ಕಡಬ: ಪರಿಸರದಲ್ಲಿ ಶಾಂತಿಯುತ ಬಂದ್
ಕಡಬ, ಮೇ.19. ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕಡಬ ಪರಿಸರದಲ್ಲಿ ಪೂರ್ಣ ಬೆಂಬಲ ವ್ಯಕ್ತವಾಯಿತು. ಸ್ಥಳೀಯ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಮುಚ್ಚುವ ಮೂಲಕ ಶಾಂತಿಯುತ ಬಂದ್ಗೆ ಬೆಂಬಲ ಸೂಚಿಸಿದರು. ಬೆರಳೆಣಿಕೆಯ ಅಂಗಡಿ ಮುಂಗಟ್ಟುಗಳು ಬೆಳಿಗ್ಗೆ ತೆರೆದಿತ್ತಾದರೂ ಜನಸಂಚಾರವಿಲ್ಲದ ಕಾರಣದಿಂದ ಮುಚ್ಚಿದರು. ಪರಿಸರದಲ್ಲಿನ ಬ್ಯಾಂಕ್, ಸರಕಾರಿ ಕಛೇರಿಗಳಿಗೆ ರಜೆ ನೀಡಲಾಗಿತ್ತು. ಬಂದ್ ಬಗ್ಗೆ ಅರಿವಿಲ್ಲದ ಹಾಗೂ ಮದುವೆ ಮುಂತಾದ ಶುಭ ಸಮಾರಂಭಗಳಿಗೆ ತೆರಳುವ ಸಾರ್ವಜನಿಕರು ಬಸ್ಸು ಸಂಚಾರವಿಲ್ಲದ ಕಾರಣದಿಂದ ರಿಕ್ಷಾ ಹಾಗೂ ಜೀಪುಗಳನ್ನು ಅವಲಂಬಿಸುವ ಮೂಲಕ ತೊಂದರೆ ಅನುಭವಿಸಿದರು. ಆಲಂಕಾರು, ಹೊಸ್ಮಠ, ಕೋಡಿಂಬಾಳ, ಮರ್ಧಾಳ, ನೆಟ್ಟಣ ಸೇರಿದಂತೆ ಬಹುತೇಕ ಕಡೆಗಳಲ್ಲಿ ಒಂದೆರಡು ಅಂಗಡಿಗಳನ್ನು ಬಿಟ್ಟರೆ ಉಳಿದವೆಲ್ಲ ಭಾಗಶಃ ಮುಚ್ಚಿದ್ದವು. ಒಟ್ಟಿನಲ್ಲಿ ಕಡಬ ಪರಿಸರದ ಜನರು ಜಿಲ್ಲಾ ಬಂದ್ಗೆ ಶಾಂತಿಯುತವಾಗಿ ಬೆಂಬಲ ಸೂಚಿಸಿದರು.
Next Story