ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಎಡರಂಗ; ಮತ್ತೆ ವಿಜೃಂಭಿಸಿದ ಅಮ್ಮ-ದೀದಿ
![ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಎಡರಂಗ; ಮತ್ತೆ ವಿಜೃಂಭಿಸಿದ ಅಮ್ಮ-ದೀದಿ ಅಸ್ಸಾಂನಲ್ಲಿ ಬಿಜೆಪಿ, ಕೇರಳದಲ್ಲಿ ಎಡರಂಗ; ಮತ್ತೆ ವಿಜೃಂಭಿಸಿದ ಅಮ್ಮ-ದೀದಿ](https://www.varthabharati.in/sites/default/files/images/articles/2016/05/19/JM.gif)
ಪುದುಚೇರಿಯಲ್ಲಿ ಕಾಂಗ್ರೆಸ್
ಹೊಸದಿಲ್ಲಿ, ಮೇ 19: ಅತ್ಯಂತ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಈಶಾನ್ಯ ಭಾರತದಲ್ಲಿ ಎನ್ಡಿಎ ತನ್ನ ಧ್ವಜವನ್ನು ಇದೇ ಮೊದಲ ಬಾರಿ ನೆಟ್ಟಿದೆ. ಅಸ್ಸಾಂನಲ್ಲಿ ಎನ್ಡಿಎ ಸ್ಪಷ್ಟ ಬಹುಮತವನ್ನು ಪಡೆದಿದ್ದರೆ, ತಮಿಳುನಾಡಿನಲ್ಲಿ ಜಯಲಲಿತಾ ನೇತೃತ್ವದ ಎಡಿಎಂಕೆ, ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ವಿಜಯದೊಂದಿಗೆ ಎರಡನೆ ಬಾರಿಗೆ ಅಧಿಕಾರಕ್ಕೆ ಬಂದಿವೆ. ಕೇರಳದಲ್ಲಿ ಎಡಪಕ್ಷಗಳ ಮೈತ್ರಿಕೂಟ ಎಲ್ಡಿಎಫ್ ಅಧಿಕಾರ ಹಿಡಿದಿದೆ. ಇದೇ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶ ಪುದುಚೇರಿ ಕಾಂಗ್ರೆಸ್ ಮೈತ್ರಿಕೂಟದ ಪಾಲಾಗಿದೆ. ಒಟ್ಟಿನಲ್ಲಿ ಎರಡು ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ.
ಅಸ್ಸಾಂನಲ್ಲಿ ಒಟ್ಟು 126 ಕ್ಷೇತ್ರಗಳ ಪೈಕಿ 86 ಸ್ಥಾನಗಳು ಬಿಜೆಪಿ ವಶವಾಗಿದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಹಾದಿಯಲ್ಲಿದೆ. ಕಾಂಗ್ರೆಸ್ 26 ಸ್ಥಾನಗಳಲ್ಲಿ ತೃಪ್ತಿ ಪಟ್ಟುಕೊಂಡಿದೆ. 15 ವರ್ಷಗಳಿಂದ ಆಡಳಿತದಲ್ಲಿದ್ದ ಕಾಂಗ್ರೆಸನ್ನು ಬುಡಮೇಲುಗೊಳಿಸಿದೆ. ರಾಜ್ಯದ ಮತದಾರರು ಬದಲಾವಣೆ ಇಚ್ಛಿಸಿರುವುದು ಸ್ಪಷ್ಟವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಬರೇ ಐದು ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು.ಹಲವು ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯಕ್ಕೆ ವಿರುದ್ಧವಾಗಿ ತಮಿಳುನಾಡಿನಲ್ಲಿ ಎಡಿಎಂಕೆ ಭರ್ಜರಿ ಜಯ ಸಾಧಿಸಿ ಹೊಸ ಚರಿತ್ರೆ ಬರೆದಿದೆ.
ಇಲ್ಲಿ 1989ರಿಂದ ಆಳುವ ಪಕ್ಷವು ಮತ್ತೊಂದು ಅವಧಿಗೆ ಅಧಿಕಾರಕ್ಕೆ ಬಂದ ದಾಖಲೆಯಿಲ್ಲ. ಆದರೆ, ಮುಖ್ಯಮಂತ್ರಿ ಜಯಲಲಿತಾ ಈ ಬಾರಿ ಆ ಪರಂಪರೆ ಮುರಿದಿದ್ದಾರೆ.
ತಮಿಳುನಾಡಿನಲ್ಲಿ ಎಐಡಿಎಂಕೆ 132 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದರೆ, ಡಿಎಂಕೆ ಮೈತ್ರಿಕೂಟ 97 ಸ್ಥಾನಗಳನ್ನು ಗೆದ್ದಿವೆ. ಕೇರಳದಲ್ಲಿ ಎಡಪಂಥೀಯ ಮೈತ್ರಿ ಕೂಟ ಎಲ್ಡಿಎಫ್ 91 ಸ್ಥಾನಗಳನ್ನು ಪಡೆದುಕೊಂಡು ಅಧಿಕಾರದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಿದೆ. ಕಾಂಗ್ರೆಸ್ ಮೈತ್ರಿಕೂಟ ಯುಡಿಎಫ್ 47 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಕೇರಳದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ, ಖಾತೆ ತೆರೆದಿದೆ. ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್211 ಸ್ಥಾನಗಳನ್ನು ಪಡೆದು ಮತ್ತೆ ವಿಜೃಂಭಿಸಿದೆ. ಎಡಪಕ್ಷ ಮಿತ್ರಕೂಟ ಕೇವಲ 74 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ ಬಿಜೆಪಿ ಎರಡು ಸ್ಥಾನಗಳನ್ನು ಪಡೆದುಕೊಂಡಿದೆ. ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕಾಂಗ್ರೆಸ್ ಮಿತ್ರರು 17 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿಯುವ ಹಂತದಲ್ಲಿದ್ದಾರೆ.
