ಪಾಠ ಕಲಿತುಕೊಳ್ಳಲೀಗ ಸಕಾಲ
ಮಾನ್ಯರೆ,
ಇತ್ತೀಚೆಗೆ ಎಲ್ಲೆಡೆ ಅಸ್ತಿತ್ವ ಕಳೆದುಕೊಂಡಿದ್ದ ಕಾಂಗ್ರೆಸ್ಗೆ ಮೊನ್ನೆ ನಡೆದ ಅಸ್ಸಾಂ, ಕೇರಳದಂತಹ ಚುನಾವಣಾ ಫಲಿತಾಂಶವೂ ಚಿಂತೆಗೀಡು ಮಾಡಿದೆ. ಇತ್ತೀಚೆಗೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ಗಿಂತ ಪ್ರಾದೇಶಿಕ ಪಕ್ಷಗಳೇ ಭರ್ಜರಿ ಸಾಧನೆ ತೋರಿಸುತ್ತಿವೆ.
ಒಂದೊಮ್ಮೆ ದೇಶದೆಲ್ಲೆಡೆ ಬಲಿಷ್ಠವಾಗಿ ಮೆರೆದಾಡುತ್ತಿದ್ದ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಗೆ ಯಾರೂ ಎದುರಿಲ್ಲವಾಗಿತ್ತು. ಪಕ್ಷದಿಂದ ಯಾರು ಸ್ಪರ್ಧಿಸಿದರೂ ಜಯ ನಿಶ್ಚಿತವಾಗಿತ್ತು. ಆದರೆ ಈಗ ಪರಿಸ್ಥಿತಿಯೇ ಬೇರೆಯಾಗಿದೆ.
ಪಕ್ಷ ಎಲ್ಲೆಡೆ ನೆಲಕಚ್ಚುವಿಕೆಗೆ ಈಗಿನ ಕಾಲಘಟ್ಟಕ್ಕೆ ಹೊಂದದಂತಹ ಹಳಸಲು ಚುನಾವಣಾ ತಂತ್ರಗಳೋ ಅಥವಾ ಪಕ್ಷದೊಳಗಿದ್ದುಕೊಂಡೇ ಇರಿಯುವವರ ಕಾರ್ಯತಂತ್ರವೋ ಒಟ್ಟಾರೆ ಪಕ್ಷ ಏಳಿಗೆ ಕಾಣದಂತಾಗಿದೆ. ಆದ್ದರಿಂದ ಈಗಿರುವ ಕರ್ನಾಟಕವನ್ನಾದರೂ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳಬೇಕಾದರೆ ಕಠಿಣ ಕಾರ್ಯತಂತ್ರ ರೂಪಿಸಬೇಕಾಗಿದೆ. ಪಕ್ಷದ ಆಯಕಟ್ಟಿನ ಜಾಗದಲ್ಲಿ ಸಮರ್ಥರನ್ನು ನೇಮಿಸಿ ಪಕ್ಷಕ್ಕೆ ಬಲತುಂಬಬೇಕಾಗಿದೆ. ಎಲ್ಲಕ್ಕಿಂತ ಮೊದಲು ಪಕ್ಷದೊಳಗಿರುವವರ ನಡುವಿನ ವೈಮನಸ್ಯ ಸರಿಹೋಗಬೇಕಾಗಿದೆ. ಒಬ್ಬರನ್ನೊಬ್ಬರು ಕಾಲೆಳೆಯುವುದರಿಂದ ತಾವು ಅಧೋಗತಿಗೆ ಇಳಿಯುವುದಲ್ಲದೆ ಪಕ್ಷವೂ ನಿರ್ನಾಮಗೊಳ್ಳುತ್ತದೆ. ಆದ್ದರಿಂದ ಮೊನ್ನೆಯ ಫಲಿತಾಂಶದಿಂದ ಪಾಠ ಕಲಿತು ಚೇತರಿಸಿಕೊಳ್ಳಲು ರಾಜ್ಯ ಕಾಂಗ್ರೆಸ್ಗಿದು ಸಕಾಲ.





