ದಸಂಸದಿಂದ ತೆರವು ಕಾರ್ಯಾಚರಣೆ
ಸಾರ್ವಜನಿಕ ರಸ್ತೆಗೆ ದಿಗ್ಬಂಧನ ಆರೋಪ
ಪಡುಬಿದ್ರೆ, ಮೇ 19: ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಮುಚ್ಚಿ ದಿಗ್ಬಂಧನ ವಿಧಿಸಿದ್ದಾರೆ ಎಂದು ಆರೋಪಿಸಿ ರಸ್ತೆಯನ್ನು ಬೆಳ್ಳಂಬೆಳಗ್ಗೆ ದಲಿತ ಸಂಘಟನೆಗಳು ತೆರವು ಕಾರ್ಯಾಚರಣೆ ನಡೆಸಿ ರಸ್ತೆ ನಿರ್ಮಿಸಿದ ಘಟನೆ ಗುರುವಾರ ನಡೆದಿದೆ.
ಪಡುಬಿದ್ರೆ ಗ್ರಾಪಂ ವ್ಯಾಪ್ತಿಯ ನಡ್ಸಾಲು ಗ್ರಾಮದ ಮುರುಡಿ ಬ್ರಹ್ಮಸ್ಥಾನದಿಂದ ಗುಡ್ಡೆಹೌಸ್ ದಲಿತ ಕಾಲನಿಗೆ ತೆರಳುವ 100 ಮೀಟರ್ ಸಂಪರ್ಕ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಸಹಿತ ಗ್ರಾಪಂ ಸದಸ್ಯರೊಬ್ಬರು ಮುಚ್ಚಿದ್ದರು. ಇದರಿಂದ ದಲಿತ ಕಾಲನಿಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದ್ದು, ಈ ಬಗ್ಗೆ ಗ್ರಾಪಂ ಸಹಿತ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ತೆರವುಗೊಳಿಸಿ ಸೂಕ್ತ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದರು.
ಗುರುವಾರ ಬೆಳಗ್ಗೆ ಉಡುಪಿ ಹಾಗೂ ಪಡುಬಿದ್ರೆಯ ದಸಂಸ ಮುಖಂಡರು ಜೆಸಿಬಿಯೊಂದಿಗೆ ಆಗಮಿಸಿ ರಸ್ತೆ ನಿರ್ಮಾಣಕ್ಕೆ ತೊಡಗಿದ್ದರು. 30 ಅಡಿ ರಸ್ತೆ ನಿರ್ಮಾಣಗೊಂಡ ಬಳಿಕ ಸ್ಥಳೀಯರ ದೂರಿನಂತೆ ಆಗಮಿಸಿದ ಪೊಲೀಸರು ರಸ್ತೆ ನಿರ್ಮಾಣ ಕಾಮಗಾರಿಗೆ ತಡೆಯೊಡ್ದಿದ್ದರು.
ಶುಕ್ರವಾರ ಸ್ಥಳ ಪರಿಶೀಲನೆ: ಈ ಬಗ್ಗೆ ಪೊಲೀಸರು ತಹಶೀಲ್ದಾರ್ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ದಲಿತ ಸಂಘಟನೆಗಳಿಂದ ಸಮಸ್ಯೆಯ ಬಗ್ಗೆ ಈಗಾಗಲೇ ದೂರುಗಳು ಬಂದಿವೆ. ಶುಕ್ರವಾರ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ತೀರಾ ಅಗತ್ಯ ಎಂದು ಕಂಡುಬಂದಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದವರು ತಿಳಿಸಿದ್ದಾರೆ.
ರಸ್ತೆ ನಿರ್ಮಾಣಕ್ಕೆ ಆಗ್ರಹ: ಗುಡ್ಡೆಹೌಸ್ ದಲಿತ ಕಾಲನಿಗೆ ತೆರಳಲು ಈವರೆಗೆ ಯಾವುದೇ ರಸ್ತೆಗಳು ಇರಲಿಲ್ಲ. ಅಲ್ಲಿಂದ ಮುಂಭಾಗದ ಕುದ್ರುವಾಸಿಗಳಿಗೂ ಇದೇ ದಾರಿ ಬಳಸಬೇಕಿದೆ. ಈ ಭಾಗದ ಜನರಿಗೆ ದಾರಿ ಇಲ್ಲದೆ ಬಹಳಪ್ರಯಾಸಪಡುತ್ತಿದ್ದಾರೆ. ದಲಿತ, ಬಿಲ್ಲವ,ಮೊಗವೀರ ಸಮಾಜದವರು ವಾಸಿಸುತ್ತಿ ದ್ದಾರೆ. ಈ ಬಗ್ಗೆ ಗ್ರಾಪಂ ಸಹಿತ ವಿವಿಧ ಇಲಾಖೆಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಗ್ರಾಮಸ್ಥರ ಬೇಡಿಕೆಗೆ ಮಣಿದು ಇತ್ತೀಚೆಗೆ ಕಾಲುಸಂಕ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಅಲ್ಲದೆ, ಸರಕಾರಿ ಜಾಗಗಳನ್ನೇ ಬಳಸಿ ರಸ್ತೆ ನಿರ್ಮಿಸುತ್ತಿದ್ದೇವೆ. ಇದಕ್ಕೆ ಬೇಕಾದ ಪೂರಕ ದಾಖಲೆಗಳನ್ನೂ ಹೊಂದಿದ್ದೇವೆ. ಯಾವುದೇ ಕಾರಣಕ್ಕೂ ಇಲ್ಲಿ ರಸ್ತೆ ನಿರ್ಮಾಣವಾಗಲೇಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ದಸಂಸ ಮುಖಂಡರು ಎಚ್ಚರಿಸಿದ್ದಾರೆ. ದಸಂಸ ಮುಖಂಡರಾದ ಲೋಕೇಶ್ ಕಂಚಿನಡ್ಕ, ಸೀತಾರಾಮ್ ಪಡುಬಿದ್ರೆ ಉಪಸ್ಥಿತರಿದ್ದರು.