ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ: ಇಂದು ಮತ ಎಣಿಕೆ
ಹೊಸದಿಲ್ಲಿ, ಮೇ 18: ದೇಶಾದ್ಯಂತ ಕುತೂಹಲ ಕೆರಳಿಸಿರುವ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಗುರುವಾರ ಮುಂಜಾನೆ ನಡೆಯಲಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪುದುಚೇರಿ ವಿಧಾನಸಭೆಗಳ ಸ್ಪಷ್ಟಚಿತ್ರಣ ಪೂರ್ವಾಹ್ನ 11 ಗಂಟೆಯ ವೇಳೆಗೆ ಲಭ್ಯವಾಗಲಿದೆ. ಈ ಐದು ರಾಜ್ಯಗಳಲ್ಲಿ ಯಾರು ಸರಕಾರ ನಡೆಸುತ್ತಾರೆ ಎಂಬ ಚಿತ್ರಣ ಮಧ್ಯಾಹ್ನ 12ರ ವೇಳೆಗೆ ದೊರಕಲಿದೆ.
ಬೆಳಗ್ಗೆ 8ಕ್ಕೆ ಆರಂಭವಾಗುವ ಮತ ಎಣಿಕೆ ಮಧ್ಯಾಹ್ನ 3ರೊಳಗೆ ಮುಕ್ತಾಯವಾಗಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ. ಚುನಾವಣಾ ಆಯೋಗದ ಮಾರ್ಗಸೂಚಿಯ ಪ್ರಕಾರ, ಅಂಚೆ ಮತಗಳ ಎಣಿಕೆ ನಡೆದು ಅರ್ಧ ಗಂಟೆಯ ಬಳಿಕ ಇಲೆಕ್ಟ್ರಾನಿಕ್ ಮತದಾನ ಯಂತ್ರಗಳ ಮತಗಳನ್ನು ಎಣಿಕೆ ಮಾಡಲಾಗುವುದು.
ಮೇ 16ರಂದು ಮತದಾನೋತ್ತರ ಸಮೀಕ್ಷೆ ಗಳ ಪ್ರಕಾರ, ಅಸ್ಸಾಂ, ತಮಿಳುನಾಡು ಹಾಗೂ ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಕಂಡು ಬಂದಿದ್ದು, ಬಿಜೆಪಿ ಮೊಟ್ಟಮೊದಲ ಬಾರಿಗೆ ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅಂದಾಜು ಮಾಡಲಾಗಿದೆ. ಕಾಂಗ್ರೆಸ್ ಕೇರಳ ಹಾಗೂ ಅಸ್ಸಾಂ ಎರಡೂ ಸರಕಾರಗಳನ್ನೂ ಕಳೆದುಕೊಳ್ಳಲಿದ್ದು, ಡಿಎಂಕೆ ತಮಿಳುನಾಡಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅಧಿಕಾರ ಉಳಿಸಿಕೊಳ್ಳುವ ನಿರೀಕ್ಷೆ ಇದೆ.