ಕ್ಷಮೆ ಯಾಚಿಸಿದ ವಿಮಾನಯಾನ ಸಂಸ್ಥೆ
ನಿಗದಿತ ಯಾನ ದಿಢೀರ್ ರದ್ದು; ಕಾನೂನು ಸಮರಕ್ಕಿಳಿದ ಬಂಟ್ವಾಳದ ಯುವಕ

ಮಂಗಳೂರು, ಮೇ 23: ಬೆಂಗಳೂರು - ಮಂಗಳೂರು ವಿಮಾನಯಾನವನ್ನು ದಿಢೀರ್ ರದ್ದುಗೊಳಿಸಿದ್ದಕ್ಕೆ ಬೆಂಗಳೂರಿನ ಖಾಸಗಿ ವಿಮಾನ ಕಂಪೆನಿಯೊಂದು ಬಂಟ್ವಾಳ ಮೂಲದ ಯುವಕನಲ್ಲಿ ಪತ್ರ ಬರೆದು ಕ್ಷಮೆ ಯಾಚಿಸಿದೆ ಎಂದು ವಿಜಯಕರ್ನಾಟಕ ವರದಿ ಮಾಡಿದೆ.
ಕಂಪೆನಿ ಬರೆದ ಕ್ಷಮೆಯಾಚನೆ ಪತ್ರದಿಂದ ತೃಪ್ತಿಪಟ್ಟುಕೊಳ್ಳದ ಪ್ರಯಾಣಿಕ, ಇದೀಗ ತನಗಾದ ಆರ್ಥಿಕ ನಷ್ಟವನ್ನು ಪ್ರಶ್ನಿಸಿ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ. ತಾಂತ್ರಿಕ ಕಾರಣದಿಂದಾಗಿ ವಿಮಾನ ಯಾನ ರದ್ದುಗೊಂಡಿರುವುದಾಗಿ ವಿಮಾನ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಆಶೀಕ್ ಕುಕ್ಕಾಜೆ ಎಂಬವರು ಮಾ. 27ರಂದು ಬೆಂಗಳೂರಿನಿಂದ ಮಂಗಳೂರು ಪ್ರಯಾಣಿಸಲು ಬೆಂಗಳೂರು ಮೂಲದ ಕಂಪೆನಿಯಿಂದ ಮಾ. 24 ರಂದು ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಮಾ. 27ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿದ ಆಶೀಕ್ ಅವರಿಗೆ ವಿಮಾನ ದಿಢೀರ್ ರದ್ದುಗೊಂಡಿರುವುದಾಗಿ ಕಂಪೆನಿ ಸಿಬ್ಬಂದಿ ಸೂಚಿಸಿದ್ದರು. ಕಂಪೆನಿಯ ಈ ನಿಲುವಿನಿಂದಾಗಿ ವೃದ್ಧರು, ಗರ್ಭಿಣಿಯರು, ಮಕ್ಕಳು ಕೂಡ ಸಂಕಷ್ಟಕ್ಕೆ ಸಿಲುಕಿದರು. ಪರ್ಯಾಯ ವಿಮಾನ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಲು ವಿನಂತಿಸಿದರೂ, ಕಂಪೆನಿ ಸಿಬ್ಬಂದಿ ಸಿರಾಕರಿಸಿದ್ದರು. ವಿಮಾನ ಪ್ರಯಾಣ ದಿಢೀರ್ ರದ್ದುಗೊಂಡ ಹಿನ್ನೆಲೆಯಲ್ಲಿ ಪರದಾಟ ನಡೆಸಿದ ಪ್ರಯಾಣಿಕರು ಏರ್ ಪೋರ್ಟ್ ನಿಂದ ವಾಪಸ್ ಬರಬೇಕಾಯಿತು ಎಂದು ಆಶೀಕ್ ಕುಕ್ಕಾಜೆ, ಕಂಪೆನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕರ ಈ ಸಮಸ್ಯೆಗೆ ಬಹುತೇಕ ಕಂಪೆನಿಗಳು ಹೀಗೆಯೇ ವರ್ತಿಸುತ್ತಿವೆ. ಪ್ರಯಾಣಿಕರ ಮೇಲೆ ಕಟ್ಟೆಚ್ಚರಗಳಂಥ ನಿಯಮಗಳನ್ನು ವಿಧಿಸುತ್ತಿರುವ ವಿಮಾನ ಕಂಪೆನಿಗಳಿಗೆ ತಮ್ಮ ಎಡವಟ್ಟುಗಳ ಅರಿವು ಆಗದೇ ಇರುವುದು ದುರಂತವಲದಲವೇ ಎಂದು ಆಶೀಕ್ ಕುಕ್ಕಾಜೆ ಪ್ರಶ್ನಿಸಿದ್ದಾರೆ. ತಾಂತ್ರಿಕ ದೋಷಗಳಿದ್ದಲ್ಲಿ ಪ್ರಯಾಣಿಕರಿಗೆ ಕರೆ ಮಾಡಿ ಪೂರ್ವ ಮಾಹಿತಿ ನೀಡಬೇಕು. ವಿಮಾನ ಪ್ರಯಾಣವನ್ನು ಯಾವುದೇ ಮುನ್ಸೂಚನೆ ಇಲ್ಲದೆ, ದಿಢೀರ್ ರದ್ದುಗೊಳಿಸಿರುವುದು ಸರಿಯೇ ಎಂದು ಆಶೀಕ್ ಪ್ರಶ್ನಿಸಿದ್ದಾರೆ.
