ಗೋರಕ್ಷಣೆ:ದೇಶಿ ಗೋವುಗಳಿಗಾಗಿ ವಿಶೇಷ ಡೈರಿಗಳ ಸ್ಥಾಪನೆ
ಹೊಸದಿಲ್ಲಿ,ಮೇ 16: ದೇಶದಲ್ಲಿಯ ಗೋವಂಶ ಮತ್ತು ಗೋಶಾಲೆಗಳ ಸಂರಕ್ಷಣೆಗಾಗಿ ದೇಶಿ ಗೋವುಗಳಿಗಾಗಿ ವಿಶೇಷ ಡೇರಿ ಘಟಕಗಳ ಸ್ಥಾಪನೆ,ನರೇಗಾ ಯೋಜನೆಯಡಿ ಮೇವು ಉತ್ಪಾದನೆ ಮತ್ತು ಕಳ್ಳ ಸಾಗಣೆ ಮತ್ತು ವಧೆ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಪಶು ಕಲ್ಯಾಣ ಮಂಡಳಿಗಳಿಗೆ ಅಧಿಕಾರ ನೀಡಿಕೆ ಸೇರಿದಂತೆ ಹಲವಾರು ಕ್ರಮಗಳನ್ನು ಕೇಂದ್ರವು ಯೋಜಿಸುತ್ತಿದೆ.
ಗೋವಂಶ ಮತ್ತು ಗೋಶಾಲೆಗಳ ಕುರಿತು ಸೋಮವಾರ ಇಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅರಣ್ಯ ಸಚಿವ ಪ್ರಕಾಶ ಜಾವಡೇಕರ್ ಮತ್ತು ಕೃಷಿ ಸಚಿವ ರಾಧಾ ಮೋಹನ ಸಿಂಗ್ ಅವರು,ಭಾರತೀಯ ಆರ್ಥಿಕತೆಯ ‘ಬೆನ್ನೆಲುಬು’ ಆಗಿರುವ ಗೋರಕ್ಷಣೆಗೆ ವಿವಿಧ ರಾಜ್ಯ ಸರಕಾರಗಳು,ಕೃಷಿಕರು ಮತ್ತು ಗೋವುಗಳ ಮಾಲಕರ ನೆರವನ್ನು ಕೋರಿದರು. ಉಭಯ ಸಚಿವರ ಸಚಿವಾಲಯಗಳು ಗೋವಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸುತ್ತವೆ.
ಗೋಮಾಳಗಳ ರಕ್ಷಣೆಗೆ ಮತ್ತು ನರೇಗಾದಂತಹ ಸರಕಾರಿ ಕಾರ್ಯಕ್ರಮಗಳಡಿ ಉತ್ತಮ ಗುಣಮಟ್ಟದ ಮೇವನ್ನು ಬೆಳೆಸಿ ಅದನ್ನು ಜಾನುವಾರು ಸಾಕಣೆದಾರರಿಗೆ ಉಚಿತವಾಗಿ ನೀಡುವ ಯೋಜನೆಯೊಂದನ್ನು ತನ್ನ ಸಚಿವಾಲಯವು ರೂಪಿಸುತ್ತಿದೆ ಎಂದು ಹೇಳಿದ ಜಾವಡೇಕರ್, ಸರಕಾರವು ಶೀಘ್ರವೇ ರಾಜ್ಯಗಳಲ್ಲಿ ಲಭ್ಯವಿರುವ ಹುಲ್ಲುಗಾವಲುಗಳ ಸಮೀಕ್ಷೆಯೊಂದನ್ನು ಕೈಗೊಳ್ಳಲಿದೆ ಮತ್ತು ಆ ಬಳಿಕ ಅಗತ್ಯ ನೀತಿ ಮತ್ತು ಆಡಳಿತಾತ್ಮಕ ನಿರ್ಧಾರವನ್ನು ಕೈಗೊಳ್ಳಲಿದೆ ಎಂದರು.
ಜಾನುವಾರುಗಳು ಹಾಲು ಕೊಡುವುದನ್ನು ನಿಲ್ಲಿಸಿದ ಬಳಿಕ ಮಾಲಕರು ಅವುಗಳನ್ನು ಮಾರಾಟ ಮಾಡುವ ಅನಿವಾರ್ಯತೆಗೆೆ ಸಿಲುಕದಂತಾಗಲು ಮೂತ್ರ ಮತ್ತು ಸಗಣಿಯ ಮೂಲಕ ಗೋವಿನ ಉತ್ಪಾದಕತೆಯನ್ನು ಬಳಸಿಕೊಳ್ಳಲು ಜಾರಿಗೊಳಿಸಬಹುದಾದ ಕ್ರಮಗಳನ್ನು ಸರಕಾರವು ಪರಿಶೀಲಿಸುತ್ತಿದೆ ಎಂದೂ ಜಾವಡೇಕರ್ ಹೇಳಿದರು.