ಎತ್ತಿನಹೊಳೆ ಯೋಜನೆ ವಿರೋಧಿಸಿ ದ.ಕ.ಜಿಲ್ಲಾ ಬಂದ್ ಹಿನ್ನೆಲೆ: ಕೊಣಾಜೆ ಠಾಣೆಯಲ್ಲಿ ಶಾಂತಿ ಸಭೆ

ಮುಡಿಪು: ಎತ್ತಿನಹೊಳೆ ಯೋಜನೆ ವಿರುದ್ಧ ನಡೆಯಲಿರುವ ಜಿಲ್ಲಾ ಬಂದ್ ಪೂರ್ವಭಾವಿಯಾಗಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಅಶೋಕ್ ನೇತೃತ್ವದಲ್ಲಿ ಶಾಂತಿ ಸಭೆಯು ಬುಧವಾರ ನಡೆಯಿತು. ಸಭೆಯಲ್ಲಿ ಕೊಣಾಜೆ ಠಾಣಾ ವ್ಯಾಪ್ತಿಕ ಸಾಮಾಜಿಕ, ರಾಜಕೀಯ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.
ಠಾಣಾಧಿಕಾರಿ ಅಶೋಕ್ ಅವರು ಮಾತನಾಡಿ ಎಲ್ಲರೂ ಅವರವರ ಸ್ವಂತ ನಿರ್ಧಾರದಲ್ಲಿ ಬಂದ್ ನಡೆಸಬೇಕೇ ಹೊರತು ಬಲತ್ಕಾರದ ಬಂದ್ಗೆ ಅವಕಾಶವಿಲ್ಲ.ಕೆಲವೆಡೆ ಬಂದ್ನ ಲಾಭ ಪಡೆದು ಕಿಡಿಗೇಡಿಗಳು ವಿಧ್ವಂಸಕ ಕೃತ್ಯಗಳನ್ನು ಮಾಡುವ ಮುನ್ಸೂಚನೆ ದೊರೆತಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿದರು.
ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ ಎತ್ತಿನ ಹೊಳೆ ಯೋಜನೆ ವಿರುದ್ಧ ಹೋರಾಟವು ದಕ್ಷಿಣ ಕನ್ನಡ ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆಯಾಗಿದ್ದು, ಇದಕ್ಕೆ ತುಳುನಾಡಿನವರೆಲ್ಲ ಜಾತಿ,ಮತ,ರಾಜಕೀಯ ಮರೆತು ಬೆಂಬಲ ನೀಡಿ ಸ್ವಯಂ ಪ್ರೇರಿತ ಬಂದ್ ನಡೆಸುವುದು ಪ್ರತಿಯೊಬ್ಬ ಜವಬ್ದಾರಿ ಎಂದು ಹೇಳಿದಾಗ,ತಕ್ಷಣ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಮುಖಂಡ ಉಮ್ಮರ್ ಫಜೀರ್ ಬಂದ್ ಮಾಡಲು ಆದೇಶಿಸಲು ಈ ಸಭೆಗೆ ಯಾರನ್ನೂ ಕರೆಸಿಲ್ಲ, ಬಂದಲ್ಲಿ ಅಹಿತಕರ ಘಟನೆಗಳು ನಡೆಯದೇ ಇರುವ ಹಾಗೆ ನಿರ್ದೇಶನಗಳನ್ನು ನೀಡಲು ಸಭೆ ಕರೆದಿರುವುದಾಗಿ ಹೇಳಿದರು.
ಮುಡಿಪು ಇನ್ಪೋಸಿಸ್ ಸಂಸ್ಥೆಯ ಅಧಿಕಾರಿ ಉದಯ್ ಅವರು ಬಂದ್ ಹಿನ್ನೆಲೆಯಲ್ಲಿ ಕಂಪನಿಯು ಕಾರ್ಯಸ್ಥಗಿತಗೊಳಿಸಿ ಉದ್ಯೋಗಿಗಳಿಗೆ ರಜೆ ನೀಡಿದ್ದು ಬಂದ್ಗೆ ಬೆಂಬಲಿಸಿರುವುದಾಗಿ ಹೇಳಿದರು.
ಸಭೆಯಲ್ಲಿ ಬ್ಯಾರೀಸ್ ಇಂಜಿನಿಯರಿಂಗ್ ಕಾಲೇಜಿನ ಮುಖ್ಯಸ್ಥ ಸಫ್ವಾನ್, ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಶರೀಫ್, ತುಳು ನಾಡ ರಕ್ಷಣಾ ವೇದಿಕೆಯ ಸಿರಾಜ್, ಅಂಬ್ಲಮೊಗರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಫೀಕ್, ಬಿಜೆಪಿ ಮುಖಂಡರಾದ ಉದಯ್ ಶಂಕರ್ ಬಲೆತ್ತೋಡು, ಚಂದ್ರಶೇಖರ್ ಶೆಟ್ಟಿ ಮರೀಕಳ ಉಪಸ್ಥಿತರಿದ್ದರು.







