ಎತ್ತಿನಹೊಳೆ ಯೋಜನೆಯ ಮೂಲಕ ದ್ವಿಪಕ್ಷಗಳ ನಾಟಕ: ಯಾದವ ಶೆಟ್ಟಿ ಲೇವಡಿ
ಮೂಡುಬಿದಿರೆ, ಮೇ 17: ಸಿಐಟಿಯು ಪಕ್ಷವು ನೇರ ನಡೆನುಡಿಯ ಪಕ್ಷವಾಗಿದೆ. ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಬಿಜೆಪಿ ಜಾರಿಗೆ ತಂದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಹಣ ಹೊಂದಿಸಿದೆ. ಆದರೆ ದ್ವಿಪಕ್ಷಗಳ ರಾಜಕಾರಣಿಗಳು ಪರ ವಿರೋಧ ಮಾತನಾಡುವ ಮೂಲಕ ನಾಟಕ ಮಾಡುತ್ತಿದ್ದಾರೆಂದು ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಲೇವಡಿ ಮಾಡಿದ್ದಾರೆ.
ಅವರು ಮಂಗಳವಾರ ಸಮಾಜ ಮಂದಿರದಲ್ಲಿ ನಡೆದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಮೂಡುಬಿದಿರೆ ವಲಯ ಇದರ ದ್ವಿತೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ತಮ್ಮ ಪಕ್ಷಕ್ಕೆ ರಾಜ್ಯದ ಎಲ್ಲಾ ಜನರ ಹಿತವೂ ಮುಖ್ಯ. ತಾವು ಉತ್ತರ ಕರ್ನಾಟಕದಲ್ಲಿ ಆಗಲಿ ದ.ಕ ಜಿಲ್ಲೆಯಲ್ಲಾಗಿ ಎತ್ತಿನಹೊಳೆ ಯೋಜನೆಯ ಬಗ್ಗೆ ಒಂದೇ ತರವಾಗಿ ಮಾತನಾಡುವುದೆಂದು ತಿಳಿಸಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಬಂಡವಾಳಶಾಹಿಗಳಿಗೆ ಮಣೆ ಹಾಕುವ ಮೂಲಕ ರಾಜ್ಯದ ಬಡವರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಸದಸ್ಯರು ಸಂಘಟನೆಯನ್ನು ಇನ್ನೂ ಹೆಚ್ಚು ಬಲಪಡಿಸುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಆ ದಿಕ್ಕಿನಲ್ಲಿ ನಾವು ನಡೆಯಬೇಕಾಗಿದೆ ಎಂದು ಕರೆ ನೀಡಿದರು.
ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಂಕರ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮ ನಿರೂಪಿಸಿದರು. ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ, ಸಿಐಟಿಯು ಮುಖಂಡರುಗಳಾದ ರಮಣಿ, ರಾಧಾ, ಗಿರಿಜಾ, ಸೀತಾರಾಮ ಶೆಟ್ಟಿ, ಕೃಷ್ಣಪ್ಪ, ಸುಂದರ ಶೆಟ್ಟಿ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.