ಕೇರಳದಲ್ಲಿ ಜೆಡಿಎಸ್ 3 ಸ್ಥಾನಗಳಲ್ಲಿ ಗೆಲುವು
ಬೆಂಗಳೂರು, ಮೇ 19: ಕೇರಳ ವಿಧಾನಸಭೆ ಚುನಾವಣೆಯಲ್ಲಿ 5 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಜಾತ್ಯತೀತ ಜನತಾದಳ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಕೇರಳದಲ್ಲಿ ಒಂದು ವಾರಗಳ ಕಾಲ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದರು. ಜೆಡಿಎಸ್ ಎಡರಂಗದೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
13ನೆ ಬಾರಿ ಗೆದ್ದ ಕರುಣಾನಿಧಿ
ಚೆನ್ನೈ, ಮೇ 19: ಡಿಎಂಕೆ ಅಧ್ಯಕ್ಷ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ತಮಿಳುನಾಡು ವಿಧಾನ ಸಭೆಗೆ 13ನೆ ಬಾರಿಗೆ ಆಯ್ಕೆಯಾಗಿದ್ದಾರೆ. ತಿರುವರೂರ್ ವಿಧಾನಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಕರುಣಾನಿಧಿ, ಎಐಡಿಎಂಕೆ ಅಭ್ಯರ್ಥಿಯನ್ನು 68,366 ಮತಗಳ ಅಂತರದಿಂದ ಸೋಲಿಸಿದ್ದಾರೆ.
91ರ ಹರೆಯದ ಕರುಣಾಧಿಯವರು 1957ರಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ಸತತ 13 ಬಾರಿ ಜಯ ಗಳಿಸುವ ಮೂಲಕ ಸೋಲಿಲ್ಲದ ಸರದಾರನಾಗಿದ್ದಾರೆ.
...
ಅಭೂತಪೂರ್ವ ವಿಜಯಕ್ಕಾಗಿ ಅಸ್ಸಾಂನ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರಿಗೆ ಹೃದಯಪೂರ್ವಕ ಅಭಿನಂದನೆಗಳು. ಈ ವಿಜಯವು ಎಲ್ಲ ಮಾನದಂಡಗಳಿಂದಲೂ ಚಾರಿತ್ರಿಕವಾದುದು, ಅದ್ಭುತವಾದುದು.
-ನರೇಂದ್ರ ಮೋದಿ, ಪ್ರಧಾನಿ
...
ನಾನು ಬಿಜೆಪಿಯ ಸಿದ್ಧಾಂತಕ್ಕೆ ವಿರುದ್ಧ ವಾಗಿದ್ದೇನೆ. ಅವರು ಒಡೆದು ಆಳಲು ಬಯಸುತ್ತಾರೆ. ನಾವು ‘ಸಾರೇ ಜಹಾಂ ಸೆ ಅಚ್ಛಾ ಹಿಂದೂಸ್ಥಾನ್ ಹಮಾರಾ’ ಎಂದು ನಂಬಿದವರು. ನಾನು ಒಟ್ಟಿಗೆ ಕೆಲಸ ಮಾಡಬಹುದಾದ -ಚಂದ್ರ ಬಾಬು ನಾಯ್ಡು, ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್, ಜಯಲಲಿತಾ, ಮಾಯಾವತಿ ಮುಂತಾದ ಅನೇಕ ಸ್ನೇಹಿತರು ನನಗಿದ್ದಾರೆ.
- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ
...
ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡಲು ನಮಗೆ ಅವಕಾಶ ನೀಡಿರುವುದಕ್ಕಾಗಿ ಅಸ್ಸಾಂನ ಜನತೆಗೆ ಪ್ರಾಮಾಣಿಕವಾಗಿ ಆಭಾರಿಯಾಗಿದ್ದೇನೆ.
- ಸರಬಾನಂದ ಸೊನೊವಾಲ್, ಅಸ್ಸಾಂನ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ
...
ನನ್ನ ಮೇಲೆ ವಿಶ್ವಾಸವನ್ನು ಮತ್ತೊಮ್ಮೆ ದೃಢೀಕರಿಸಿ, ನನಗೆ ಇನ್ನೊಂದು ಅವಕಾಶ ನೀಡಿದ ಮತದಾರರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ತಮಿಳುನಾಡಿನ ಜನರಿಗೆ ಕೃತಜ್ಞತೆ ಸಲ್ಲಿಸಲು ನನ್ನಲ್ಲಿ ಶಬ್ದಗಳೇ ಇಲ್ಲ. ನನ್ನ ಕೊನೆಯುಸಿರಿರುವವರೆಗೂ ಈ ರಾಜ್ಯದ ಅಭ್ಯುದಯಕ್ಕಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ.
- ಜೆ. ಜಯಲಲಿತಾ, ತಮಿಳುನಾಡು ಮುಖ್ಯಮಂತ್ರಿ
...
ಈ ಫಲಿತಾಂಶವು ಜಾತ್ಯತೀತ ಹಾಗೂ ಭ್ರಷ್ಟಾಚಾರ ಮುಕ್ತ ಕೇರಳಕ್ಕಾಗಿ, ಯುಡಿಎಫ್ನ ಭ್ರಷ್ಟಾಚಾರ ಹಾಗೂ ದುರಾಡಳಿತದ ವಿರುದ್ಧ ತೀರ್ಪು.
- ಪಿಣರಾಯಿ ವಿಜಯನ್, ಸಿಪಿಎಂ ನಾಯಕ, ಕೇರಳ ಮುಖ್ಯಮಂತ್ರಿ ಅಭ್ಯರ್ಥಿ