ರಸ್ತೆ ಸುರಕ್ಷತಾ ಮಸೂದೆ ಅಂಗೀಕಾರ ಆಗದಿರುವ ಬಗ್ಗೆ ವಿಷಾದವಿದೆ: ಗಡ್ಕರಿ
ಹೊಸದಿಲ್ಲಿ, ಮೇ 22: ರಸ್ತೆ ಸುರಕ್ಷತಾ ಮಸೂದೆ ಅಂಗೀಕಾರ ಆಗದಿರುವುದು ತನಗೆ ಬಹಳ ವಿಷಾದವಿದೆ ಎಂದು ಹೇಳಿರುವ ಭಾರತೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ವಾರ್ಷಿಕವಾಗಿ ಯುದ್ಧ ಮತ್ತು ಉಗ್ರ ಚಟುವಟಿಕೆಗಳು ಮತ್ತು ಸಾಂಕ್ರಾಮಿಕ ರೋಗಗಳಿಗಿಂತ ರಸ್ತೆ ದುರ್ಘಟನೆಗಳಲ್ಲಿ ಹೆಚ್ಚು ಜನರು ಸಾವನ್ನಪ್ಪುತ್ತಾರೆ ಎಂದು ತಿಳಿಸಿದ್ದಾರೆ ಮತ್ತು ಈ ಮಸೂದೆ ಅಂಗೀಕಾರವಾಗದಿರಲು ಸ್ಥಾಪಿತ ಹಿತಾಸಕ್ತಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ನೇರವಾಗಿ ಮಾತನಾಡುವ ಗಡ್ಕರಿ ಆ ಸ್ಥಾಪಿತ ಹಿತಾಸಕ್ತಿಗಳ ಹೆಸರನ್ನು ಹೇಳದಿದ್ದರೂ ಇವರು ಹೆದ್ದಾರಿ ವಿಭಾಗದಲ್ಲಿ ಪಾರದರ್ಶಕತೆ ಮತ್ತು ಕಂಪ್ಯೂಟರೀಕರಣವನ್ನು ವಿರೋಧಿಸುವವರಾಗಿದ್ದಾರೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಮೂವತ್ತು ಶೇಕಡಾ ಚಾಲನಾ ಪರವಾನಿಗೆ ಬೋಗಸ್ ಆಗಿದೆ ಮತ್ತು ಆರ್ಟಿಒದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದವರು ತಿಳಿಸಿದರು. ಈ ಮಸೂದೆ ಜಾರಿಯಿಂದ ಪಾರದರ್ಶಕತೆ ಉಂಟಾಗುವ ಕಾರಣ ಈ ಬಗ್ಗೆ ತಪ್ಪು ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಗಡ್ಕರಿ ಆರೋಪಿಸಿದರು. ಪ್ರಸ್ತಾಪಿತ ಕಾಯ್ದೆಯು ಸಂಚಾರ ನಿಯಮವನ್ನು ಉಲ್ಲಂಘಿಸುವವರಿಗೆ ದುಸ್ತರವಾಗಿ ಪರಿಣಮಿಸಲಿದೆ ಮತ್ತು ರಸ್ತೆ ಅಪಘಾತದಿಂದ ಸಾವನ್ನಪಿದರೆ ತಪ್ಪಿತಸ್ಥರಿಗೆ ರೂ. ಮೂರು ಲಕ್ಷ ದಂಡ ಮತ್ತು ಕನಿಷ್ಠ ಏಳು ವರ್ಷ ಕಾರಾಗೃಹ ಸೇರಿದಂತೆ ಇತರ ಅನೇಕ ಕಠಿಣ ಶಿಕ್ಷೆಗಳನ್ನು ಪ್ರಸ್ತಾಪಿಸಲಾಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕ್ಷೇತ್ರದ ಮೇಲೆ ಕೂಲಂಕಷ ನಿಗಾಯಿಡುವ ಮೂಲಕ ಪಾರದರ್ಶಕತೆ ತರಲಿದೆ ಮತ್ತು ಭ್ರಷ್ಟಾಚಾರವನ್ನು ತಡೆಯಲಿದೆ ಎಂದು ಗಡ್ಕರಿ ತಿಳಿಸಿದರು ಜೊತೆಗೆ ಪ್ರಸ್ತಾಪಿತ ಕಾಯ್ದೆಯು ಜಾಗತಿಕವಾಗಿ ಅತ್ಯುತ್ತಮ ಸಾರಿಗೆ ವ್ಯವಹಾರಗಳನ್ನು ಹೊಂದಿದ್ದು ರಸ್ತೆ ಅಪಘಾತಗಳನ್ನು