ಆಶೀಕ್ ಬರೆದಿರುವ ಪತ್ರಕ್ಕೆ ಉತ್ತರಿಸಿದ ಕಂಪೆನಿ ಅಧಿಕಾರಿಗಳು, ತಾಂತ್ರಿಕ ಕಾರಣದಿಂದಾಗಿ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದ್ದು, ಈ ಸಮಸ್ಯೆ ಕಂಪೆನಿಯ ನಿಯಂತ್ರಣ ತಪ್ಪಿದೆ. ಈ ಬಗ್ಗೆ ಸಂಬಂಧಿತ ಟ್ರಾವೆಲ್ ಏಜೆಂಟರಿಗೆ ಇ-ಮೇಲ್ ಸಂದೇಶ ಕಳುಹಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಅವಘಡದಿಂದಾಗಿ ವಿಮಾನ ಯಾನ ರದ್ದುಗೊಳ್ಳುತ್ತದೆ. ಇದಕ್ಕೆ ಯಾವುದೇ ಪ್ರಯಾಣಿಕರು ತಕರಾರು ಮಾಡುವುದಿಲ್ಲ. ತಂತ್ರಾಂಶ ಮುಂದುವರಿದ ಈ ದಿನಗಳಲ್ಲಿ ವಿಮಾನ ಪ್ರಯಾಣಿಕರಿಗೆ ವೈಯಕ್ತಿಕ ಸಂದೇಶ ಕಳುಹಿಸಲು ಅಸಾಧ್ಯವಾದ ಮಾತಲ್ಲ. ಈ ವ್ಯವಸ್ಥೆಯನ್ನು ವಿಮಾನ ಕಂಪೆನಿಗಳು ಅನುಸರಿಸಲಿ ಎನ್ನುವುದನ್ನು ಆಗ್ರಹಿಸಿ ನ್ಯಾಯಾಲಯಕ್ಕೆ ಮೊರೆ ಹೋಗುವುದಾಗಿ ಆಶೀಕ್ ತಿಳಿಸಿದ್ದಾರೆ.
ವಿಮಾನ ಪ್ರಯಾಣಿಕರು 2 ತಾಸು ಮೊದಲೇ ಏರ್ ಪೋರ್ಟ್ ತಲುಪುತ್ತಾರೆ. ವಿಮಾನ ಕಂಪೆನಿಯ ನಿಯಮಗಳನ್ನು ಪ್ರಯಾಣಿಕರು ಉಲ್ಲಂಘಿಸಿದರೆ, ಅದಕ್ಕೆ ಪ್ರಯಾಣಿಕರನ್ನು ಹೊಣೆ ಮಾಡಲಾಗುತ್ತದೆ. ವಿಮಾನ ಪ್ರಯಾಣ ದಿಢೀರ್ ರದ್ದುಗೊಂಡರೆ ಅದಕ್ಕೂ ಪ್ರಯಾಣಿಕರನೇ ಹೊಣೆ ಮಾಡುವುದು ಸರಿಯೇ ? ಇದು ಒಂದಿಬ್ಬರ ಸಮಸ್ಯೆಯಲ್ಲ, ಸಾವಿರಾರು ಮಂದಿ ಎದುರಿಸುತ್ತಿರುವ ಸಮಸ್ಯೆ. ಈ ಬಗ್ಗೆ ಕೇಂದ್ರ ಸರಕಾರ ಕ್ರಮ ಜರುಗಿಸಬೇಕು.
ಆಶೀಕ್ ಕುಕ್ಕಾಜೆ, ವಿಮಾನ ಪ್ರಯಾಣಿಕ







