ಹೆರಿಗೆ ವೇಳೆ ಸಾವನ್ನಪ್ಪಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ಡಿಸಿ ಎಚ್ಚರಿಕೆ
ಮಂಗಳೂರು, ಮೇ 20: ಜಿಲ್ಲೆಯಲ್ಲಿ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಸಾವನ್ನಪ್ಪುವ ಪ್ರಕರಣ ಸಂಭವಿಸಿದರೆ, ಗರ್ಭಿಣಿಯರ ಆರೈಕೆಗೆ ಸಂಬಂಧಪಟ್ಟಂತೆ ಕರ್ತವ್ಯಲೋಪ ಎಸಗುವ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಹೇಳಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗರ್ಭಿಣಿಯರು ಸಾವನ್ನಪ್ಪುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಗರ್ಭವತಿ ಆದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಗರ್ಭಿಣಿಗೆ ಸಮಯಕ್ಕೆ ಸರಿಯಾಗಿ ಔಷಧ, ವೈದ್ಯರ ತಪಾಸಣೆ, ಸ್ಕಾನಿಂಗ್ ಮಾಡುವ ಬಗ್ಗೆ ಮಾಹಿತಿ ನೀಡಿ ಅದನ್ನು ಕಡ್ಡಾಯವಾಗಿ ಮಾಡಿಸಬೇಕು. ಒಂದು ವೇಳೆ ಅದನ್ನು ಅವರು ನಿರಾಕರಿಸಿದರೆ ಅವರ ಮನೆಯವರ ಮೂಲಕ ಪತ್ರವನ್ನು ಪಡೆದುಕೊಳ್ಳಬೇಕು. ಪ್ರತಿಯೊಂದನ್ನು ದಾಖಲೀಕರಣ ಮಾಡಿಟ್ಟಿರಬೇಕು. ಮುಂದಿನ ದಿನಗಳಲ್ಲಿ ಯಾವುದೇ ಗರ್ಭಿಣಿ ಸಾವನ್ನಪ್ಪಿದ ಪ್ರಕರಣ ನಡೆದರೆ ಅವರ ದಾಖಲೆಯನ್ನು ನೋಡಿ ಅದರಲ್ಲಿ ಅಧಿಕಾರಿಗಳು ತಪ್ಪೆಸಗಿದ್ದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಪುತ್ತೂರು ಸಹಾಯಕ ಆಯುಕ್ತ ರಾಜೇಂದ್ರ ಮಾತನಾಡಿ, ಗರ್ಭಿಣಿಯರು ಔಷಧಿಗಳನ್ನು, ಇಂಜೆಕ್ಷನ್ಗಳನ್ನು, ಸ್ಕಾನಿಂಗನ್ನು ಕ್ರಮಬದ್ಧವಾಗಿ ಮಾಡಿದ್ದಾರೆಯೇ? ಎಂಬ ಬಗ್ಗೆ ಪರಿಶೀಲನೆಯನ್ನು ಸಂಬಂಧಪಟ್ಟವರು ಮಾಡುತ್ತಿರಬೇಕು. ಇದು ತಪ್ಪಿದರೆ ಅದನ್ನು ಹೆಚ್ಚಿನ ಅಪಾಯವಿರುವ ಪ್ರಕರಣವೆಂದು ಪರಿಗಣಿಸಬೇಕು ಎಂದು ಹೇಳಿದರು.ಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ಮಾತನಾಡಿ, ಜಿಲ್ಲೆಯಲ್ಲಿ ಗರ್ಭಿಣಿಯರಲ್ಲಿ ಹೆಚ್ಚಿನ ಅಪಾಯವಿರುವ ಪ್ರಕರಣ ಕಂಡುಬಂದರೆ ಅವರನ್ನು ಆಸ್ಪತ್ರೆಗೆ ಸಿಬ್ಬಂದಿಯೇ ಕೊಂಡು ಹೋಗಬೇಕು. ಈ ಮೂಲಕ ಗರ್ಭಿಣಿ ಸಾವು ಪ್ರಕರಣವನ್ನು ತಡೆಗಟ್ಟಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಪಿ.ಐ. ಶ್ರೀವಿದ್ಯಾ, ವೆನ್ಲಾಕ್ ಆಸ್ಪತ್ರೆ ಸರ್ಜನ್ ರಾಜೇಶ್ವರಿ ಮೊದಲಾದ ವರು ಉಪಸ್ಥಿತರಿದ್ದರು.