ಬಿಹಾರ: ಇನ್ನೋರ್ವ ಪತ್ರಕರ್ತನಿಗೆ ಹಲ್ಲೆ, ಅಪಹರಣ
ಪಾಟ್ನಾ,ಮೇ 23: ಸಿವಾನ್ನಲ್ಲಿ ಪತ್ರಕರ್ತನೋರ್ವನ ಹತ್ಯೆಯ ಬಳಿಕ ಪ್ರಜಾಪ್ರಭುತ್ವದ ನಾಲ್ಕನೆ ಅಂಗದ ರಕ್ಷಣೆಯ ಭರವಸೆ ನೀಡಿದ್ದ ಬಿಹಾರ ಸರಕಾರವು ರವಿವಾರ ಪ್ರಮುಖ ಹಿಂದಿ ದೈನಿಕ ‘ಪ್ರಭಾತ್ ಖಬರ್’ನ ಪತ್ರಕರ್ತನನ್ನು ಸ್ಥಳೀಯ ಗುತ್ತಿಗೆದಾರನೋರ್ವ ಥಳಿಸಿ ಅಪಹರಿಸಿರುವ ಹಿನ್ನೆಲೆಯಲ್ಲಿ ಇನ್ನೊಮ್ಮೆ ಮುಜುಗರಕ್ಕೊಳಗಾಗಿದೆ.
ತನ್ನ ಪರವಾಗಿ ಸುದ್ದಿಯನ್ನು ಬರೆಯಲು ನಿರಾಕರಿಸಿದ್ದಕ್ಕಾಗಿ ಸ್ಥಳೀಯ ಗುತ್ತಿಗೆದಾರ ಹಾಜಿ ಲದ್ದನ್ ಎಂಬಾತ ಪತ್ರಕರ್ತ ಹೇಮಂತ ಠಾಕೂರ್ ಅವರನ್ನು ರವಿವಾರ ಅರಾರಿಯಾ ಜಿಲ್ಲೆಯ ಅವರ ನಿವಾಸದಿಂದ ಅಪಹರಿಸಿದ್ದ.
ಠಾಕೂರ್ ಅವರನ್ನು ಅಪಹರಿಸಿ ಸದರ್ ಆಸ್ಪತ್ರೆಗೊಯ್ದಿದ್ದ ಲದ್ದನ್ ಅಲ್ಲಿಯ ಕೋಣೆಯೊಂದರಲ್ಲಿ ಅವರನ್ನು ಕೂಡಿಹಾಕಿದ್ದನಲ್ಲದೆ,ರೋಗಿಯೋರ್ವನ ಕೈಗೆ ಚಾಕು ನೀಡಿ ಠಾಕೂರ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಕೊಲ್ಲುವಂತೆ ಸೂಚಿಸಿದ್ದ ಎನ್ನಲಾಗಿದೆ. ಠಾಕೂರ್ ನೆರವಿಗಾಗಿ ಬೊಬ್ಬೆ ಹೊಡೆದಾಗ ಆಸ್ಪತ್ರೆಯ ಸಿಬ್ಬಂದಿ ಧಾವಿಸಿ ಬಂದು ಅವರನ್ನು ರಕ್ಷಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಹತ್ಯೆ ಮತ್ತು ಅವರಿಗೆ ಜೀವ ಬೆದರಿಕೆ ಪ್ರಕರಣಗಳು ಬಿಹಾರದಲ್ಲಿ ಹೆಚ್ಚುತ್ತಿವೆ. ಜೆಡಿಯು ಶಾಸಕ ಹಿರಾವಿಂದ್ ಅವರಿಂದ ತನಗೆ ಜೀವ ಬೆದರಿಕೆಯಿದೆಯೆಂದು ಕಳೆದ ವಾರ ಪತ್ರಕರ್ತ ರಾಜೇಶ್ ಸಿಂಗ್ ಲಹೇರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಇದಕ್ಕೂ ಮುನ್ನ ಸಿವಾನ್ ರೈಲ್ವೆ ನಿಲ್ದಾಣದ ಬಳಿ ಹಿಂದಿ ದೈನಿಕ ‘ಹಿಂದುಸ್ಥಾನ’ದ ಪತ್ರಕರ್ತ ರಾಜದೇವ್ ರಂಜನ್ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದರು.