ಬೆಂಗಳೂರು ಗ್ರಾ. ಪ್ರಥಮ, ಉಡುಪಿ ದ್ವಿತೀಯ, ದ.ಕ.ಜಿಲ್ಲೆ ತೃತೀಯ ಗ್ರಾಮೀಣ ವಿದ್ಯಾರ್ಥಿಗಳ
ಎಸೆಸೆಲ್ಸಿ ಫಲಿತಾಂಶ ಪ್ರಕಟ:

ಹೊಸ ದಾಖಲೆ ಬರೆದ ಭದ್ರಾವತಿಯ ರಂಜನ್
ಎಂದಿನಂತೆ ವಿದ್ಯಾರ್ಥಿನಿಯರೇ ಮುಂದು
ಬೆಂಗಳೂರು, ಮೇ 16: ಪ್ರಸ್ತುತ ಸಾಲಿನ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ನಿರೀಕ್ಷೆಯಂತೆ ವಿದ್ಯಾರ್ಥಿನಿ ಯರು ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. 2016-17ನೆ ಶೈಕ್ಷಣಿಕ ಸಾಲಿನಲ್ಲಿ ಶೇ.79.16ರಷ್ಟು ಫಲಿತಾಂಶ ಬಂದಿದ್ದು, ಕಳೆದ ಬಾರಿಗಿಂತ ಈ ವರ್ಷ ಶೇ.2ರಷ್ಟು ಕಡಿಮೆ ಫಲಿತಾಂಶ ಬಂದಿದೆ.
ಸೋಮವಾರ ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಹೆಣ್ಣು ಮಕ್ಕಳು ಶೇ.82.64ರಷ್ಟು ತೇರ್ಗಡೆಯಾಗಿದ್ದು, ಗಂಡು ಮಕ್ಕಳು ಶೇ.75.84ರಷ್ಟು ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ.89.63 ಫಲಿತಾಂಶವನ್ನು ಪಡೆದು ಪ್ರಥಮ ಸ್ಥಾನದಲ್ಲಿದ್ದು, ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಕ್ರಮ ವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಅಲಂಕರಿಸಿವೆ. ಕೊನೆಯ ಸ್ಥಾನದಲ್ಲಿ ಬಳ್ಳಾರಿ ಜಿಲ್ಲೆ ಇದೆ ಎಂದು ಅವರು ಮಾಹಿತಿ ನೀಡಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿ ಎಸ್.ರಂಜನ್ 625 ಅಂಕಗಳಿಗೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಪ್ರಥಮ ಸ್ಥಾನದಲ್ಲಿದ್ದಾನೆ. ಮೈಸೂರು ಜಿಲ್ಲೆಯ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿನಿ ಎನ್.ಎಸ್.ಈಶು, ದ.ಕ. ಜಿಲ್ಲೆಯ ಬೆಳ್ತಂಗಡಿಯ ಸೇಂಟ್ ಮೇರಿಸ್ ಇಂಗ್ಲಿಷ್ ಸ್ಕೂಲ್ನ ಸುಶ್ರುತ್ ಸೇರಿದಂತೆ ಒಟ್ಟು 7 ಮಂದಿ ವಿದ್ಯಾರ್ಥಿಗಳು 624 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದರೆ, 623 ಅಂಕ ಗಳಿಸಿದ 11 ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದಾರೆ.