ನಿಯಂತ್ರಿಸಲಿದೆ ಎಂದು ತಿಳಿಸಿದರು. ಭಾರತದಲ್ಲಿ ರಸ್ತೆ ಅಪಘಾತಗಳಿಂದ ಆರ್ಥಿಕತೆಗೆ ಉಂಟಾಗುವ ನಷ್ಟ ದೇಶದ ಜಿಡಿಪಿಯ ಮೂರು ಶೇಕಡಾ ಎಂದವರು ವಿವರಿಸಿದರು. ಭಾರತದಲ್ಲಿ ವಾರ್ಷಿಕ ಐದು ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತವೆ ಮತ್ತು ಇವುಗಳಲ್ಲಿ 1.5 ಲಕ್ಷ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಮತ್ತು ಮೂರು ಲಕ್ಷ ಮಂದಿ ಗಾಯಗೊಳ್ಳುತ್ತಾರೆ. ನಾನು ಈ ಕ್ಷೇತ್ರದ ಜವಾಬ್ದಾರಿ ಹೊತ್ತ ನಂತರ ನನ್ನನ್ನು ಕಾಡುವ ದೊಡ್ಡ ವಿಷಾದವೆಂದರೆ ನಮ್ಮ ಎಲ್ಲ ರೀತಿಯ ಪ್ರಯತ್ನಗಳ ನಂತರವೂ ರಸ್ತೆ ಸುರಕ್ಷತಾ ಮಸೂದೆ ಇನ್ನೂ ಅಡಕತ್ತರಿಯಲ್ಲಿದೆ. 1.5 ಲಕ್ಷ ಭಾರತೀಯರು ಮುಖ್ಯವಾಗಿ ಯುವಕರು ರಸ್ತೆ ಅಪಘಾತಗಳಲ್ಲಿ ಸಾಯುತ್ತಿರುವುದನ್ನು ನೋಡಲು ನನಗೆ ನೋವಾಗುತ್ತದೆ ಎಂದು ಗಡ್ಕರಿ ಹೇಳಿದರು. ಬಿಜೆಪಿ ಶಾಸಕಾಂಗಪಕ್ಷದ ನಾಯಕರಾಗಿ ಸೊನೊವಾಲ್ ಅವಿರೋಧ ಆಯ್ಕೆ
ಹೊಸದಿಲ್ಲಿ, ಮೇ 22: ಅಸ್ಸಾಂನ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ನಿಟ್ಟಿನಲ್ಲಿ ಸಬರಾನಂದ ಸೊನೊವಾಲ್ ಅವರ ದಾರಿ ಸುಗಮಗೊಂಡಿದ್ದು, ಅವರನ್ನು ರವಿವಾರದಂದು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ವಿಧಾನಸಭಾ ಚುನಾವಣೆಯ ನಂತರ ನಡೆದ ಮೊದಲ ಸಭೆಯಲ್ಲಿ ಬಿಜೆಪಿ ಶಾಸಕ ಹಿಮಂತಾ ಬಿಸ್ವಾ ಸರ್ಮಾ, ಸೊನೊವಾಲ್ ಅವರ ಹೆಸರನ್ನು ತಮ್ಮ ನಾಯಕನ ಸ್ಥಾನಕ್ಕೆ ಪ್ರಸ್ತಾಪಿಸಿದರು. ಶಾಸಕರಾದ ಪಿ ಫುಕನ್, ಅತುಲ್ ಬೋರಾ, ಅಂಗೂರ್ತಲಾ ಡೇಲಾ, ಬಬೇಶ್ ಕಲಿತಾ ಮತ್ತು ಎಸಿ ಜೈನ್ ಬೆಂಬಲಿಸಿದರು. ಬಿಜೆಪಿ ಕೇಂದ್ರ ವಿಭಾಗದಿಂದ ವೀಕ್ಷಕರಾಗಿ ಸಭೆಯಲ್ಲಿ ಹಾಜರಿದ್ದ ಕೇಂದ್ರ ಸಚಿವ ತಾವರ್ಚಂದ್ ಗೆಹ್ಲೊಟ್, ಸೊನೊವಾಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ತಿಳಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಈ ವೇಳೆ ಧನ್ಯವಾದ ಸೂಚಿಸಿದ ಸೊನೊವಾಲ್, ನಮ್ಮಲ್ಲಿ ಒಗ್ಗಟ್ಟಿನ ಸ್ಫೂರ್ತಿಯಿದೆ ಮತ್ತು ಜನರ ನಿರೀಕ್ಷೆಗಳನ್ನು ನಾವು ಈಡೇರಿಸಬೇಕಿದೆ ಎಂದು ತಿಳಿಸಿದರು