ಶೀಘ್ರದಲ್ಲೇ ಮೋದಿ ಸಂಪುಟ ಪುನಾರಚನೆ
ಹೊಸದಿಲ್ಲಿ, ಮೇ 21: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಸಂಜೆ ಒಂದು ಗಂಟೆ ಕಾಲ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಜೊತೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೇ ಸಂಪುಟ ಪುನಾರಚನೆಯ ಮಾಡುವ ಕುರಿತಂತೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಈಗಾಗಲೇ ನಡೆದಿರುವ ವಿಧಾನಸಭಾ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಮೋದಿಯವರು ಉದ್ದೇಶಿತ ಸಂಪುಟ ಬದಲಾವಣೆ ಬಗ್ಗೆಯೂ ಚರ್ಚಿಸಿದರು ಎಂದು ತಿಳಿದುಬಂದಿದೆ.
ಇತ್ತೀಚಿನ ಚುನಾವಣೆಯಲ್ಲಿ ಸ್ಥಳೀಯ ಮುಖಂಡರನ್ನೇ ಪ್ರಚಾರಕ್ಕೆ ಅವಲಂಬಿಸಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲ ವಾರಗಳಲ್ಲಿ ಪಕ್ಷದ ಸಂಘಟನೆಯಲ್ಲೂ ಅಗತ್ಯ ಬದಲಾವಣೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ. ಕೇಂದ್ರ ಸಚಿವ ಸಂಪುಟದಲ್ಲಿ ನಡೆಸಲು ಉದ್ದೇಶಿಸಿರುವ ಬದಲಾವಣೆಗಳ ವೇಳೆಯೇ ಇದನ್ನು ಕೂಡಾ ಘೋಷಿಸ ಲಾಗುವುದು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕೇಂದ್ರ ಕ್ರೀಡಾ ಖಾತೆ ಸಚಿವ ಸಬರಾನಂದ ಸೊನೊವಾಲ್ ಅವರು ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಸಚಿವ ಸಂಪುಟದಲ್ಲಿ ಹೊಸಮುಖಕ್ಕೆ ಅವಕಾಶ ಸಿಗಲಿದೆ.ಮುಂದಿನ ವರ್ಷ ಚುನಾವಣೆ ನಡೆಯುವ ಗುಜರಾತ್ನಲ್ಲಿ ಕೂಡಾ 18 ವಷರ್ಗಳ ಬಿಜೆಪಿ ಆಡಳಿತದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಸಮರ್ಪಕವಾಗಿ ನಿಭಾಯಿಸುವ ಸಲುವಾಗಿ, ಅಗತ್ಯ ಬದಲಾವಣೆಗೂ ಪಕ್ಷ ಮುಂದಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಗುಜರಾತ್ನ ಬರ ಪರಿಸ್ಥಿತಿ ಬಗ್ಗೆ ಮಾತನಾಡಿದ್ದು, ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗೆಗಿನ ಯಾವ ಚರ್ಚೆಯೂ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಛತ್ತೀಸ್ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಹೊಸ ಪಾತ್ರದ ಬಗ್ಗೆ ಕೂಡಾ ಪಕ್ಷದ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಮೂಲಗಳು ಹೇಳಿವೆ. ಇದರ ಜತೆಗೆ ಕೇಂದ್ರ ಸಂಪುಟದ ಕೆಲ ಹಿರಿಯ ಸಚಿವರ ಭವಿಷ್ಯದ ಬಗ್ಗೆಯೂ ಸಂಶಯಗಳು ಕೇಳಿಬರುತ್ತಿವೆ. ಆದರೆ ಇದು ಪ್ರಧಾನಿ ವಿವೇಚನೆಗೆ ಬಿಟ್ಟ ವಿಚಾರ ಎಂದು ಮೂಲಗಳು ಹೇಳಿವೆ.
ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಕೇರಳ ಚುನಾವಣೆಯ ಸಾಧನೆಯಿಂದ ಪಕ್ಷಕ್ಕೆ ವಿಶೇಷ ಹುಮ್ಮಸ್ಸು ಬಂದಿದೆ. ಅಸ್ಸಾಂನಲ್ಲಿ ಸ್ಥಳೀಯ ಮುಖ ಇದ್ದರೆ, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೂಡಾ ಅಮಿತ್ ಶಾ ಹಾಗೂ ಮೋದಿಯನ್ನು ಪ್ರಚಾರಕ್ಕೆ ಅತಿಯಾಗಿ ಅವಲಂಬಿಸಿರಲಿಲ್ಲ. ಹೆಚ್ಚಾಗಿ ಸ್ಥಳೀಯ ನಿರ್ಧಾರಕ್ಕೇ ಒತ್ತು ನೀಡಲಾಗಿದ್ದು, ಸಮಗ್ರ ಕಾರ್ಯತಂತ್ರದ ಅನುಷ್ಠಾನಕ್ಕೆ ಮಾತ್ರ ಮಾರ್ಗದರ್ಶನ ನೀಡಲಾಗಿತ್ತು.
ಬಿಜೆಪಿಯ ಹೊಸ ಪದಾಧಿಕಾರಿಗಳ ಪಟ್ಟಿ ಸಿದ್ಧವಾಗಿದ್ದು, ಜೂನ್ 11 ಮತ್ತು 12ರಂದು ನಡೆಯುವ ಪಕ್ಷದ ಕಾರ್ಯಕಾರಿ ಸಮಿತಿ ಸಭೆಗೆ ಮುನ್ನ ಇದನ್ನು ಘೋಷಿಸುವ ನಿರೀಕ್ಷೆ ಇದೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರಕಾರ ಹಾಗೂ ಪಕ್ಷದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.