ಮಂಗಳೂರಿನ ಸುರತ್ಕಲ್ನ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ರಮ್ಯಶ್ರೀ, ಮೈಸೂರು ಜಿಲ್ಲೆಯ ವಿಜಯ್ ವಿಠಲ ಹೈಸ್ಕೂಲ್ ಶಾಲೆಯ ವಿದ್ಯಾರ್ಥಿನಿ ಟಿ.ಎಸ್.ಶ್ರೀನಿಧಿ, ಹಾಸನ ಜಿಲ್ಲೆಯ ವಿಜಯ ಹೈಸ್ಕೂಲ್ ಶಾಲೆಯ ವಿದ್ಯಾರ್ಥಿನಿ ವಿಜಯಲಕ್ಷ್ಮೀ 625ಕ್ಕೆ 623ಅಂಕಗಳನ್ನು ಪಡೆದು ಮೂರನೆ ಸ್ಥಾನದಲ್ಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಮೂರು ಸರಕಾರಿ ಶಾಲೆಗಳು ಸೇರಿದಂತೆ ಒಟ್ಟು 52 ಶಾಲೆಗಳು ಶೂನ್ಯ ಫಲಿತಾಂಶವನ್ನು ಪಡೆದಿವೆ. 6 ಅನುದಾನಿತ ಹಾಗೂ 43 ಅನುದಾನ ರಹಿತ ಶಾಲೆಗಳೂ ಇವುಗಳಲ್ಲಿ ಸೇರಿವೆ ಎಂದ ಅವರು, ಪ್ರಸ್ತುತ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆ ವಿಭಿನ್ನ ಸಾಮರ್ಥ್ಯವುಳ್ಳ 2,707 ವಿದ್ಯಾರ್ಥಿಗಳ ಪೈಕಿ 1,647 ಮಂದಿ ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ ಎಂದು ತಿಳಿಸಿದರು.
ನಲವತ್ತು ವರ್ಷ ಮೀರಿರುವ 652 ಖಾಸಗಿ ಅಭ್ಯರ್ಥಿಗಳು ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆದಿದ್ದು, ಆ ಪೈಕಿ 23 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶಕ್ಕೆ ಹೊಲಿಸಿದರೆ ಈ ಬಾರಿಯ ಫಲಿತಾಂಶ ಶೇ.2ರಷ್ಟು ಕಡಿಮೆಯಾಗಿದೆ.
ಎಸೆಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿದ ಹಿನ್ನೆಲೆಯಲ್ಲಿ ಈ ಬಾರಿ ಎಸೆಸೆಲ್ಸಿ ಫಲಿತಾಂಶ ಶೇಕಡವಾರು ಕಡಿಮೆಯಾಗಿದೆ. ಅಲ್ಲದೆ, ಪರೀಕ್ಷ್ಷೆ ನಡೆಯುವ ಸಂದರ್ಭದಲ್ಲಿ ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಜಾಗೃತ ದಳಗಳನ್ನು ನೇಮಿಸಿಕೊಂಡು ಸೇವೆಗೆ ಬಳಸಿಕೊಳ್ಳಲಾಗಿತ್ತು ಎಂದು ಅವರು ಹೇಳಿದರು.
ಶೂನ್ಯ ಫಲಿತಾಂಶ: ಎಸೆಸೆಲ್ಸಿ ಫಲಿತಾಂಶದಲ್ಲಿ ಬಿಜಾಪುರ, ಬಳ್ಳಾರಿ ಸೇರಿದಂತೆ ಒಟ್ಟು ಮೂರು ಸರಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದ್ದು, ಈ ಶಾಲೆಗಳ ಮೂಲಭೂತ ಸೌಲಭ್ಯಗಳ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮಾಧ್ಯಮವಾರು ಫಲಿತಾಂಶ: ಮಾಧ್ಯಮವಾರು ಫಲಿತಾಂಶ ಕನ್ನಡ- ಶೇ.75.61, ಇಂಗ್ಲಿಷ್-ಶೇ.87, ಉರ್ದು-ಶೇ.70, ಮರಾಠಿ-ಶೇ.80.86, ತೆಲುಗು- ಶೇ.69.91, ತಮಿಳು-ಶೇ.46.54, ಹಿಂದಿ-ಶೇ.84.85ರಷ್ಟು ಬಂದಿದ್ದು, ಒಟ್ಟು ಶೇ.79.16ರಷ್ಟು ಫಲಿತಾಂಶ ಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಸರಕಾರಿ ವೆಬ್ಸೈಟ್ನಲ್ಲಿ ಫಲಿತಾಂಶ: www.sslc.kar.nic.in, http://karresults.nic.in ವೆಬ್ಸೈಟ್ಗಳಲ್ಲಿ ಎಸೆಸೆಲ್ಸಿ ಫಲಿತಾಂಶ ಲಭ್ಯವಿದ್ದು, ಮೇ 17ರಂದು ರಾಜ್ಯದ ಎಲ್ಲ ಶಾಲೆಗಳಲ್ಲಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಚಿವ ಕಿಮ್ಮನೆ ರತ್ನಾಕರ ಮಾಹಿತಿ ನೀಡಿದರು.







