ಮಂಜೇಶ್ವರ: ಕೆಎಸ್ಸಾರ್ಟಿಸಿ ಬಸ್-ಓಮ್ನಿ ಢಿಕ್ಕಿ; ಓರ್ವ ಮೃತ್ಯು
ಮಂಜೇಶ್ವರ, ಮೇ 17: ರಾಷ್ಟ್ರೀಯ ಹೆದ್ದಾರಿ 66ರ ಹೊಸಂಗಡಿ ಸಮೀಪದ ಕನಿಲದಲ್ಲಿ ಕರ್ನಾಟಕ ಸಾರಿಗೆ ಇಲಾಖೆಯ ಬಸ್ ಹಾಗೂ ಓಮ್ನಿ ವ್ಯಾನ್ ಮುಖಾಮುಖಿ ಢಿಕ್ಕಿ ಹೊಡೆದು ಓರ್ವ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಮೃತಪಟ್ಟವರನ್ನು ಉಪ್ಪಳ ಹಿದಾಯತ್ ಬಝಾರಿನ ಶೇಖ್ ಇಸ್ಮಾಯಿಲ್ ಎಂಬವರ ಪುತ್ರ ಅಬ್ದುಲ್ ಅಝೀಝ್.ಕೆ (50) ಎಂದು ಗುರುತಿಸಲಾಗಿದೆ. ಉಳಿದ ಮೂವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವೆಂದು ತಿಳಿದು ಬಂದಿದೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲಿಡಲಾಗಿದೆ.
ಕಾಸರಗೋಡು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸು ಹಾಗೂ ಮಂಗಳೂರಿನಿಂದ ಉಪ್ಪಳ ಕಡೆ ತೆರಳುತ್ತಿದ್ದ ಓಮ್ನಿ ವ್ಯಾನ್ ಮುಖಾಮುಖಿ ಢಿಕ್ಕಿ ಹೊಡೆದು ಓಮ್ನಿಯಲ್ಲಿದ್ದ ನಾಲ್ವರಲ್ಲಿ ಮೂವರು ಗಂಭೀರ ಗಾಯಗೊಂಡಿದ್ದರು. ಇದರಲ್ಲಿ ಅಝೀಝ್ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ.
ಓಮ್ನಿ ಬಸ್ಸಿನ ಮುಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಓಮ್ನಿ ವ್ಯಾನ್ ಬಸ್ಸಿನ ಮುಂಭಾಗದಲ್ಲಿ ಸಿಲುಕಿತ್ತು. ಸ್ಥಳೀಯರು ಓಮ್ನಿಯಲ್ಲಿದ್ದ ಮೂವರನ್ನು ಹೊರಗೆ ತೆಗೆದಿದ್ದರು.