ಸಿಎಂ ಆಗಲು ಹೊರಟು ಶಾಸಕರೂ ಆಗದ ತಮಿಳುನಾಡಿನ ಘಟಾನುಘಟಿ ನಾಯಕರು
![ಸಿಎಂ ಆಗಲು ಹೊರಟು ಶಾಸಕರೂ ಆಗದ ತಮಿಳುನಾಡಿನ ಘಟಾನುಘಟಿ ನಾಯಕರು ಸಿಎಂ ಆಗಲು ಹೊರಟು ಶಾಸಕರೂ ಆಗದ ತಮಿಳುನಾಡಿನ ಘಟಾನುಘಟಿ ನಾಯಕರು](https://www.varthabharati.in/sites/default/files/images/articles/2016/05/20/TN politicians collage.jpg)
ಚೆನ್ನೈ, ಮೇ 20: ತಮಿಳುನಾಡು ಚುನಾವಣಾ ಫಲಿತಾಂಶ, ಭಾರಿ ನಿರೀಕ್ಷೆ ಹೊಂದಿದ್ದ ಡಿಎಂಕೆಗೆ ದೊಡ್ಡ ಹಿನ್ನಡೆ ತಂದಿದೆ. ಈ ಚುನಾವಣೆ ಹಲವು ರಾಜಕೀಯ ಪಕ್ಷಗಳ ಮುಖಂಡರ ಹತಾಶೆಗೂ ಕಾರಣವಾಗಿದ್ದು, ಶಾಸಕರಾಗಿ ಸಿಎಂ ಗದ್ದುಗೆ ಕನಸು ಕಾಣುತ್ತಿದ್ದ ಹಲವು ಮಂದಿಗೆ ಭ್ರಮನಿರಸನವಾಗಿದೆ.
ಅಂಥ ಘಟಾನುಘಟಿಗಳಲ್ಲಿ ವಿಜಯಕಾಂತ್ ಮೊದಲಿಗರು. 37 ಸಾವಿರ ಮತಗಳ ಅಂತರದಿಂದ ಸೋತು ಠೇವಣಿಯನ್ನೂ ಕಳೆದುಕೊಂಡರು. ಅಂತೆಯೇ ನಟ ಶರತ್ ಕುಮಾರ್, ಎಐಎಡಿಎಂಕೆ ಟಿಕೆಟ್ನಲ್ಲಿ ಸ್ಪರ್ಧಿಸಿ 16 ಸಾವಿರ ಮತಗಳಿಂದ ಪರಾಭವಗೊಂಡರು. ವಿಸಿಕೆ ಮುಖಂಡ ತ್ರಿರುಮವಲವನ್ ಜಿದ್ದಾಜಿದ್ದಿ ಹೋರಾಟದಲ್ಲಿ 87 ಮತಗಳಿಂದ ಸೋತರು. ಪಿಎಂಕೆ ಸಂಸ್ಥಾಪಕ ಅಬುಮನಿ ರಾಮದಾಸ್, 20 ಸಾವಿರ ಮತಗಳಿಂದ ಸೋಲು ಅನುಭವಿಸಿದರು. ಇದು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಗೆ ತೀವ್ರ ಮುಖಭಂಗ ತಂದಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ತಮಿಳಿಸಾಯಿ ಸೌಂದರರಾಜನ್ 45 ಸಾವಿರ ಮತಗಳ ಅಂತರದಿಂದ ಸೋತರು. ಎನ್ಟಿಕೆ ನಾಯಕ ಸೆಂಥಮಿಳನ್ ಸೀಮನ್ ಐದನೇ ಸ್ಥಾನಕ್ಕೆ ಕುಸಿದು ಠೇವಣಿ ಕಳೆದುಕೊಂಡರು.
ಇದು ಸೋತವರ ಕಥೆಯಾದರೆ, ಸೋಲಿನ ಭೀತಿಯಿಂದ ಸ್ಪರ್ಧೆಗೇ ಇಳಿಯದ ನಾಯಕರಲ್ಲಿ ಪಿಎಫ್ಡಬ್ಲ್ಯು ಮುಖಂಡ ವೈಕೊ, ತಮಿಳು ಮಾನಿಲಾ ಕಾಂಗ್ರೆಸ್ ಮುಖಂಡ ಜಿ.ಕೆ.ವಾಸನ್, ಪಿಟಿಸಿಸಿ ಅಧ್ಯಕ್ಷ ಇ.ವಿ.ಕೆ.ಎಸ್.ಇಳಂಗೋವನ್, ಸಿಪಿಎಂ ಮುಖಂಡ ರಾಮಕೃಷ್ಣನ್, ಆರ್.ನಲ್ಲಕನ್ನು ಸೇರಿದ್ದಾರೆ.