೆಗೆ ಕಾರಣರಾದ ಜಾರ್ಜ್ ಫೆರ್ನಾಂಡಿಸ್ರ ಹೆಸರಿನಲ್ಲಿ ಸುರಂಗ ತಂತ್ರಜ್ಞಾನ ಸ್ಥಾಪಿಸಲು ನಿರ್ಧರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರಿನಲ್ಲಿ ಉಡುಪಿಯಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಇಂತಹ ಮಹತ್ವದ ಯೋಜನೆಗಳಲ್ಲಿ ಪಾಲುದಾರಿಕೆಗೆ ಕೆಸಿಸಿಐಗೂ ಅವಕಾಶವಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೇಳಿದರು.
ರೈಲ್ವೆ ಅಕ್ರಮದ ಬಗ್ಗೆ ದೂರು ನೀಡಿ- ತಪ್ಪಿಸ್ಥರಿಗೆ ಕಠಿಣ ಶಿಕ್ಷೆ
ರೈಲ್ವೆ ಇಲಾಖೆಯಲ್ಲಿ ಎಲ್ಲೇ ತಪ್ಪು, ಅಕ್ರಮಗಳು ನಡೆಯುತ್ತಿದ್ದರೂ ತಕ್ಷಣ ಸಾರ್ವಜನಿಕರು ದೂರು ನೀಡಿ. ಪಾರದರ್ಶಕತೆಯನ್ನು ಕಾಪಾಡುವ ಜತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಪ್ಪು ಎಸಗುವವರಿಗೆ ಕಠಿಣ ಶಿಕ್ಷೆಯನ್ನು ನೀಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದರು. ಇಲಾಖೆಯ ಯಾವುದೇ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಭ್ರಷ್ಟಾಚಾರ ಮಾಡುವವರಿಗೆ ಅವಕಾಶವನ್ನೂ ನೀಡುವುದಿಲ್ಲ. ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಹಸ್ತಕ್ಷೇಪ ಇರುವುದಿಲ್ಲ. ಇಲಾಖೆಯ ಎಲ್ಲಾ ನೇಮಕಾತಿ ಪರೀಕ್ಷೆಗಳು ಆನ್ಲೈನ್ ಮೂಲಕವೇ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಮಂಗಳೂರು ನನ್ನ ತವರು ಮನೆಯಂತೆ
ಮಂಗಳೂರು ನನಗೆ ತವರು ಮನೆ ಇದ್ದಂತೆ. ಇಲ್ಲಿಗೆ ಬರುವುದೆಂದರೆ ನನಗೆ ತುಂಬಾ ಖುಷಿ ಎಂದು ಮಾತು ಆರಂಭಿಸುತ್ತಲೇ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಮಂಗಳೂರಿನ ಗುಣಗಾನ ಮಾಡಿದರು.







