ಸುಶೀಲ್ ಕುಮಾರ್ ಮನವಿ ವಿಚಾರಣೆ ನಡೆಸಲು ದಿಲ್ಲಿ ಕೋರ್ಟ್ ಆದೇಶ
ಹೊಸದಿಲ್ಲಿ, ಮೇ 15: ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಪದಕ ಪುರಸ್ಕೃತ ಕುಸ್ತಿಪಟು ಸುಶೀಲ್ ಕುಮಾರ್ ಅವರ ಮನವಿಯನ್ನು ಆಲಿಸುವಂತೆ ದಿಲ್ಲಿ ಹೈಕೋರ್ಟ್ ಇಂದು ಭಾರತದ ಕುಸ್ತಿ ಒಕ್ಕೂಟಕ್ಕೆ ಆದೇಶ ನೀಡಿದೆ.
ರಿಯೋ ಒಲಿಂಪಿಕ್ಸ್ಗೆ 74 ಕೆ.ಜಿ.ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಗೆ ಸ್ಪರ್ಧಾಳುಗಳ ಆಯ್ಕೆ ಮೊದಲು ಟ್ರಯಲ್ಸ್ ನಡೆಸಬೇಕು ಎಂದು ಸುಶೀಲ್ ಕುಮಾರ್ ಅವರು ದಿಲ್ಲಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಮನ್ಮೋಹನ್ ಅವರನ್ನೊಳಗೊಂಡ ನ್ಯಾಯಪೀಠ ಸುಶೀಲ್ ಕುಮಾರ್ ಅವರ ಅರ್ಜಿಯ ವಿಚಾರಣೆ ನಡೆಸಿ ಅವರ ಮನವಿಯನ್ನು ಆಲಿಸಲು ಆದೇಶ ನೀಡಿದೆ. ಕುಸ್ತಿ ಒಕ್ಕೂಟ ಮತ್ತು ಕ್ರೀಡಾ ಸಚಿವಾಲಯಕ್ಕೆ ಈ ಸಂಬಂಧ ದಿಲ್ಲಿ ಹೈಕೋರ್ಟ್ ನೋಟಿಸ್ ನೀಡಿದೆ.
ಸುಶೀಲ್ ಕುಮಾರ್ ಅವರು ಒಲಿಂಪಿಕ್ಸ್ನ ಆಯ್ಕೆಗೆ ತಮ್ಮ ಹಾಗೂ ನರಸಿಂಗ್ ಪಂಚಮ್ ಯಾದವ್ ನಡುವೆ ಟ್ರಯಲ್ಸ್ ನಡೆಸಬೇಕು ಎಂದು ಮನವಿ ಮಾಡಿದ್ದರು. ನರಸಿಂಗ್ ಪಂಚಮ್ ಯಾದವ್ ರಿಯೋ ಒಲಿಂಪಿಕ್ಸ್ನ ಪೂರ್ವ ತಯಾರಿ ಶಿಬಿರಕ್ಕೆ ಆಯ್ಕೆಯಾಗಿದ್ದರು.
ಲಾಸ್ ವೇಗಸ್ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಶಿಪ್ನ 74 ಕೆ.ಜಿ. ವಿಭಾಗದಲ್ಲಿ ನರಸಿಂಗ್ ಪಂಚಮ್ ಯಾದವ್ ಕಂಚು ಜಯಿಸುವ ಮೂಲಕ ಒಲಿಂಪಿಕ್ಸ್ಗೆ ತೇರ್ಗಡೆಯಾಗಿದ್ದರು. ಭಾರತ ಒಲಿಂಪಿಕ್ಸ್ನಲ್ಲಿ ಅವಕಾಶ ಕೈ ತಪ್ಪಬಾರದು. ಒಂದು ವೇಳೆ ಕುಸ್ತಿ ಒಕ್ಕೂಟ ಮತ್ತು ಕ್ರೀಡಾ ಸಚಿವಾಲಯಕ್ಕೆ ಈ ಸಮಸ್ಯೆಯನ್ನು ಬಗೆ ಹರಿಸಲು ಸಾಧ್ಯವಾಗದಿದ್ದರೆ ತನ್ನ ಮಧ್ಯೆ ಪ್ರವೇಶ ಅನಿವಾರ್ಯವಾದಿತು ಎಂದು ಎಚ್ಚರಿಸಿದೆ.
ಸುಶೀಲ್ ಕುಮಾರ್ ಭುಜನೋವಿನ ಕಾರಣದಿಂದಾಗಿ ಕುಸ್ತಿಕೂಟದಲ್ಲಿ ಭಾಗವಹಿಸಿರಲಿಲ್ಲ. ಇದೀಗ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿರುವ ಸುಶೀಲ್ ಕುಮಾರ್ ನ್ಯಾಯಾಲಯಕ್ಕೆ ಮೊರೆ ಹೋಗುವ ಮೊದಲು ಪ್ರಧಾನ ಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದರು.