ಪುತ್ತೂರು: ಸರಣಿ ಮನೆಕಳ್ಳತನ ನಡೆಸಿದ್ದ ಕುಖ್ಯಾತ ಕಳ್ಳ ಪೊಲೀಸರ ಬಲೆಗೆ

ಪುತ್ತೂರು, ಮೇ 21: ಕಳೆದ ಹಲವು ಸಮಯಗಳಿಂದ ಪುತ್ತೂರು ನಗರದಲ್ಲಿ ಸರಣಿ ಕಳ್ಳತನ ನಡೆಯುತ್ತಿದ್ದು, ನಗರದ ವಿವಿಧ ಕಡೆಗಳಲ್ಲಿ 7 ಮನೆಗಳಲ್ಲಿ ಕಳ್ಳತನ ನಡೆಸಿದ್ದ ಕೇರಳ ಮೂಲದ ಕುಖ್ಯಾತ ಕಳ್ಳನನ್ನು ನಗರ ಪೊಲೀಸರು ಬಂಧಿಸಿ ಆತನಿಂದ ಕಳವು ನಡೆಸಿದ ಕೆಲವು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೇರಳ ರಾಜ್ಯದ ಕಾಞಂಗಾಡ್ ಮುರಿಯನಾವಿ ಎಂಬಲ್ಲಿನ ನಿವಾಸಿ ಪೊನ್ನುವೇಲು ಎಂಬವರ ಪುತ್ರ ತಂಗರಾಜನ್(64) ಎಂಬಾತನೇ ಈ ಕಳ್ಳತನ ನಡೆಸಿದ ಆರೋಪಿ.
ಮೇ 20ರಂದು ಪುತ್ತೂರಿನ ತೆಂಕಿಲದ ಶಿವನಗರ ಎಂಬಲ್ಲಿ ಮಧ್ಯಾಹ್ನ ಹೊತ್ತಿಗೆ ನಡೆದುಕೊಂಡು ಹೋಗುತ್ತಿದ್ದ ತಂಗರಾಜನನ್ನು ಸಂಶಯದ ಮೇರೆಗೆ ಪೊಲೀಸರು ವಿಚಾರಿಸಿದಾಗ ಸರಣಿ ಕಳ್ಳತನಗಳ ರೂವಾರಿ ಈತನೇ ಎಂಬುದು ಬೆಳಕಿಗೆ ಬಂದಿದೆ. ತಂಗರಾಜನ್ ಬಂಧನದ ಮೂಲಕ ಭಾರೀ ಪ್ರಮಾಣದ ಕಳವು ಜಾಲ ಬೆಳಕಿಗೆ ಬಂದಂತಾಗಿದೆ.
ಆರೋಪಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 8 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಕಳೆದ ವಾರ ನಗರದ ನ್ಯಾಯವಾದಿ ಕೆ.ಆರ್. ಆಚಾರ್ಯರ ಮನೆಯಿಂದ ಕಳವು ಮಾಡಿದ್ದ 25,000 ರೂ. ವೌಲ್ಯದ ಬೆಳ್ಳಿಯ ಸೊತ್ತುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.
ಜನವರಿಯಿಂದೀಚೆಗೆ ಪುತ್ತೂರಿನಲ್ಲಿ ಏಳು ಕಳವು ಪ್ರಕರಣಗಳು ನಡೆದಿದ್ದು, ಎಲ್ಲವನ್ನೂ ತಂಗರಾಜನ್ ಏಕಾಂಗಿಯಾಗಿ ಮಾಡಿರುವುದು ಪ್ರಾಥಮಿಕ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಪೈಕಿ ಬಹುತೇಕ ಕಳ್ಳತನ ಪ್ರಕರಣಗಳು ಶನಿವಾರ ರಾತ್ರಿ ಹೊತ್ತು ನಡೆದಿದ್ದು, ವಾರಾಂತ್ಯದಲ್ಲಿ ಮನೆ ಮಾಲೀಕರು ದೂರದ ಊರುಗಳಿಗೆ ಹೋಗುವ ಪರಿಪಾಠವನ್ನು ಅಧ್ಯಯನ ಮಾಡಿ ಅದೇ ಮನೆಗಳನ್ನು ಹುಡುಕಿ ಈತ ಕಳವು ಮಾಡುತ್ತಿದ್ದ.
