ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸ್ನೇಹ ಮಿಲನ
ಮಂಗಳೂರು, ಮೇ 17: ದೇರಳಕಟ್ಟೆ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸೇವೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯದ ಎಲ್ಲಾ ಪ್ರಾಂತ್ಯಗಳಲ್ಲಿ ಜನಪ್ರಿಯಗೊಳಿಸುವಲ್ಲಿ ಮುಖ್ಯ ಪಾತ್ರವಹಿಸಿದ ಸ್ನೇಹಿತರು, ಹಿತೈಷಿಗಳು ಮತ್ತು ಸೇವಾಸಂಸ್ಥೆಗಳನ್ನು ಗುರುತಿಸಿ ಪ್ರಶಂಶಿಸುವ ಮತ್ತು ಸನ್ಮಾನಿಸುವ ಕಾರ್ಯಕ್ರಮವು ಇತ್ತೀಚೆಗೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಗುಲಾಂ ಜೀಲಾನಿ ಖಾದಿರಿ, ಯೆನೆಪೊಯ ಆಸ್ಪತ್ರೆಯು ಅತ್ಯಂತ ಮಿತ ದರದಲ್ಲಿ ನೀಡುತ್ತಿರುವ ಆರೋಗ್ಯ ಸೇವೆಯನ್ನು ಸಮಾಜದ ಎಲ್ಲಾ ಬಡ ವರ್ಗದ ಜನರು ಪಡೆಯುವಲ್ಲಿ ಕಾರಣೀಭೂತರಾದ ಭಾಗೀದಾರರ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಹೇಳಿದರು.
ಸ್ನೇಹ ಮಿಲನ ಕೂಟದಲ್ಲಿ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆರೋಗ್ಯ ಸೇವೆಯನ್ನು ಸಮಾಜದಲ್ಲಿ ಅವಕಾಶ ವಂಚಿತ ಹಾಗೂ ಆರ್ಥಿಕವಾಗಿ ಆಶಕ್ತರಾದ ಕುಟುಂಬಗಳಿಗೆ ತಲುಪಿಸುವಲ್ಲಿ ನಿರತರಾದ ವ್ಯಕ್ತಿ ಹಾಗೂ ಸಂಸ್ಥೆಗಳನ್ನು ಸನ್ಮಾನಿಸಲಾಯಿತು.
ಆಸ್ಪತ್ರೆಯ ಆಡಳಿತ ವಿಭಾಗದ ಡಾ. ಸುನಿತಾ ಸಲ್ದಾನ ಆಸ್ಪತ್ರೆಯ ಸೇವಾಸೌಲಭ್ಯಗಳ ಮಾಹಿತಿಯೊಂದಿಗೆ ರೋಗಿಗಳ ಸೇವೆಯಲ್ಲಿ ಆಸ್ಪತ್ರೆಯು ಕೈಗೊಂಡಿರುವ ಕಾರ್ಯಕ್ರಮಗಳನ್ನು ತಿಳಿಸಿದರು.
ವೈದ್ಯಕೀಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಮುಹಮ್ಮದ್ ಗುತ್ತಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಗಳೂರು ಯೆನೆಪೊಯ ಸ್ಪೆಷ್ಯಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಮುಹಮ್ಮದ್ ತಾಹಿರ್ ಮತ್ತು ಯೆನೆಪೊಯ ವಿಶ್ವವಿದ್ಯಾನಿಲಯದ ಖರೀದಿ ವಿಭಾಗದ ನಿರ್ದೇಶಕ ಯೆನೆಪೊಯ ಖುರ್ಷಿದ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.