ಪತ್ರಕರ್ತನ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಚಾತ್ರ , ಮೇ 17 : ಮೇ 12 ರಂದು ಜಾರ್ಖಂಡ್ ನ ಚಾತ್ರ ಜಿಲ್ಲೆಯ ದೇವ್ವಾರಿಯದಲ್ಲಿ ಸುದ್ದಿ ವಾಹಿನಿವೊಂದರ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಇಂದು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪತ್ರಕರ್ತ ಅಖಿಲೇಶ್ ಪ್ರತಾಪ್ ಸಿಂಗ್ (35) ಖಾಸಗಿ ಸುದ್ದಿ ವಾಹಿನಿವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರನ್ನು ಮೇ 12 ರಂದು ದೇವ್ವಾರಿಯ ಪಂಚಾಯತ್ ಕಾರ್ಯಾಲಯದ ಸಮೀಪ ಅಪರಿಚಿತ ದುರ್ಷ್ಕಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.ಈ ಪ್ರಕರಣ ದೇಶಾದ್ಯಂತ ನಡೆಯುತ್ತಿರುವ ಪತ್ರಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ಜಾರ್ಖಂಡ್ ಪೊಲೀಸರು ಬಿರ್ಬಲ್ ಸಾವೋ ಹಾಗೂ ಜಾಮಾನ್ ಕುಮಾರ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಜನಿ ಜಾ ಹೇಳಿದ್ದಾರೆ.
ಘಟನೆಯನ್ನು ಖಂಡಿಸಿದ ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಿ.ಕೆ.ಪಾಂಡೆಯವರ ಬಳಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಗುಂಡಿಗೆ ಬಲಿಯಾದ ಪತ್ರಕರ್ತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಬೇಕೆಂದು ಒತ್ತಾಯಿಸಿ ಸ್ಥಳೀಯ ಪತ್ರಕರ್ತ ನಿಯೋಗವೊಂದು ಚಾತ್ರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಪತ್ರಕರ್ತನ ಹತ್ಯೆಯನ್ನು ಖಂಡಿಸಿ ಮೇ 13 ರಂದು ಚಾತ್ರ ನಗರದಲ್ಲಿ ಬಂದ್ ಆಚರಿಸಲಾಗಿತ್ತು.