ವೇದ ಮಂತ್ರ ಜತೆಗೆ ಯೋಗ ಸ್ವೀಕಾರಾರ್ಹವಲ್ಲ
ದಾರುಲ್ ಉಲೂಂ ದೇವ್ಬಂದ್
![ವೇದ ಮಂತ್ರ ಜತೆಗೆ ಯೋಗ ಸ್ವೀಕಾರಾರ್ಹವಲ್ಲ ವೇದ ಮಂತ್ರ ಜತೆಗೆ ಯೋಗ ಸ್ವೀಕಾರಾರ್ಹವಲ್ಲ](https://www.varthabharati.in/sites/default/files/images/articles/2016/05/19/52330515.jpg)
ಮೀರಠ್ ,ಮೇ 19: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು 45 ನಿಮಿಷಗಳ ಯೋಗ ಪ್ರದರ್ಶನಕ್ಕೆ ಮುನ್ನ ವೇದಮಂತ್ರ ಹಾಗೂ ಓಂ ಪಠಿಸುವ ಮೂಲಕ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಯುಷ್ ಸಚಿವಾಲಯ ಸುತ್ತೋಲೆ ಹೊರಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ದಾರುಲ್ ಉಲೂಂ ದೇವ್ಬಂದ್, ಸರ್ಕಾರದ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯೋಗದ ಜತೆ ಧರ್ಮ ಬೆರೆಸುವ ಹುನ್ನಾರ ಸ್ವೀಕಾರಾರ್ಹವಲ್ಲ ಎಂದು ಹೇಳಿದೆ. ಮುಸ್ಲಿಂ ವಿದ್ಯಾರ್ಥಿಗಳಿಗೆ ವೇದ ಪಠಿಸುವಂತೆ ಅಥವಾ ಓಂ ಉಚ್ಚರಿಸುವಂತೆ ಒತ್ತಡ ಹೇರಿದರೆ, ಆ ಸಮಾರಂಭದಿಂದ ಹೊರಬರಬೇಕು ಎಂದು ಮುಫ್ತಿಗಳು ಕರೆ ನೀಡಿದ್ದಾರೆ.
"ಯೋಗ ಒಂದು ದೈಹಿಕ ವ್ಯಾಯಾಮವಾದರೆ ನಾವು ಸ್ವೀಕರಿಸುತ್ತಿದ್ದೆವು. ಆದರೆ ಅದರ ಜತೆಗೆ ಓಂ ಹಾಗೂ ವೇದಪಠಣ ಸೇರಿಸುವ ಮೂಲಕ ಅದಕ್ಕೆ ಧಾರ್ಮಿಕತೆಯ ಟ್ವಿಸ್ಟ್ ನೀಡದಲಾಗಿದೆ. ಜತೆಗೆ ಅದನ್ನು ಕಡ್ಡಾಯಗೊಳಿಸುವ ಕ್ರಮ ಸ್ವೀಹಾರಾರ್ಹವಲ್ಲ. ಯೋಗ ನಿಮಗೆ ಪ್ರಯೋಜನವಾಗಬಹುದು. ಆದರೆ ನನಗಂತೂ ಅಲ್ಲ. ಅದನ್ನು ಎಲ್ಲರ ಮೇಲೆ ಹೇರುವಂತಿಲ್ಲ" ಎಂದು ದಾರುಲ್ ಉಲೂಂ ದೇವ್ಬಂದ್ ಕುಲಪತಿ ಅಬ್ದುಲ್ ಖಾಸಿಂ ನೊಮನಿ ಅಭಿಪ್ರಾಯಪಟ್ಟಿದ್ದಾರೆ.
ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಬಿಡುಗಡೆ ಮಾಡಿರುವ ಸಾಮಾನ್ಯ ಯೋಗ ಶಿಷ್ಟಾಚಾರ ಎಂಬ ಸುತ್ತೋಲೆಯಲ್ಲಿ ಯೋಗಾಸನ, ಧ್ಯಾನ ಹಾಗೂ ಪಠಣವನ್ನು ಸೇರಿಸಲಾಗಿದೆ. ಎಲ್ಲ ಕಚೇರಿ, ವಿಶ್ವವಿದ್ಯಾನಿಲಯ ಹಾಗೂ ಶಾಲೆಗಳಿಗೆ ಸುತ್ತೋಲೆ ನೀಡಲಾಗಿದೆ. ನಮಸ್ಕಾರ ಮುದ್ರೆಯೊಂದಿಗೆ ಪ್ರಾರ್ಥನೆ ಮಾಡಲು ಸೂಚಿಸಿದೆ. ಜತೆಗೆ ಋಗ್ವೇದ ಮಂತ್ರಗಳನ್ನು ಪಠಿಸುವಂತೆಯೂ ಸೂಚಿಸಲಾಗಿದೆ.
ವಿವಾದದ ಸೂಚನೆ ಕಂಡುಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸಚಿವಾಲಯ, ಓಂ ಹಾಗೂ ವೇದ ಪಠಣ ಕಡ್ಡಾಯವಲ್ಲ; ಐಚ್ಛಿಕ ಎಂದು ಸ್ಪಷ್ಟಪಡಿಸಿದೆ. ಯೋಗಾಸನ ಮಾಡುವವರು ಮಂತ್ರಪಠಣ ಬದಲು ಮೌನವಾಗಿದ್ದರೂ ಯಾರೂ ಆಕ್ಷೇಪಿಸುವುದಿಲ್ಲ ಎಂದು ಆಯುಷ್ ಸಚಿವಾಲಯದ ಜಂಟಿ ಕಾರ್ಯದರ್ಶಿ ಅನಿಲ್ ಕುಮಾರ್ ಗನೇರಿವಾಲಾ ಸ್ಪಷ್ಟಪಡಿಸಿದ್ದಾರೆ.