ನಿತೀಶ್ರಿಗೆ ಸವಾಲೆಸೆದ ತಸ್ಲೀಮುದ್ದೀನ್ಗೆ ಆರ್ಜೆಡಿಯಿಂದ ನೋಟಿಸ್!
ಹೊಸದಿಲ್ಲಿ, ಮೇ 22: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಆರ್ಜೆಡಿ ತನ್ನ ಸಂಸದನಿಗೆ ಕಾರಣ ಕೇಳಿ ನೋಟಿಸ್ ಜಾರಿಮಾಡಿದೆ. ಇತ್ತೀಚೆಗೆ ಬಿಹಾರದ ಅಧಿಕಾರರೂಢ ಜೆಡಿಯು ಮತ್ತು ಆರ್ಜೆಡಿ ನಡುವೆ ಟೀಕಾಪ್ರಹಾರ ಬಿರುಸಿನಿಂದ ನಡೆಯುತ್ತಿದೆ. ಶುಕ್ರವಾರ ಆರ್ಜೆಡಿಯ ಮೂವರು ನಾಯಕರಾದ ತಸ್ಲಿಮುದ್ದೀನ್, ಪ್ರಭುನಾಥ ಸಿಂಗ್ ಮತ್ತು ರಘುವಂಶ್ ಸಿಂಗ್ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಿಕೃತ್ಯಗಳನ್ನು ಮುಂದಿಟ್ಟು ನಿತೀಶ್ರನ್ನು ಟೀಕಿಸಿದ್ದರು. ತಸ್ಲಿಮುದ್ದೀನ್ ಶನಿವಾರ ನಿತೀಶ್ ದುರ್ಬಲ ವ್ಯಕ್ತಿಯೆಂದು ಆರೋಪಿಸಿದ್ದರು. ಅವರಿಂದಾಗಿ ರಾಜ್ಯದ ಕಾನೂನು ವ್ಯವಸ್ಥೆ ಕೆಟ್ಟಿದೆ. ರಾಜ್ಯವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುತ್ತಿಲ್ಲ. ಇನ್ನು ದೇಶಕ್ಕೆ ನೇತೃತ್ವವವನ್ನು ಹೇಗೆ ನೀಡಬಲ್ಲರು ಎಂದು ಅವರು ಹೇಳಿದ್ದರು. ಆದರೆ ಈ ಟೀಕೆಗೆ ಜೆಡಿಯು ಉಗ್ರವಾಗಿ ಪ್ರತಿಕ್ರಿಯಿಸಿತ್ತು.
ರಾಜ್ಯದ ಮಾಜಿ ಸಚಿವ ಜೆಡಿಯು ನಾಯಕ ಶ್ಯಾಮ್ ರಕ್ ನಿತೀಶ್ ವಿರುದ್ಧ ಟೀಕೆ ಮಾಡುತ್ತಿರುವ ಮೂವರು ನಾಯಕರೂ ಹತಾಶ ವ್ಯಕ್ತಿಗಳು ಎಂದು ಹೇಳಿದ್ದರು. ಜೆಡಿಯು ವಕ್ತಾರ ಸಂಜಯ್ ಸಿಂಗ್ ಆರ್ಜೆಡಿ ಈ ಮೂವರ ನಾಯಕರ ವಿರುದ್ಧ ಕ್ರಮಕೈಗೊಳ್ಳುವಂತೆ ವಿನಂತಿಸಿದ್ದರು.ಆದರೆ ಈ ಹೇಳಿಕೆ ಪ್ರತಿಹೇಳಿಕೆಗಳ ಬಗ್ಗೆ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಈವರೆಗೂಮೌನವಾಗಿದ್ದಾರೆ.