ಪುತ್ತೂರಿನ ಕೃಷ್ಣ ಭಟ್, ದಿವಾಕರ ನಿಡ್ವಣ್ಣಾಯ, ಡಾ. ಸುರೇಶ್ ಪುತ್ತೂರಾಯ, ಕುಡ್ಗಿ ಪ್ರಭಾಕರ ಶೆಣೈ, ಡಾ.ಸುಬ್ರಹ್ಮಣ್ಯ ಭಟ್, ಹಾರಾಡಿಯಲ್ಲಿರುವ ಶಿಕ್ಷಕ ಚಂದ್ರಶೇಖರರ ಮನೆ ಹೀಗೆ 7 ಮನೆಗಳಿಂದ ಈತ ಕಳವು ಮಾಡಿದ್ದ. ಕಳವು ಮಾಡಿದ ಸೊತ್ತುಗಳನ್ನು ವಶಪಡಿಸಿಕೊಳ್ಳುವತ್ತ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ತನ್ನ 16ನೆ ವರ್ಷ ವಯಸ್ಸಿನಲ್ಲಿ ಕಳ್ಳತನಕ್ಕಿಳಿದ ತಂಗರಾಜನ್ ವಿರುದ್ಧ ಉಡುಪಿ, ಕುಶಾಲನಗರ, ಕುಂದಾಪುರ ಮತ್ತು ಕೇರಳದಲ್ಲಿ ಕೇಸುಗಳು ದಾಖಲಾಗಿವೆ. 2011ರಲ್ಲಿ ಉಡುಪಿಯಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದ ಈತ 4 ವರ್ಷ ಜೈಲಿನಲ್ಲಿದ್ದ. ಬಳಿಕ 2015ರಲ್ಲಿ ಕೇರಳದಲ್ಲೂ ಒಮ್ಮೆ ಸಿಕ್ಕಿ ಬಿದ್ದಿದ್ದು, ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದ. ಕಳ್ಳತನದ 28 ಪ್ರಕರಣಗಳು ಈಗಲೂ ಈತನ ವಿರುದ್ಧ ವಿಚಾರಣೆಯಲ್ಲಿದೆ.
64 ವರ್ಷ ಪ್ರಾಯದ ತಂಗರಾಜನ್ ಮೊಬೈಲ್ ಬಳಸುವುದಿಲ್ಲ. ಇದರಿಂದಾಗಿಯೇ ಈತನನ್ನು ಹಿಡಿಯುವುದು ಪೊಲೀಸರಿಗೆ ಬಹುದೊಡ್ಡ ಸವಾಲಾಗಿತ್ತು. ಬೆರಳಚ್ಚು ಬಿದ್ದರೆ ಪೊಲೀಸರಿಗೆ ನೆರವಾಗುತ್ತದೆ ಎಂಬ ಕಾರಣಕ್ಕಾಗಿ ಬಟ್ಟೆಯಿಂದ ಕೈಯ್ಯನ್ನು ಸುತ್ತಿಕೊಳ್ಳುತ್ತಿದ್ದ ಹಾಗೂ ತಾನು ಮುಟ್ಟಿದ ಜಾಗವನ್ನು ಬಟ್ಟೆಯಿಂದ ಒರೆಸುತ್ತಿದ್ದ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.
ಬಂಧನ ಕಾರ್ಯಾಚರಣೆಯಲ್ಲಿ ಪುತ್ತೂರು ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಎಸ್ಸೈ ಅಬ್ದುಲ್ ಖಾದರ್, ಹೆಡ್ಕಾನ್ಸ್ಟೇಬಲ್ಗಳಾದ ಸ್ಕರಿಯ, ನಾರಾಯಣ್, ದಾಮೋದರ್, ಕಾನ್ಸ್ಟೇಬಲ್ಗಳಾದ ಶರೀಫ್, ಪ್ರಶಾಂತ್ ಶೆಟ್ಟಿ, ಉದಯ, ಕೃಷ್ಣಪ್ಪ ಮುಂತಾದವರು ಭಾಗವಹಿಸಿದ್ದರು. ನಿರಂತರ ನಗರದಲ್ಲಿ ಕಳ್ಳತನ ನಡೆಯುತ್ತಿದ್ದ ಕಾರಣ ಪೊಲೀಸರು ಪ್ರತಿ ವಾರಾಂತ್ಯದಲ್ಲಿ ರಾತ್ರಿ ಗಸ್ತು ಬಿಗಿಗೊಳಿಸಿದ್ದರು. ಇದಕ್ಕಾಗಿಯೇ 9 ತಂಡ ರಚಿಸಿಕೊಂಡಿದ್ದರು.
ನಗದು ಪುರಸ್ಕಾರ: ಸರಣಿ ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಕಳ್ಳನನ್ನು ಹಿಡಿದ ಪುತ್ತೂರು ಪೊಲೀಸರ ಕಾರ್ಯವನ್ನು ಜಿಲ್ಲಾ ಎಸ್ಪಿ ಅಭಿನಂದಿಸಿದ್ದಾರೆ. ಪೊಲೀಸ್ ತಂಡಕ್ಕೆ ನಗದು ಪಾರಿತೋಷಕ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.







